ಪಂಜಾಬ್… ಕಳೆದ ಸೆಪ್ಟಂಬರ್ನಿಂದ ದೇಶ ವಿದೇಶಗಳ ಗಮನ ಸೆಳೆಯುತ್ತಿರುವ ರಾಜ್ಯ. ಒಕ್ಕೂಟ ಸರ್ಕಾರ ವಿವಾದಾತ್ಮ ಕೃಷಿ ಕಾನೂನುಗಳನ್ನು ಜಾರಿಗೊಳಿಸಿದ ದಿನದಿಂದ ಪಂಜಾಬ್ನಲ್ಲಿ ಶುರುವಾದ ಹೋರಾಟ ದೆಹಲಿ ಚಲೋ ಮೂಲಕ ದೇಶಾದ್ಯಂತ ಐದು ತಿಂಗಳಲ್ಲಿ ಆವರಿಸಿದೆ.
ಪಂಜಾಬ್, ಹರಿಯಾಣದ ಜನರು ದೆಹಲಿ ಚಲೋಗೆ ಕರೆಕೊಟ್ಟರು. ಇದು ಇಂದು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ, ಕೇರಳ ಸೇರಿದಂತೆ ದೇಶಾದ್ಯಂತ ಹಲವು ರಾಜ್ಯಗಳಿಗೆ ಪಸರಿಸಿದೆ. ದೆಹಲಿಯ ಗಡಿಗಳಲ್ಲಿ ಪಂಜಾಬಿನ ಜನರು ತಮ್ಮ ಹೊಸ ಗ್ರಾಮಗಳನ್ನು ಸೃಷ್ಟಿಸಿದ್ದಾರೆ. ಇಂತಹ ಜನರ ಪಂಜಾಬಿನಲ್ಲಿ ಹೋರಾಟ ಹೇಗಿದೆ ಎಂಬುದನ್ನು ತಿಳಿಯಲು ಗೌರಿ ಮೀಡಿಯಾ ತಂಡ ಪಂಜಾಬಿಗೆ ಭೇಟಿ ನೀಡಿತು.
ಪಂಜಾಬ್ನಲ್ಲಿ ಕಳೆದ ಸೆಪ್ಟಂಬರ್ ತಿಂಗಳಿನಿಂದಲೂ ವಿವಾದಿತ ಕಾನೂನುಗಳ ವಿರುದ್ದ ಪ್ರತಿಭಟನೆ ನಡೆಯುತ್ತಲೇ ಇದೆ. ರಾಜ್ಯದ ಎಲ್ಲಾ ಕಡೆಗಳಲ್ಲಿ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಲಾಗಿದೆ. ರಿಲಯನ್ಸ್ ಕಂಪನಿಗೆ ಸೇರಿದ ಎಲ್ಲಾ ಪೆಟ್ರೋಲ್ ಬಂಕ್, ಮಾಲ್ಗಳಿಗೆ ಘೇರಾವ್ ಹಾಕಲಾಗಿದೆ. ರೈಲ್ ರೋಖೋ ಚಳುವಳಿ ಕೊಂಚ ಮಟ್ಟಿಗೆ ತಗ್ಗಿದ್ದು, ಈಗಲೂ ರೈಲ್ವೇ ಸ್ಟೇಷನ್ಗಳಲ್ಲಿ ಪ್ರತಿದಿನ ಪ್ರತಿಭಟನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಹೋರಾಟ ನಿರತ ರೈತರ ಕರೆಗೆ ಓಗೊಟ್ಟ ಭಾರತ: ದೇಶದಾದ್ಯಂತ ’ಚಕ್ಕಾ ಜಾಮ್’ ಪ್ರತಿಭಟನೆಯ ಚಿತ್ರಣಗಳು
ಕಳೆದ 5 ತಿಂಗಳಿನಿಂದಲೂ ಒಂದು ದಿನವೂ ತಪ್ಪದೇ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ರೈಲ್ವೇ ಸ್ಟೇಷನ್, ಮಾಲ್, ಟೋಲ್ ಪ್ಲಾಜಾಗಳ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ ಜನರು ಹೋರಾಟದಲ್ಲಿ ಭಾಗವಹಿಸುತ್ತಾರೆ. 3 ಗಂಟೆ ನಂತರ ಮನಗಳಿಗೆ ತೆರಳುತ್ತಾರೆ. ಆದರೆ ಕೆಲ ರೈತರು ಇಲ್ಲೇ ಟ್ರ್ಯಾಲಿಗಳು, ಟೆಂಟ್ಗಳನ್ನು ಹಾಕಿಕೊಂಡು ಉಳಿದುಕೊಂಡಿದ್ದಾರೆ.
