ಜಾರ್ಖಂಡ್ನ ರಾಂಚಿ ಜಿಲ್ಲೆಯಲ್ಲಿ 35 ವರ್ಷದ ಬುಡಕಟ್ಟು ಸಮುದಾಯದ ಗಾಯಕನನ್ನು ಥಳಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸಂಜೆ ಜಾರ್ಖಂಡ್ನ ರಾಜಧಾನಿ ರಾಂಚಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ತತ್ಕುಂಡೋ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಲಕಿಯೋರ್ವಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಈ ಕೃತ್ಯವನ್ನು ಎಸಗಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಮಂದರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಅಂಕಿತಾ ರಾಯ್ ಘಟನೆಯನ್ನು ದೃಢಪಡಿಸಿದ್ದು, ತತ್ಕುಂಡೋ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಹತ್ಯೆಯಾದ ಡೇವಿಡ್ ಮಿಂಜ್ ಬುಡಕಟ್ಟು ಸಮುದಾಯದ ಯುವಕ. ಡೇವಿಡ್ ಮಿಂಜ್ ನಾಗ್ಪುರಿ ಭಾಷೆಯ ಹಾಡುಗಳ ಗಾಯಕನಾಗಿದ್ದ. ಇವರು ಹಲವು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು. ಸ್ಥಳೀಯ ಗಾಯಕರಾಗಿ ಇವರು ಹೆಚ್ಚು ಹೆಸರನ್ನು ಗಳಿಸಿದ್ದರು.
ಬುದ್ದಿಮಾಂದ್ಯ ಬಾಲಕಿಯೋರ್ವಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಗುರುವಾರ ಸಂಜೆ ಮಿಂಜ್ ಮೇಲೆ ಮೂವರು ತಂಡ ದೊಣ್ಣೆಯಿಂದ ಹಲ್ಲೆ ನಡೆಸಿದೆ. ಘಟನೆಯಲ್ಲಿ ಗಂಭೀರವಾಗಿದ್ದ ಅವರನ್ನು ಮಂದರ್ ರೆಫರಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ಕಳುಹಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮಂದರ್ ಪೊಲೀಸ್ ಠಾಣೆಯ ಉಸ್ತುವಾರಿ ವಿನಯ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಮೂವರು ವ್ಯಕ್ತಿಗಳ ತಂಡ ಕೃತ್ಯವನ್ನು ನಡೆಸಿದೆ. ಆರೋಪಿಗಳು ಬಾಲಕಿಯ ಸಂಬಂಧಿಕರಾಗಿದ್ದಾರೆ. ಸಂತ್ರಸ್ತನ ಪತ್ನಿಯ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಮಧ್ಯಪ್ರದೇಶ: ಹಿಂದುಳಿದ ವರ್ಗದ ನಾಯಕ ಪಟ್ವಾರಿಗೆ ಕಾಂಗ್ರೆಸ್ ಸಾರಥ್ಯ