ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಸಹೋದರನ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿ, ಆತನ ಇಬ್ಬರು ಸಹಚರರು ಚೂಪಾದ ಆಯುಧಗಳಿಂದ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಕೊಟ್ಪುಟ್ಲಿ-ಬೆಹ್ರೋರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ತನ್ನ ಸಹೋದರನೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ಸಂತ್ರಸ್ತೆ ಬೆನ್ನಿಗೆ ಆರೋಪಿಗಳು ಗುಂಡು ಹಾರಿಸಿದ್ದು, ಪ್ರಸ್ತುತ ಜೈಪುರದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಗ್ಪುರ ಗ್ರಾಮದ ಪೊಲೀಸ್ ಠಾಣೆಯಿಂದ ಕೇವಲ 20 ಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ.
ಸ್ಥಳದಿಂದ ಪರಾರಿಯಾಗುವ ಮೊದಲು ಮೂವರು ಪುರುಷರು ಮಹಿಳೆ ಮತ್ತು ಆಕೆಯ ಸಹೋದರನ ಮೇಲೆ ಕೊಡಲಿಯಂತಹ ಆಯುಧವನ್ನು ಬಳಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅದೃಷ್ಟವಶಾತ್ ಬದುಕುಳಿದ ಅವರಿಗೆ, ತಲೆ, ಕಾಲುಗಳು, ಕೈಗಳು ಮತ್ತು ಭುಜಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಪೊಲೀಸರ ಪ್ರಕಾರ, ಆರೋಪಿಯ ಇಬ್ಬರು ಸಹಚರರಾದ ಮಹಿಪಾಲ್ ಗುರ್ಜರ್ ಮತ್ತು ರಾಹುಲ್ ಗುರ್ಜರ್ ಅವರನ್ನು ಬಂಧಿಸಲಾಗಿದೆ. ಘಟನೆ ನಂತರ, ಆರೋಪಿ ರಾಜೇಂದ್ರ ಯಾದವ್ ಜೈಪುರದ ಎಸ್ಎಂಎಸ್ ಆಸ್ಪತ್ರೆಯಲ್ಲಿ ತೀವ್ರ ಗಾಯಗಳೊಂದಿಗೆ ಕಂಡುಬಂದಿದ್ದಾನೆ. ಈ ಗಾಯಗಳು ಅಪಘಾತದಿಂದ ಉಂಟಾಗಿದೆಯೇ ಅಥವಾ ಆತ್ಮಹತ್ಯೆಯ ಪ್ರಯತ್ನವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಯಾದವ್ ರೈಲಿನ ಮುಂದೆ ನಿಂತು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ವರದಿಗಳು ಸೂಚಿಸುತ್ತವೆ, ಇದರಿಂದಾಗಿ ಆತ ತನ್ನ ಒಂದು ಕಾಲು ಕಳೆದುಕೊಂಡಿದ್ದಾನೆ.
24 ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆ ಆರೋಪಿ ರಾಜೇಂದ್ರ ಯಾದವ್ ವಿರುದ್ಧ ಜೂನ್ 2023 ರಲ್ಲಿ ಪ್ರಕರಣ ದಾಖಲಿಸಿದ್ದರು. ಆ ಸಮಯದಲ್ಲಿ ಯಾದವ್ ಅವರನ್ನು ಬಂಧಿಸಲಾಯಿತು. ನಂತರ, ಆತ ತನ್ನ ಕೆಲಸ ಕಳೆದುಕೊಂಡಿದ್ದ. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡ ಅವನು, ಪ್ರಕರಣವನ್ನು ಹಿಂಪಡೆಯುವಂತೆ ಸಂತ್ರಸ್ತೆಗೆ ಬೆದರಿಕೆ ಹಾಕಲು ಆರಂಭಿಸಿದ್ದ. ಆಕೆ ನಿರಾಕರಿಸಿದ್ದಕ್ಕೆ ಪ್ರತೀಕಾರವಾಗಿ ಇತ್ತೀಚಿನ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಯಾದವ್ ಸ್ಥಳೀಯ ರಾಜಕಾರಣಿಗಳೊಂದಿಗೆ ತೆಗೆಸಿಕೊಂಡಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ. ಅಪರಾಧಿಗಳು ಮತ್ತು ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಗಳ ನಡುವಿನ ಸಂಪರ್ಕದ ಬಗ್ಗೆ ಜನರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಇದನ್ನೂ ಓದಿ; ತಮಿಳುನಾಡಿನಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ; 26 ವರ್ಷದ ದಲಿತ ಯುವಕನ ಕೊಲೆ