ಸೌದಿ ಅರೇಬಿಯಾದ ರಿಯಾದ್ನಲ್ಲಿ ಶನಿವಾರ ನಡೆದ ಶೃಂಗಸಭೆಯಲ್ಲಿ ಇರಾನ್ ಮತ್ತು ಸೌದಿ ಅರೇಬಿಯಾ ನಾಯಕರು ಗಾಝಾ ಪಟ್ಟಿಯಲ್ಲಿ ತಕ್ಷಣದ ಕದನ ವಿರಾಮಕ್ಕೆ ಆಗ್ರಹಿಸಿದ್ದು, ಮಾನವೀಯ ನೆರವಿಗೆ ಸೂಚಿಸಿದ್ದಾರೆ. ಜೊತೆಗೆ ಯುದ್ಧ ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಅಂತರಾಷ್ಟ್ರೀಯ ಸಮುದಾಯವನ್ನು ದೂಷಿಸಿದ್ದಾರೆ.
ಗಾಝಾದ ಮೇಲಿನ ಇಸ್ರೇಲ್ನ ಯುದ್ಧದ ಬಳಿಕ ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಸೌದಿ ಅರೇಬಿಯಾಕ್ಕೆ ತೆರಳಿದ್ದಾರೆ. ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಇರಾನ್ ಅಧ್ಯಕ್ಷರೋರ್ವರು ಸೌದಿ ಅರೇಬಿಯಾಗೆ ಭೇಟಿ ನೀಡಿದ್ದಾರೆ. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಇಬ್ರಾಹಿಂ ರೈಸಿ ಅವರನ್ನು ಶೃಂಗಸಭೆಗೆ ಸ್ವಾಗತಿಸಿದ್ದಾರೆ.
ಶೃಂಗಸಭೆಯಲ್ಲಿ ರೈಸಿ ಅವರು, ಗಾಝಾದಲ್ಲಿ ನಾಗರಿಕರ ವಿರುದ್ಧ ಮಾಡುತ್ತಿರುವ ಅನ್ಯಾಯದ ಬಗ್ಗೆ ಅಂತರಾಷ್ಟ್ರೀಯ ಸಮುದಾಯ ಮೌನವಾಗಿದೆ ಎಂದು ಟೀಕಿಸಿದ್ದಾರೆ. ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಕದನ ವಿರಾಮವನ್ನು ವಿರೋಧಿಸುತ್ತವೆ, ಇದು ಹಮಾಸ್ನ ಮಿಲಿಟರಿ ವಿಭಾಗವನ್ನು ಮರುಸಂಘಟಿಸಲು ಅವಕಾಶ ನೀಡುತ್ತದೆ ಎಂದು ಅವರು ವಾದಿಸುತ್ತಾರೆ ಎಂದು ಹೇಳಿದ್ದಾರೆ.
ಇದಲ್ಲದೆ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ದಾಳಿಯನ್ನು ಉಲ್ಲೇಖಿಸಿ, ಇಸ್ರೇಲ್ನೊಂದಿಗೆ ಸಂಬಂಧವನ್ನು ಕಡಿದುಹಾಕಲು ಇಸ್ಲಾಮಿಕ್ ಸರ್ಕಾರಗಳಿಗೆ ಒತ್ತಾಯಿಸಿದ್ದಾರೆ. ಪ್ಯಾಲೆಸ್ತೀನಿಯಾದವರಿಗೆ ಹೆಚ್ಚಿನ ಬೆಂಬಲ ನೀಡುವಂತೆ ಅವರು ಕರೆ ನೀಡಿದ್ದಾರೆ. ಇಸ್ರೇಲ್ನ ಸೈನ್ಯಕ್ಕೆ ಭಯೋತ್ಪಾದಕ ಗುಂಪು ಎಂದು ಹೆಸರಿಸಲು ಇಸ್ಲಾಮಿಕ್ ದೇಶಗಳಿಗೆ ರೈಸಿ ಒತ್ತಾಯಿಸಿದ್ದಾರೆ.
