ಕಳೆದ ವಾರ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ (ಜೆಎನ್ಯು) ತಮಿಳು ವಿದ್ಯಾರ್ಥಿಗಳ ಮೇಲೆ ಎಬಿವಿಪಿ ನಡೆಸಿದ ಹಲ್ಲೆಯನ್ನು ಖಂಡಿಸಿ, ಫೆಬ್ರವರಿ 25, ಶನಿವಾರದಂದು ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸಲಾಯಿತು. ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (ಎಐಎಸ್ಎ) ಜೆಎನ್ಯು ವಿಭಾಗವು ‘ರಿಕ್ಲೈಮ್ ಜೆಎನ್ಯು’ ಎಂಬ ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ನಡೆಸಿತು.
ದಾಳಿಯ ವೇಳೆ ಗಾಯಗೊಂಡಿದ್ದ ಪಿಎಚ್ಡಿ ಸ್ಕಾಲರ್ ನಾಜರ್ ದಿ ನ್ಯೂಸ್ ಮಿನಿಟ್ ಜೊತೆ ಮಾತನಾಡಿದ್ದು, ”ಕ್ಯಾಂಪಸ್ನಲ್ಲಿ ಕೇಂದ್ರ ಸರ್ಕಾರವನ್ನು ವಿರೋಧಿಸುವವರನ್ನು ಎಬಿವಿಪಿ ಗುರಿಯಾಗಿಸುತ್ತದೆ. ಈ ಬಾರಿ ಅದು ತಮಿಳರನ್ನು ಗುರಿಯಾಗಿಸಿಕೊಂಡಿದೆ” ಎಂದು ಹೇಳಿದ್ದಾರೆ.
ಫೆಬ್ರವರಿ 19ರಂದು ”ಜಾನೆ ಭಿ ದೋ ಯಾರೋ” ಎನ್ನುವ ವಿಡಂಬನಾತ್ಮಕ ಹಿಂದಿ ಚಲನಚಿತ್ರ ಪ್ರದರ್ಶನದ ವೇಳೆ ವಿದ್ಯಾರ್ಥಿಗಳ ಮೇಲೆ ಆರ್ಎಸ್ಎಸ್ ವಿದ್ಯಾರ್ಥಿ ಘಟಕವಾದ ಎಬಿವಿಪಿ ಹಲ್ಲೆ ನಡೆಸಿತು. ಆರ್ಎಸ್ಎಸ್-ಅಂಗಸಂಸ್ಥೆಯು ಶಿವಾಜಿಯ ಭಾವಚಿತ್ರದ ಬಗ್ಗೆ ತಕರಾರು ತೆಗೆದಿದೆ ಎಂದು ಆರೋಪಿಸಲಾಗಿದೆ. ಎಬಿವಿಪಿಯ ದಾಳಿಯಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗಳಿಗೆ ಸಾಗಿಸುವ ಆಂಬ್ಯುಲೆನ್ಸ್ಗಳನ್ನು ಸಹ ನಿರ್ಬಂಧಿಸಲಾಗಿದೆ. ಇದಲ್ಲದೆ, ಹಿಂಸಾಚಾರ ನಡೆಯುತ್ತಿದ್ದರೂ ದೆಹಲಿ ಪೊಲೀಸರು ಮಾತ್ರ ಮಧ್ಯಪ್ರವೇಶಿಸಲು ನಿರಾಕರಿಸಿದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಎಬಿವಿಪಿಯು ಡಾ ಬಿಆರ್ ಅಂಬೇಡ್ಕರ್, ಪೆರಿಯಾರ್, ಭಗತ್ ಸಿಂಗ್ ಮತ್ತು ಕಾರ್ಲ್ ಮಾರ್ಕ್ಸ್ ಅವರ ಭಾವಚಿತ್ರಗಳನ್ನು ಧ್ವಂಸಗೊಳಿಸಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
‘ರಿಕ್ಲೈಮ್ JNU’ ರ್ಯಾಲಿಯು ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದೆ. ಅದರಲ್ಲಿ ಮೊದಲನೆಯದು ABVP ವಿರುದ್ಧ ಕ್ರಮ. ಈ ಬಗ್ಗೆ ತನಿಖೆ ನಡೆಸಲು ವಿಶ್ವವಿದ್ಯಾನಿಲಯ ಆಡಳಿತ ರಚಿಸಿರುವ ವಿಚಾರಣಾ ಸಮಿತಿಯನ್ನು ಪುನರ್ ರಚಿಸುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು. ”ಪ್ರಸ್ತುತ ಸಮಿತಿಯಲ್ಲಿರುವ ಪ್ರಾಧ್ಯಾಪಕರು ಆಡಳಿತ ಮಂಡಳಿಗೆ ಹತ್ತಿರವಾಗಿದ್ದಾರೆ ಎಂದು ಮಧುರಿಮಾ ಕುಂದು ಹೇಳಿದ್ದಾರೆ. ಆ ಸಮಿತಿಯು ಜೆಎನ್ಯು-ವಿದ್ಯಾರ್ಥಿ ಸಂಘ (ಜೆಎನ್ಯು-ಎಸ್ಯು) ಮತ್ತು ಜೆಎನ್ಯು ಶಿಕ್ಷಕರ ಸಂಘದ ಪ್ರತಿನಿಧಿಗಳನ್ನು ಒಳಗೊಂಡಿರಬೇಕೆಂದು ನಾವು ಬಯಸುತ್ತೇವೆ” ಎಂದು ಅವರು ಹೇಳಿದರು.
