ಖ್ಯಾತ ಕೃಷಿ ವಿಜ್ಞಾನಿ ದಿವಂಗತ ಡಾ.ಎಂ.ಎಸ್ ಸ್ವಾಮಿನಾಥನ್ ಅವರಿಗೆ ನರೇಂದ್ರ ಮೋದಿ ಸರ್ಕಾರ ಭಾರತ ರತ್ನ ನೀಡಿರುವುದು ತನ್ನ ರೈತ ವಿರೋಧಿ ಧೋರಣೆಯನ್ನು ಮುಚ್ಚಿಡುವ ಪ್ರಯತ್ನವೇ? ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ-ಶರದ್ಚಂದ್ರ ಪವಾರ್ (ಎನ್ಸಿಪಿಎಸ್ಪಿ) ಭಾನುವಾರ ಪ್ರಶ್ನಿಸಿದೆ.
ಪ್ರಸ್ತುತ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಪ್ರಮುಖ ಬೇಡಿಕೆಗಳೆಂದರೆ ಸ್ವಾಮಿನಾಥನ್ ಅವರ ಸೂತ್ರದ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿ ಕಾನೂನು ಜಾರಿಗೊಳಿಸುವುದಾಗಿದೆ. ಆದರೆ, ಅದನ್ನು ಜಾರಿಗೆ ತರಲು ಕೇಂದ್ರ ಸಿದ್ಧವಿಲ್ಲ ಎಂದು ಶರದ್ ಪವಾರ್ ಬಣದ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಹೇಳಿದ್ದಾರೆ.
“ರೈತರ ಪ್ರತಿಭಟನೆ ಪ್ರಾರಂಭಿಸಿ ಎರಡು ವಾರ ಕಳೆದಿದೆ. ರೈತರು ದೆಹಲಿಗೆ ಪ್ರವೇಶಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುವುದಕ್ಕೆ ಸರ್ಕಾರ ತಡೆಯೊಡ್ಡಿದೆ. ರೈತರು 2020-21ರಲ್ಲೂ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದರು. ನಂತರ ರೈತರ ಬೇಡಿಕೆಯಂತೆ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿತ್ತು” ಎಂದು ಕ್ಲೈಡ್ ಕ್ರಾಸ್ಟೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಸ್ವಾಮಿನಾಥನ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಘೋಷಿಸಿರುವ ಕೇಂದ್ರ ಸರ್ಕಾರದ ನಿರ್ಧಾರವು, ಅವರ ರೈತ ವಿರೋಧಿ ನಿಲುವಿನಿಂದ ಗಮನವನ್ನು ಬೇರೆಡೆಗೆ ಸೆಳೆಯುವಂತಿದೆ ಎಂದು ಕ್ರಾಸ್ಟೊ ಆರೋಪಿಸಿದ್ದಾರೆ. ಸ್ವಾಮಿನಾಥನ್ಗೆ ಭಾರತ ರತ್ನ ನೀಡಿರುವ ಬಿಜೆಪಿಗೆ ನಿಜವಾಗಿಯೂ ಕಾಳಜಿ ಇದ್ದರೆ ರೈತರ ಕಲ್ಯಾಣಕ್ಕಾಗಿ ಅವರ ಎಂಎಸ್ಪಿ ಸೂತ್ರವನ್ನು ಕೂಡ ಜಾರಿಗೊಳಿಸಬೇಕು ಎಂದು ಕ್ರಾಸ್ಟೊ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ: ಇಂದು ರೈತರಿಂದ ಟ್ರ್ಯಾಕ್ಟರ್ ಮೆರವಣಿಗೆ, ದೆಹಲಿ-ನೋಯ್ಡಾ ಗಡಿಯಲ್ಲಿ ಭಾರಿ ಟ್ರಾಫಿಕ್ ಜಾಮ್