ಈ ಬಿಕ್ಕಟ್ಟು ಇಸ್ರೇಲ್ ಮಾಡಿದ ಅಂತರಾಷ್ಟ್ರೀಯ ಕಾನೂನು ಉಲ್ಲಂಘನೆಗಳನ್ನು ಕೊನೆಗೊಳಿಸಲು ಭದ್ರತಾ ಮಂಡಳಿ ಮತ್ತು ಅಂತರಾಷ್ಟ್ರೀಯ ಸಮುದಾಯ ವೈಫಲ್ಯವಾಗಿರುವುದನ್ನು ತೋರಿಸುತ್ತದೆ ಎಂದು ಸೌದಿ ಕ್ರೌನ್ ಪ್ರಿನ್ಸ್ ಹೇಳಿದ್ದಾರೆ.
ಗಾಝಾ ಮೇಲೆ ಇಸ್ರೇಲ್ ಅ.7ರಂದು ಯುದ್ಧ ಘೋಷಣೆಯ ಬಳಿಕ ಗಾಝಾ ಪಟ್ಟಿಯಲ್ಲಿ ಮೃತರ ಸಂಖ್ಯೆ 11,078ಕ್ಕೆ ತಲುಪಿದೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಮೃತರಲ್ಲಿ 4,506 ಮಕ್ಕಳು, 3,027 ಮಹಿಳೆಯರು, 6,78 ವಯಸ್ಕರು ಸೇರಿದ್ದಾರೆ. ಇದೇ ವೇಳೆ 27,490ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಇಸ್ರೇಲ್ ದಾಳಿಯಿಂದ ನೆಲಸಮವಾದ ಕಟ್ಟಡಗಳ ಅವಶೇಷಗಳಡಿಯಲ್ಲಿ 1,500 ಮಕ್ಕಳು ಸೇರಿದಂತೆ 2,700 ಜನರು ಸಿಲುಕಿಕೊಂಡಿದ್ದಾರೆ. ಇಸ್ರೇಲ್ ಆಕ್ರಮಣಕ್ಕೆ 198 ವೈದ್ಯಾಧಿಕಾರಿಗಳು ಮೃತಪಟ್ಟಿದ್ದಾರೆ. 53 ಆಂಬ್ಯುಲೆನ್ಸ್ಗಳನ್ನು ಧ್ವಂಸಗೊಳಿಸಲಾಗಿದೆ. ಇಸ್ರೇಲ್ 135 ಆರೋಗ್ಯ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು 21 ಆಸ್ಪತ್ರೆಗಳು ಮತ್ತು 47 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಂದ್ ಮಾಡುವಂತಾಗಿದೆ ಎಂದು ಅಶ್ರಫ್ ಅಲ್-ಕುದ್ರಾ ಹೇಳಿದ್ದಾರೆ.
ಹಮಾಸ್ ಇಸ್ರೇಲ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 1,600 ಇಸ್ರೇಲ್ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. 200ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳಾಗಿ ಇಡಲಾಗಿದೆ.
ಗಾಝಾ ಮೇಲಿನ ಬಾಂಬ್ ದಾಳಿ ಹಾಗೂ ನಾಗರಿಕರ ಹತ್ಯೆಯನ್ನು ಇಸ್ರೇಲ್ ನಿಲ್ಲಿಸಬೇಕು ಎಂದು ಶುಕ್ರವಾರ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಹೇಳಿದ್ದರು. ಬಾಂಬ್ ದಾಳಿಗೆ ಯಾವುದೇ ಸಮರ್ಥನೆಗಳಿಲ್ಲ ಎಂದು ಹೇಳಿರುವ ಮ್ಯಾಕ್ರನ್, ಹಮಾಸ್ ದಾಳಿಯನ್ನು ಫ್ರಾನ್ಸ್ ಸ್ಪಷ್ಟವಾಗಿ ಖಂಡಿಸುತ್ತದೆ. ಇಸ್ರೇಲ್ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇದ್ದರೂ, ಗಾಝಾದಲ್ಲಿ ನಡೆಯುತ್ತಿರುವ ಬಾಂಬ್ ದಾಳಿಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದರು.
ಇದನ್ನು ಓದಿ: ಗುಜರಾತ್: ಹಝರತ್ ಶಹೀದ್ ದರ್ಗಾ ತೆರವಿಗೆ ಹೈಕೋರ್ಟ್ ತಡೆ