ಫೆಬ್ರವರಿ 20ರಂದು ವಿದ್ಯಾರ್ಥಿಗಳ ಡೀನ್ ಸುಧೀರ್ ಪಿ ಸಿಂಗ್ ಹೊರಡಿಸಿದ ಸುತ್ತೋಲೆ ಪ್ರಕಾರ, ”ಎಲ್ಲಾ ಹಾಸ್ಟೆಲ್ಗಳು, ವಿದ್ಯಾರ್ಥಿಗಳ ಚಟುವಟಿಕೆ ಕೇಂದ್ರ (ಟೆಫ್ಲಾಸ್) ಮತ್ತು ಕ್ರೀಡಾ ಮೈದಾನಗಳು ಸೇರಿದಂತೆ ಇಂಟರ್-ಹಾಲ್-ಆಡಳಿತದ ಆವರಣದಲ್ಲಿ ವಿದ್ಯಾರ್ಥಿಗಳ ಏನೇ ಚಟುವಟಿಕೆ ನಡೆಸಿದರೂ ಡೀನ್ ಅವರಿಂದ ಔಪಚಾರಿಕ ಅನುಮತಿ ಅಗತ್ಯವಿರುತ್ತದೆ.” ಜೆಎನ್ಯು-ಎಸ್ಯು ಕಚೇರಿಯನ್ನು ಈಗ ಮುಚ್ಚಲಾಗಿದೆ. ಅವರ ಕಚೇರಿಗೆ ಹೋಗುವುದು ವಿದ್ಯಾರ್ಥಿ ಒಕ್ಕೂಟದ ಹಕ್ಕು. ಒಕ್ಕೂಟದ ಚುನಾಯಿತ ಅಧ್ಯಕ್ಷರನ್ನು ಅವರ ಕಚೇರಿಯಿಂದ ಹೊರಹಾಕಲಾಗಿದೆ ಮತ್ತು ಈಗ ಅದನ್ನು ಪ್ರವೇಶಿಸಲು ಬೇರೊಬ್ಬರ ಅನುಮತಿ ಅಗತ್ಯವಿದೆ ಎಂದು ನಾಜರ್ ಹೇಳಿದರು.
ಇದನ್ನೂ ಓದಿ: ವಿಶ್ವವಿದ್ಯಾಲಯದ ಆಕ್ಷೇಪದ ನಡುವೆಯು ಪ್ರಧಾನಿ ಮೋದಿಯ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಿದ ಜೆಎನ್ಯು ವಿದ್ಯಾರ್ಥಿಗಳು!
”ಕೆಲವು ವರ್ಷಗಳ ಹಿಂದೆ, ಊಟದ ಹಾಲ್ಗಳನ್ನು ವಿದ್ಯಾರ್ಥಿಗಳು ಒಟ್ಟುಸೇರಲು ಮತ್ತು ಚರ್ಚೆ ನಡೆಸಲು ಬಳಸಲಾಗುತ್ತಿತ್ತು ಎಂದು ಮಧುರಿಮಾ ನೆನಪಿಸಿಕೊಂಡರು. ಈಗ ವಿದ್ಯಾರ್ಥಿ ಸಂಘದ ಕಚೇರಿ ಹೊರತುಪಡಿಸಿ, ಕ್ಯಾಂಪಸ್ನಲ್ಲಿ ಪ್ರಜಾಪ್ರಭುತ್ವದ ಜಾಗಗಳು ನಾಶವಾಗುತ್ತಿವೆ. ಇದು ಅಧಿಕಾರದ ವ್ಯವಸ್ಥಿತ ದುರುಪಯೋಗ ಮತ್ತು ಹಿಂಸಾಚಾರಕ್ಕೆ ಒಂದು ಮಾದರಿಯಾಗಿದೆ. ಪ್ರತಿ ಬಾರಿ ಎಬಿವಿಪಿ ದಾಳಿ ನಡೆದಾಗ ಈಗಿನಂತೆ ಸಮಿತಿ ರಚನೆಯಾಗುತ್ತದೆ. ಇದರಿಂದ ಯಾವ ಕ್ರಮವೂ ಜರಗುವುದಿಲ್ಲ ಅವರು ಹೀಗೆ ನಿರ್ಭೀತಿಯಿಂದ ದಾಳಿ ನಡೆಸುತ್ತಲೇ ಬರುತ್ತಿದ್ದಾರೆ” ಎಂದರು.
