ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿರುವ ದೆಹಲಿಯ ಗಡಿಗಳಲ್ಲಿ ಕೇಂದ್ರ ಸರ್ಕಾರ ಇಂಟರ್ನೆಟ್ಗಳನ್ನು ಸ್ಥಗಿತಗೊಳಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯಲ್ಲಿ ದೆಹಲಿ-ಹರಿಯಾಣ ಗಡಿಭಾಗದದಲ್ಲಿ ಇಂಟರ್ನೆಟ್ ಪುನರಾರಂಭಿಸುವಂತೆ ಸರಕಾರಕ್ಕೆ ಆದೇಶಿಸಬೇಕು ಎಂದು ಕೋರಲಾಗಿದೆ.
ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಾಗಿದೆ. ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುವ ವಕೀಲರಾದ ಸನ್ಪ್ರೀತ್ ಸಿಂಗ್ ಮತ್ತು ಪುಷ್ಪೇಂದರ್ ಸಿಂಗ್ ಸರ್ಕಾರಕ್ಕೆ ಇಂಟರ್ನೆಟ್ ಪುನರಾರಂಭಿಸುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕ ಸುರಕ್ಷತೆ ಕಾರಣ- ದೆಹಲಿಯ ಗಡಿಗಳಲ್ಲಿ ಇಂಟರ್ನೆಟ್ ಬಂದ್ ಮುಂದುವರಿಕೆ
ಜನವರಿ 26 ರಂದು ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ನಡೆದ ಅಹಿತಕರ ಘಟನೆಯ ನಂತರ ಗೃಹ ಸಚಿವಾಲಯವು ಮೊದಲ ಬಾರಿಗೆ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು. ಅಂದಿನಿಂದ, ರೈತರು ಹೋರಾಟ ಮಾಡುತ್ತಿರುವ ಪ್ರದೇಶಗಳಲ್ಲಿ ನಿಯಮಿತವಾಗಿ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗುತ್ತಿದೆ.
ಕಳೆದ ನವೆಂಬರ್ನಿಂದ ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ರೈತರು, ಶನಿವಾರ(ಇಂದು) ಕೇಂದ್ರ ಸರ್ಕಾರದ ದಬ್ಬಾಳಿಕೆ ವಿರುದ್ದ ಪ್ರತಿಭಟಿಸಲು ಮೂರು ಗಂಟೆಗಳ ಚಕ್ಕಾ ಜಾಮ್ಗೆ ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಪ್ರತಿಭಟನೆ ನಡೆಸುತ್ತಿರುವ ಗಡಿಗಳಲ್ಲಿ ಇಂಟರ್ನೆಟ್ ಸ್ಥಗಿತವನ್ನು ಮುಂದುವರೆಸಿದ್ದು, ಅದು ಈ ದಿನದ ಅಂತ್ಯದವರೆಗೆ ಇರುತ್ತದೆ ಎಂದು ಆದೇಶವನ್ನು ಹೊರಡಿಸಿದೆ. ಈ ಆದೇಶವನ್ನು ಚಕ್ಕಾ ಜಾಮ್ಗಿಂತ ಒಂದು ದಿನ ಮುಂಚಿತವಾಗಿಯೆ ಹೊರಡಿಸಲಾಗಿತ್ತು.
ಇದನ್ನೂ ಓದಿ: ಹೋರಾಟ ನಿರತ ರೈತರ ಕರೆಗೆ ಓಗೊಟ್ಟ ಭಾರತ: ದೇಶದಾದ್ಯಂತ ’ಚಕ್ಕಾ ಜಾಮ್’ ಪ್ರತಿಭಟನೆಯ ಚಿತ್ರಣಗಳು