ಗಾಜಾದಲ್ಲಿನ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ್ದು ಕನಿಷ್ಠ 195 ಪ್ಯಾಲೆಸ್ಟೀನ್ ನಾಗರಿಕರು ಮೃತಪಟ್ಟಿದ್ದಾರೆ, 120 ಜನ ನಾಪತ್ತೆಯಾಗಿದ್ದಾರೆ, ಅಲ್ಲದೆ 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಸರ್ಕಾರ ಹೇಳಿದೆ ಎಂದು ಗಾಜಾದಲ್ಲಿನ ಮಾಧ್ಯಮ ವರದಿ
ತಿಳಿಸಿದೆ.
ಗಾಜಾ ನಗರದ ಜಬಾಲಿಯಾದಲ್ಲಿದ್ದ ಬಹುದೊಡ್ಡ ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಕ್ಷಿಪಣಿ ಹಾಗೂ ಬಾಂಬ್ ದಾಳಿ ನಡೆಸಿದೆ. ಇಸ್ರೇಲ್ ವಾಯುಸೇನೆ ನಡೆಸಿದ ಭೀಕರ ವಾಯುದಾಳಿಯಲ್ಲಿ 195 ಪ್ಯಾಲೇಸ್ತೀನಿಯರು ಮೃತಪಟ್ಟಿದ್ದಾರೆ. 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಬಗ್ಗೆ ಮಾಹಿತಿ ನೀಡಿದ ಹಮಾಸ್ ಆಡಳಿತ ವಕ್ತಾರ ಹಝೀಮ್ ಖಾಸಿಮ್, ”ಇಸ್ರೇಲ್ ವಾಯು ದಾಳಿಯಿಂದ ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಗಾಯಾಳುಗಳ ಚಿಕಿತ್ಸೆಗೆ ಆಸ್ಪತ್ರೆಗಳ ಕಟ್ಟಡದ ಹೊರಭಾಗದಲ್ಲೇ ತಾತ್ಕಾಲಿಕ ಆಪರೇಷನ್ ಥಿಯೇಟರ್ ರಚಿಸಲಾಗಿದೆ. ಔಷಧಿಗಳ ಕೊರತೆ, ವಿದ್ಯುತ್ ಸಂಪರ್ಕ ಕಡಿತ, ನೀರಿನ ಸೌಲಭ್ಯ ಇಲ್ಲದೆ ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ” ಎಂದು ತಿಳಿಸಿದ್ದಾರೆ.
ಭೀಕರ ದಾಳಿಯಿಂದ ಸಂವಹನ ಸಂಪರ್ಕ ವ್ಯವಸ್ಥೆ ಪೂರ್ಣ ನಾಶವಾಗಿದೆ. ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಗಾಜಾ ಆರೋಗ್ಯ ಇಲಾಖೆ ತಿಳಿಸಿದೆ.
ಹಮಾಸ್ ಸಶಸ್ತ್ರ ಗುಂಪಿನ ವಿರುದ್ಧ ದಾಳಿ ನಡೆಸುವ ಭರದಲ್ಲಿ ಪ್ಯಾಲೇಸ್ತೀನಿ ನಾಗರಿಕರನ್ನು ಹತ್ಯೆ ಮಾಡುತ್ತಿರುವ ಇಸ್ರೇಲ್ ವಿರುದ್ಧ ಜಾಗತಿಕ ಮಟ್ಟದಲ್ಲಿ ವಿರೋಧ ಹೆಚ್ಚುತ್ತಿದೆ. ಜನರ ಮೇಲೆ ನಡೆಸುತ್ತಿರುವ ದಾಳಿ ನಿಲ್ಲಿಸದಿದ್ದರೆ ಇಸ್ರೇಲ್ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಹೌತಿ ಸೇನಾ ವಕ್ತಾರ ಯಾಯ್ಯಾ ಸಾರೀ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಪ್ಯಾಲೆಸ್ತೀನಿಯರ ವಿಚಾರದಲ್ಲಿ ಅಮಾನವೀಯವಾಗಿ ವರ್ತಿಸುತ್ತಿರುವ ಇಸ್ರೇಲ್ ಜತೆ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳುವುದಾಗಿ ಹಲವು ದೇಶಗಳು ಘೋಷಣೆ ಮಾಡಿವೆ. ಬೊಲಿವಿಯಾ, ಕೊಲಂಬಿಯಾ, ಚಿಲಿ ಮೊದಲಾದ ದೇಶಗಳು ಇಸ್ರೇಲ್ನಲ್ಲಿದ್ದ ರಾಯಭಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿವೆ.
ಇಸ್ರೇಲ್-ಹಮಾಸ್ ಯುದ್ಧ ಶುರುವಾದ ನಂತರದಲ್ಲಿ, ಗಾಜಾ ಪಟ್ಟಿಯಲ್ಲಿ ಇರುವ ವಿದೇಶಿ ಪ್ರಜೆಗಳಿಗೆ ಆ ಪ್ರದೇಶವನ್ನು ತೊರೆಯಲು ಇದೇ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಗುರುವಾರವೂ ನೂರಾರು ವಿದೇಶಿಗರ ಸ್ಥಳಾಂತರಕ್ಕಾಗಿ ರಫಾ ಗಡಿಯನ್ನು ತೆರೆಯಲಾಗಿದೆ.
ಆಸ್ಟ್ರೇಲಿಯಾ, ಆಸ್ಟ್ರೀಯಾ, ಬಲ್ಲೇರಿಯಾ, ಫಿನ್ಲೆಂಡ್, ಇಂಡೊನೇಷ್ಯಾ, ಜಪಾನ್, ಜೋರ್ಡಾನ್ ಸೇರಿದಂತೆ ಹಲವು ದೇಶಗಳ ಪಾಸ್ಪೋರ್ಟ್ ಹೊಂದಿರುವವರು ಗಾಜಾದಿಂದ ಸ್ಥಳಾಂತರಗೊಳ್ಳುತ್ತಿದ್ದಾರೆ.
ಯುದ್ಧ ಶುರುವಾದ ನಂತರದಲ್ಲಿ ಗಾಜಾ ಪಟ್ಟಿಯಲ್ಲಿ 8,525ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರಿಕರು ಮೃತಪಟ್ಟಿದ್ದಾರೆ. ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ 122ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರಿಕರು ಸತ್ತಿದ್ದಾರೆ. ಇಸ್ರೇಲ್ನಲ್ಲಿ ಒಟ್ಟು 1,400ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಹಿಂಸಾಚಾರ ಶ್ಲಾಘಿಸಿದ ಯೋಗಿ ಆದಿತ್ಯನಾಥ್