ನಮಗೆ ಪಂಜಾಬ್ಗೆ ಕಾಲಿಡುತ್ತಿದ್ದಂತೆ ಆರಂಭದಲ್ಲೇ ಸ್ವಾಗತಿಸಿದ್ದು ರೈತ ಹೋರಾಟವನ್ನು ಬೆಂಬಲಿಸುತ್ತಾ ಸರ್ಕಲ್ಗಳಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟಿಸುತ್ತಿದ್ದ ಯುವಜನರು. ಹಲವು ರಸ್ತೆಗಳು ಸೇರುವ ಪಟಿಯಾಲದ ಮುಖ್ಯ ವೃತ್ತದಲ್ಲಿ ಪ್ರತಿದಿನ ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತದೆ.
ರಸ್ತೆಯಲ್ಲಿ ಓಡಾಡುವ ಪ್ರತಿ ವಾಹನದ ಮೇಲೂ ರೈತರ ಧ್ವಜಗಳು ವಿರಾಜಮಾನವಾಗಿವೆ. ಎಲ್ಲಾ ಅಂಗಡಿ ಮುಂಗಟ್ಟು, ಮನೆಗಳ ಮೇಲೆ ರೈತ ಹೋರಾಟದ ಘೋಷನೆಗಳು, ಧ್ವಜಗಳು ನಮ್ಮ ಕಣ್ಣು ಕುಕ್ಕುತ್ತಿದ್ದವು. ಎಕರೆಗಟ್ಟಲೆ ವಿಶಾಲವಾದ ಎಳೆಯ ಗೋದಿ ಹುಲ್ಲಿನ ಹಸಿರಿನ ಮಧ್ಯೆ ಅಲ್ಲಲ್ಲಿ ಕಾಣುವ ಮನೆಗಳು, ಮನೆಗಳ ಮೇಲೆ ಕಾಣುವ ರೈತ ಧ್ವಜಗಳು ಗಮನ ಸೆಳೆಯದೆ ಇರದೆ ಸಾಧ್ಯವೆ ಇಲ್ಲ.
ಇದನ್ನೂ ಓದಿ: ಬಾಲಿವುಡ್ನಲ್ಲಿರುವವರಿಗಿಂತ ಗಟ್ಟಿಯಾದ ಬೆನ್ನುಮೂಳೆಯಿದೆ – ಗ್ರೇಟಾ ಬಗ್ಗೆ ನಟಿ ರಮ್ಯಾ ಟ್ವೀಟ್
ಬರ್ನಾಲಾ, ಲೂದಿಯಾನ ಜಿಲ್ಲೆಯಲ್ಲಿ ರಸ್ತೆ ತಡೆ ಚಳುವಳಿಗೆ ನಾವು ಸಾಕ್ಷಿಯಾದೆವು. ಬರ್ನಾಲಾದ ರೈಲು ನಿಲ್ದಾಣದಲ್ಲಿ ಸೇರುತ್ತಿದ್ದ ರೈತರು ಹೆದ್ದಾರಿ ತಡೆಗಾಗಿ ಇಂದು (ಫೆಬ್ರವರಿ 6) 5 ಭಾಗಗಳಾಗಿ ವಿಭಜನೆಗೊಂಡಿದ್ದರು. ಬರ್ನಾಲಾ ಮತ್ತು ಲೂದಿಯಾನ ಹೆದ್ದಾರಿಯಲ್ಲಿ 5 ಕಡೆ ಹೆದ್ದಾರಿ ತಡೆ ನಡೆಸಲಾಗಿತ್ತು. ಮೆಹಾಲ್ ಕಲಾನ್ ಟೋಲ್ ಪ್ಲಾಜಾ ಬಂದ್ ಮಾಡಿ ಸಾವಿರಾರು ಮಂದಿ ಸೇರಿದ್ದರು. ಲೂದಿಯಾನದ ಜಗ್ರೂನ್ನಲ್ಲಿ ನೂರಾರು ಮಂದಿ ಹಾಡುಗಳನ್ನು ಹಾಡುತ್ತಾ ಪ್ರತಿಭಟನೆ ನಡೆಸಿದರು.