ಫೆಬ್ರವರಿ 19ರ ದಾಳಿಯು ಕ್ಯಾಂಪಸ್ನಲ್ಲಿ ನಡೆದ ಮೊದಲ ಘಟನೆಯಲ್ಲ, 2020ರಲ್ಲಿ, ಹೊರಗಿನವರು ಮುಸುಕುಧಾರಿಗಳಾಗಿ ಬಂದು, ವಿಶ್ವವಿದ್ಯಾಲಯದ ಸಬರಮತಿ ಹಾಸ್ಟೆಲ್ನ ವಿದ್ಯಾರ್ಥಿಗಳ ಮೇಲೆ ಕೋಲು ಮತ್ತು ರಾಡ್ಗಳಿಂದ ಹಲ್ಲೆ ನಡೆಸಿದರು. ಅದೇ ವರ್ಷ ಪೆರಿಯಾರ್ ಹಾಸ್ಟೆಲ್ನಲ್ಲಿ ಮತ್ತೊಂದು ದಾಳಿ ಸಂಭವಿಸಿದೆ ಮತ್ತು ಕಳೆದ ವರ್ಷ ಡಿಸೆಂಬರ್ನಲ್ಲಿ ನಿಷೇಧಿತ BBC ಸಾಕ್ಷ್ಯಚಿತ್ರ ಇಂಡಿಯಾ: ದಿ ಮೋದಿ ಕ್ವೆಶ್ಚನ್ ವೀಕ್ಷಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು.
ಮಧುರಿಮಾ ಅವರ ಮಾತುಗಳಿಗೆ ಧ್ವನಿಗೂಡಿಸಿದ ನಾಜರ್, ”ಇತ್ತೀಚಿನ ಅನೇಕ ಘಟನೆಗಳಲ್ಲಿ ಇದು ಕೂಡ ಒಂದು, ಇಂತಹ ದಾಳಿಗಳು ಹೆಚ್ಚಾಗುತ್ತಲೇ ಇವೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎನ್ನುವ ಕಾರಣಕ್ಕೆ ಅವರು ನಿರ್ಭಯದಿಂದ ದಾಳಿ ನಡೆಸುವುದನ್ನು ಮುಂದುವರೆಸಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರವನ್ನು ವಿರೋಧಿಸುವವರನ್ನು ಟಾರ್ಗೆಟ್ ಮಾಡುವುದು ಕ್ಯಾಂಪಸ್ನಲ್ಲಿ ವಾಡಿಕೆಯಾಗಿದೆ” ಎಂದು ಅವರು ಹೇಳಿದರು.
”ಕೇರಳ ಮತ್ತು ತಮಿಳುನಾಡಿನ ವಿದ್ಯಾರ್ಥಿಗಳು ಇಲ್ಲಿ ಅಲ್ಪಸಂಖ್ಯಾತರು ಎಂದು ಎಬಿವಿಪಿ ಹೇಳುವುದನ್ನು ನಾವು ಕೇಳಿದ್ದೇವೆ. ನಾವೇ ಬಹುಸಂಖ್ಯಾತರು, ನಾವು ಹೇಳಿದಂತೆ ನೀವು ಮಾಡಬೇಕು” ಎಂದು ಅವರು ಹೇಳುತ್ತಾರೆ ಎಂದರು.
ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಶನ್ (ಬಾಪ್ಸಾ) ಅಧ್ಯಕ್ಷ ಅಜಿಂಕ್ಯ ಸೋನಾವಾನೆ ಟಿಎನ್ಎಂ ಜೊತೆ ಮಾತನಾಡುತ್ತಾ, ”ದರ್ಶನ್ ಸೋಲಂಕಿ ಅವರ ಸಾವಿನಂತಹ ದೊಡ್ಡ ಸಮಸ್ಯೆಯ ಮೇಲಿನ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಘಟನೆಗಳನ್ನು ಎಬಿವಿಪಿ ಸೃಷ್ಟಿ ಮಾಡಿದೆ ಎಂದು ಹೇಳಿದರು. ಹಿಂಸಾಚಾರ ನಡೆಯುವ ಮೊದಲು ನಾವು ಸಮಸ್ಯೆಯನ್ನು ಕೈಗೆತ್ತಿಕೊಂಡಿದ್ದೇವೆ. ಈಗ ಅವರ ಸಾವು, ಸಾಂಸ್ಥಿಕ ಕೊಲೆಯೇ ಹೊರತು, ಐಐಟಿ ಬಾಂಬೆ ಹೇಳುವಂತೆ ರ್ಯಾಗಿಂಗ್ನಿಂದ ಆತ್ಮಹತ್ಯೆಯಲ್ಲ. ದರ್ಶನ್ ಸಾವು ಒಂದು ಪ್ರತ್ಯೇಕ ಪ್ರಕರಣವಲ್ಲ. ಇದು ರೋಹಿತ್ ವೇಮುಲಾ ಮತ್ತು ಪಾಯಲ್ ತದ್ವಿ ಅವರ ಸಾವಿನಂತಹ ಸಾಂಸ್ಥಿಕ ಜಾತಿ ಆಧಾರಿತ ತಾರತಮ್ಯದ ಪರಿಣಾಮವಾಗಿದೆ” ಎಂದು ಅವರು ಹೇಳಿದರು.