ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ರಾಜ್ಯದಲ್ಲಿ ಇಂದಿನಿಂದ ಇಂಟರ್ನೆಟ್ ನಿಷೇಧವನ್ನು ತೆಗೆದುಹಾಕುವುದಾಗಿ ಶನಿವಾರ ಘೋಷಿಸಿದ್ದಾರೆ.
ಮೇ 3ರಂದು ಆರಂಭವಾದ ಜನಾಂಗೀಯ ಘರ್ಷಣೆಗಳು ಭುಗಿಲೆದ್ದ ನಂತರ ರಾಜ್ಯ ಸರ್ಕಾರವು ಇಂಟರ್ನೆಟ್ ಸೇವೆಗಳ ಮೇಲೆ ನಿಷೇಧ ಹೇರಿತ್ತು. ನಂತರ ಸರ್ಕಾರವು ನಿಷೇಧವನ್ನು ಭಾಗಶಃ ತೆಗೆದುಹಾಕಿತು, ಕೆಲವು ಷರತ್ತುಗಳೊಂದಿಗೆ ಬ್ರಾಡ್ಬ್ಯಾಂಡ್ ಸೇವೆಗಳು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿತು.
ರಾಜ್ಯದಾದ್ಯಂತ ಯಾರೆಲ್ಲಾ ಹೊಂದಿರುವ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೋ ಅವರೆಲ್ಲಾ ಅವುಗಳನ್ನು ಕಳೆದ 15 ದಿನಗಳ ಅವಧಿಯಲ್ಲಿ ಒಪ್ಪಿಸುವಂತೆ ಸರ್ಕಾರ ಮನವಿ ಮಾಡಿದೆ. ಇದೀಗ ಇಂಟರ್ನೆಟ್ ನಿಷೇಧವನ್ನು ತೆಗೆದುಹಾಕುವುದಾಗಿ ಪ್ರಕಟಣೆ ಹೊರಡಿಸಲಾಗಿದೆ.
ಶುಕ್ರವಾರ ಸಂಜೆ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ, ಈ 15 ದಿನಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಲ್ಲಿಸಬೇಕು ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದೆ.
”15 ದಿನಗಳ ನಂತರ ಕೇಂದ್ರ ಮತ್ತು ರಾಜ್ಯ ಎರಡೂ ಭದ್ರತಾ ಪಡೆಗಳು ರಾಜ್ಯದಾದ್ಯಂತ ಶೋಧ ಕಾರ್ಯಾಚರಣೆ ನಡೆಸಿ ಬಲವಂತವಾಗಿ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
”ಅಕ್ರಮ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ದುಷ್ಕರ್ಮಿಗಳು/ಗುಂಪುಗಳಿಂದ ಸುಲಿಗೆ, ಬೆದರಿಕೆ ಮತ್ತು ಅಪಹರಣ ಪ್ರಕರಣಗಳು ವರದಿಯಾಗಿವೆ. ಇದು ಗಂಭೀರ ವಿಷಯವಾಗಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ಇಂತಹ ಕಿಡಿಗೇಡಿಗಳು/ಗುಂಪುಗಳು ಚಟುವಟಿಕೆ ನಡೆಸಿದರೆ ಅವರುಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ” ಎಂದು ಹೇಳಿದೆ.
ಈ ಜನಾಂಗೀಯ ಸಂಘರ್ಷದಲ್ಲಿ ಈವರೆಗೆ 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಾಕಷ್ಟು ಜನರು ಗಾಯಗೊಂಡಿದ್ದಾರೆ ಮತ್ತು ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ನಾಲ್ಕು ತಿಂಗಳ ಬಿಕ್ಕಟ್ಟಿನ ಸಂದರ್ಭದಲ್ಲಿ 4,786 ಮನೆಗಳು ಮತ್ತು 386 ಧಾರ್ಮಿಕ ಸ್ಥಳಗಳನ್ನು ಸುಟ್ಟು ಮತ್ತು ಧ್ವಂಸಗೊಳಿಸುವುದು ಸೇರಿದಂತೆ 5,172 ಅಗ್ನಿಸ್ಪರ್ಶ ಪ್ರಕರಣಗಳಿವೆ. ರಾಜ್ಯಾದ್ಯಂತ ಒಟ್ಟು 5,668 ಶಸ್ತ್ರಾಸ್ತ್ರಗಳು ಕಳೆದು ಹೋಗಿವೆ. ಇಲ್ಲಿಯವರೆಗೆ ಭದ್ರತಾ ಪಡೆಗಳು 1,329 ಶಸ್ತ್ರಾಸ್ತ್ರಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿವೆ.
ಇದನ್ನೂ ಓದಿ: ಮಣಿಪುರ: ಭದ್ರತಾ ಅಧಿಕಾರಿಗಳ ವೇಷದಲ್ಲಿ ದುಷ್ಕರ್ಮಿಗಳಿಂದ ಸುಲಿಗೆ, ಬೆದರಿಕೆ