ಪಂಜಾಬ್ನಲ್ಲಿ ನಾವು ಗಮನಿಸಿದ ಮತ್ತೊಂದು ವಿಚಾರ ಹಾರ್ನ್ ಮಾಡಿ ಬೆಂಬಲ ನೀಡಿ ಎನ್ನುವುದು. ರಸ್ತೆಗಳಲ್ಲಿ, ಹೆದ್ದಾರಿಯ ವೃತ್ತಗಳಲ್ಲಿ ಪ್ರತಿಭಟನೆ ನಡೆಸುವ ರೈತ ಹೋರಾಟಗಾರರು, ಪ್ರತಿಭಟನೆಗೆ ಬೆಂಬಲ ನೀಡಲು ಹಾರ್ನ್ ಮಾಡಿ ಎಂದು ಘೋಷಿಸುತ್ತಾರೆ. ಕೆಲವೊಂದು ಕಡೆ ಭಿತ್ತಿಪತ್ರ ಪ್ರದರ್ಶಿಸುತ್ತಾರೆ. ಈ ಅಭಿಯಾನಕ್ಕೆ ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಾರೆ. ಒಂದೇ ಸಮನೆ ಐದು ನಿಮಿಷಗಳವರೆಗೂ ಹಾರ್ನ್ ಮಾಡಲಾಗುತ್ತದೆ.
ಇನ್ನು ಪಂಜಾಬ್ನಿಂದ ದೆಹಲಿಯ ಗಡಿಗಳಿಗೆ, ದೆಹಲಿಯ ಗಡಿಗಳಿಂದ ಪಂಜಾಬಿಗೆ ಓಡಾಡುವ ಟ್ರ್ಯಾಕ್ಟರ್, ಟ್ರ್ಯಾಲಿ, ಕಾರುಗಳು ರಸ್ತೆಯುದ್ದಕ್ಕೂ ಕಾಣಿಸುತ್ತಲೇ ಇರುತ್ತವೆ. ರಸ್ತೆಗಳಲ್ಲಿ ಘೋಷಣೆಗಳು ಸಾಮಾನ್ಯವಾಗಿ ಕೇಳಿಸುತ್ತವೆ. ಇನ್ನೊಂದು ಮುಖ್ಯ ವಿಷಯವೆಂದರೆ ದೆಹಲಿ ಪೊಲೀಸರಂತೆ ಇಲ್ಲಿನ ಪೊಲೀಸರು ಅತಿಯಾಗಿ ವರ್ತಿಸುತ್ತಿಲ್ಲ!
ಇದನ್ನೂ ಓದಿ: ಪೊಲೀಸರು ಮುಳ್ಳು ನೆಟ್ಟ ಜಾಗದಲ್ಲಿಯೇ ಹೂವಿನ ಗಿಡ ನೆಟ್ಟ ರೈತನಾಯಕ ರಾಕೇಶ್ ಟಿಕಾಯತ್!