ಟ್ರಾಕ್ಟರ್ ಲೋನ್ ಕಟ್ಟದ ಕಾರಣಕ್ಕೆ ವಶಪಡಿಸಿಕೊಳ್ಳಲು ಬಂದಿದ್ದ ಮಹೀಂದ್ರ ಫೈನಾನ್ಸ್ ಏಜೆಂಟ್ಗಳು ಅಡ್ಡ ಬಂದ ಆದಿವಾಸಿ ಗರ್ಭಿಣಿ ಮಹಿಳೆ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆಗೈದಿರುವ ಧಾರುಣ ಘಟನೆ ಜಾರ್ಖಂಡ್ನಲ್ಲಿ ವರದಿಯಾಗಿದೆ.
ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ಬರಿಯಾನಾಥ ಎಂಬ ಗ್ರಾಮದ ವಿಶೇಷಚೇತನ ರೈತ ಮಿಥಿಲೇಶ್ ಮೆಹ್ತಾ ಎಂಬುವವರು ಟ್ರ್ಯಾಕ್ಟರ್ ಖರೀದಿಸಲು ಸಾಲ ಪಡೆದಿದ್ದರು. ಆದರೆ ಬಾಕಿ ಮೊತ್ತ 1.3 ಲಕ್ಷ ಹಣ ಕಟ್ಟಿಲ್ಲವೆಂದು ಆರೋಪಿಸಿದ್ದ ಫೈನಾನ್ಸ್ ಏಜೆಂಟರುಗಳು ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲು ಬಂದಾಗ ನಡೆದ ಗದ್ದಲದಲ್ಲಿ ಈ ಅನಾಹುತ ಸಂಭವಿಸಿದೆ.
ಫೈನಾನ್ಸ್ ಏಜೆಂಟರುಗಳ ಬಳಿ ರೈತ 1.2 ಲಕ್ಷ ಸಾಲ ತೀರಿಸುವುದಾಗಿ ಉಳಿದ ಸಾಲ ತೀರಿಸಲು ಸಮಯ ಕೊಡಿ ಎಂದು ಕೇಳಿಕೊಂಡರೂ ಅವರು ಒಪ್ಪದೇ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಎನ್ಎನ್33 ರ ಬಳಿ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಅಡ್ಡಬಂದು ಪ್ರತಿಭಟಿಸಿದ ರೈತನ ಗರ್ಭಿಣಿ ಮಗಳ ಮೇಲೆ ಟ್ರ್ಯಾಕ್ಟರ್ ಹರಿದಿದೆ ಎನ್ನಲಾಗಿದೆ.
ಘಟನೆ ನಡೆದ ನಂತರ ತಕ್ಷಣೇ ಸಂತ್ರಸ್ತೆಯನ್ನು ಆಸ್ಪತ್ರೆಗೆ ಸೇರಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಇದರಿಂದ ಕ್ರೋಧಗೊಂಡ ಮೃತರ ಸಂಬಂಧಿಗಳು ಮತ್ತು ಗ್ರಾಮಸ್ಥರು ಹಜಾರಿಬಾಗ್ ಜಿಲ್ಲಾಧಿಕಾರಿ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಹತ್ಯೆಗೆ ಕಾರಣನಾದ ಫೈನಾನ್ಸ್ ಏಜೆಂಟ್ ಮತ್ತು ಮ್ಯಾನೇಜರ್ಗಳನ್ನು ಬಂಧಿಸಬೇಕು, ಸಂತ್ರಸ್ತ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಜಾರಿಬಾಗ್ ಜಿಲ್ಲಾಧಿಕಾರಿ ಮನೋಜ್ ರತನ್ ಚೋಥೆ, “ಫೈನಾನ್ಸ್ ಕಂಪನಿಯ ಏಜೆಂಟ್ ಮತ್ತು ಟ್ರ್ಯಾಕ್ಟರ್ ಮಾಲೀಕ ರೈತನ ಜೊತೆ ವಾಗ್ವಾದ ನಡೆದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಮಹೀಂದ್ರಾ ಫೈನಾನ್ಸ್ ಕಂಪನಿಯ ರಿಕವರಿ ಏಕೆಂಟ್ ಮತ್ತು ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಶೀಘ್ರದಲ್ಲಿಯೇ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.
ಘಟನೆಯನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಖಂಡಿಸಿದ್ದು, “ಇದೊಂದು ಭೀಕರ ದುರಂತ. ಈ ದುಃಖದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದೊಂದಿಗೆ ನಿಲ್ಲುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.
This is a terrible tragedy. I strongly support @anishshah21's statement. Our hearts go out to the family in this time of grief. https://t.co/FxYejx59im
— anand mahindra (@anandmahindra) September 16, 2022
ಘಟನೆ ಕುರಿತು ಕಂಪನಿಯ ಸಿಇಓ ಅನೀಶ್ ಶಾ ಹೇಳಿಕೆ ಬಿಡುಗಡೆ ಮಾಡಿದ್ದು, “ಒಬ್ಬರು ಸಾವನಪ್ಪಿರುವ ಹಜಾರಿಬಾಗ್ ಘಟನೆ ನಮ್ಮನ್ನು ತೀವ್ರವಾಗಿ ನೋಯಿಸಿದೆ ಮತ್ತು ಘಾಸಿಗೊಳಿಸಿದೆ. ಘಟನೆಯ ಕುರಿತು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತೇವೆ. ಅಲ್ಲದೆ ರಿಕವರಿ ನಡೆಸುವ ಮೂರನೇ ವ್ಯಕ್ತಿಗಳು ಅಸ್ತಿತ್ವದಲ್ಲಿರುವ ಕುರಿತು ಚರ್ಚಿಸುತ್ತೇವೆ. ಈ ದುರಂತ ಪ್ರಕರಣದಲ್ಲಿ ಪೊಲೀಸರು ನಡೆಸುವ ಎಲ್ಲಾ ರೀತಿಯ ತನಿಖೆಗಳಿಗೆ ಸಹಕಾರ ನೀಡುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ದುಃಖದಲ್ಲಿರುವ ಕುಟುಂಬದೊಂದಿಗೆ ನಿಲ್ಲುತ್ತೇವೆ” ಎಂದು ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕದ ನಂತರ ಬಹಳಷ್ಟು ಜನರು ತಮ್ಮ ಸಾಲದ ಕಂತುಗಳನ್ನು ಕಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಈಗಾಗಲೇ ವಾಹನ ಸಾಲ ಪಡೆದು ಕಟ್ಟಲಾಗದ ಬಹಳಷ್ಟು ಜನರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆದರೆ ಕೋವಿಡ್ ಸಾಂಕ್ರಾಮಿಕ ಹೊಡೆತವನ್ನು ಪರಿಗಣಿಸಿ ವಾಹನಗಳನ್ನೇ ನಂಬಿಕೊಂಡಿರುವ ಸಾಲ ಕಟ್ಟಲಾಗದ ಜನರ ಕುರಿತು ಫೈನಾನ್ಸ್ ಕಂಪನಿಗಳು ಮತ್ತು ಸರ್ಕಾರ ಮಾನವೀಯತೆಯಿಂದ ವರ್ತಿಸಬೇಕು ಎಂಬುದನ್ನು ಈ ಮೇಲಿನ ಘಟನೆ ತೋರಿಸುತ್ತದೆ. ನಮ್ಮ ಸರ್ಕಾರಗಳು ಎಚ್ಚೆತ್ತುಕೊಳ್ಳಲಿವೆಯೆ ಎಂದು ದೊಡ್ಡ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಭ್ರಷ್ಟ ಉದ್ಯಮಿಗಳ 10 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ: ಮೋದಿ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