‘ಸನಾತನ ಧರ್ಮ’ದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದಕ್ಕೆ ಅವರ ವಿರುದ್ಧ ಎಫ್ಐಆರ್ ದಾಖಲಾದ ಒಂದು ದಿನದ ನಂತರ, ಅವರು ಎಲ್ಲಾ ಪ್ರಕರಣಗಳನ್ನು ಕಾನೂನಾತ್ಮಕವಾಗಿ ಎದುರಿಸುವುದಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
”ಇದು ಮಣಿಪುರ ಹಿಂಸಾಚಾರ ಮತ್ತು ಭ್ರಷ್ಟಾಚಾರ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸನಾತನದ ತಂತ್ರ ಬಳಸುತ್ತಿದ್ದಾರೆ” ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ನಲ್ಲಿ ನಾಲ್ಕು ಪುಟಗಳ ಪತ್ರವನ್ನು ಬಿಡುಗಡೆ ಮಾಡಿದ ಉದಯನಿಧಿ, ”ಪೆರಿಯಾರ್, ಅಣ್ಣಾ, ಕಲೈಂಜರ್ ಮತ್ತು ಪೆರಸಿರಿಯಾರ್ ಅವರ ಸಿದ್ಧಾಂತಗಳ ಗೆಲುವಿಗಾಗಿ ಕೆಲಸ ಮಾಡಲು ನಾವು ಸಂಕಲ್ಪ ಮಾಡೋಣ. ಸಾಮಾಜಿಕ ನ್ಯಾಯ ಶಾಶ್ವತವಾಗಿ ಅರಳಲಿ” ಎಂದು ಕರೆ ಕೊಟ್ಟಿದ್ದಾರೆ.
ಉತ್ತರ ಪ್ರದೇಶದ ರಾಂಪುರದಲ್ಲಿ ವಕೀಲರ ದೂರುಗಳ ನಂತರ ಉದಯನಿಧಿ ಮತ್ತು ಕಾಂಗ್ರೆಸ್ನ ಪ್ರಿಯಾಂಕ್ ಖರ್ಗೆ ವಿರುದ್ಧಐಪಿಸಿ ಸೆಕ್ಷನ್ 153ಎ (ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
”’ಎಲ್ಲಾ ಜೀವಗಳು ಸಮಾನವಾಗಿ ಹುಟ್ಟುತ್ತವೆ’ ಎಂದು ಕಲಿಸುವ ಎಲ್ಲಾ ಧರ್ಮಗಳನ್ನು ನಾವು ಗೌರವಿಸುತ್ತೇವೆ. ಆದರೆ ಇವುಗಳ ಬಗ್ಗೆ ಕಿಂಚಿತ್ತೂ ತಿಳುವಳಿಕೆಯಿಲ್ಲದೆ, ಸಂಸತ್ ಚುನಾವಣೆಯನ್ನು ಎದುರಿಸಲು ಮೋದಿ ಅಂಡ್ ಟೀಮ್ ಇಂತಹ ಅಪಪ್ರಚಾರಗಳ ಮೇಲೆ ಮಾತ್ರ ಅವಲಂಬಿತರಾಗಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
”ಒಂದೆಡೆ, ನನಗೆ ಅವರ ಬಗ್ಗೆ ಅನುಂಪ ಇದೆ. ಕಳೆದ 9 ವರ್ಷಗಳಿಂದ ಮೋದಿ ಏನೂ ಮಾಡುತ್ತಿಲ್ಲ. ಸಾಂದರ್ಭಿಕವಾಗಿ ಅವರು ಹಣದ ಅಮಾನ್ಯೀಕರಣವನ್ನು ಮಾಡುತ್ತಾರೆ. ಗುಡಿಸಲುಗಳನ್ನು ಮರೆಮಾಡಲು ಗೋಡೆಯನ್ನು ನಿರ್ಮಿಸುತ್ತಾರೆ. ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸುತ್ತಾರೆ, ಅಲ್ಲಿ ಸೆಂಗೋಲ್ ಅನ್ನು ನಿರ್ಮಿಸುತ್ತಾರೆ. ದೇಶದ ಹೆಸರನ್ನು ಬದಲಾಯಿಸುತ್ತಾರೆ” ಎಂದು ಟೀಕಿಸಿದ್ದಾರೆ.
”ನಿಶಸ್ತ್ರ, ಫ್ಯಾಸಿಸ್ಟ್ ಬಿಜೆಪಿ ಸರ್ಕಾರ”ವನ್ನು ಇಡೀ ದೇಶವೇ ಪ್ರಶ್ನಿಸುತ್ತಿದೆ. ಕಳೆದ 9 ವರ್ಷಗಳಿಂದ ನಿಮ್ಮ (ಬಿಜೆಪಿ) ಭರವಸೆಗಳೆಲ್ಲವೂ ಪೊಳ್ಳು ಭರವಸೆಗಳಾಗಿವೆ. ನಮ್ಮ ಕಲ್ಯಾಣಕ್ಕಾಗಿ ನೀವು ಏನು ಮಾಡಿದ್ದೀರಿ? ” ಎಂದು ಪ್ರಶ್ನಿಸಿದ್ದಾರೆ.
ಸನಾತನ ಧರ್ಮದ ಹೇಳಿಕೆ:
ಕಳೆದ ವಾರ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಟೀಕಿಸಿದರು ಮತ್ತು ಅದು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಇದ್ದಂತೆ ಅದನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು” ಎಂದು ಕರೆ ನೀಡಿದ್ದರು.
ವಕೀಲರಾದ ಹರ್ಷ್ ಗುಪ್ತಾ ಮತ್ತು ರಾಮ್ ಸಿಂಗ್ ಲೋಧಿ ಅವರ ದೂರಿನ ಮೇರೆಗೆ ಉದಯನಿಧಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಉದಯನಿಧಿ ಹೇಳಿಕೆಗಳು ನಮ್ಮ ಭಾವನೆಗಳನ್ನು ಘಾಸಿಗೊಳಿಸಿವೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕರು ತಮ್ಮ ಭಾಷಣವನ್ನು ತಿರುಚಿದ್ದಾರೆ ಮತ್ತು ಅದನ್ನು ‘ಜನಾಂಗೀಯ ಹತ್ಯೆಗೆ ಪ್ರಚೋದನೆ’ ನೀಡಿದ್ದಾರೆ. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸನಾತನ ಎನ್ನುವ ಪದವನ್ನು ಆಯುಧವಾಗಿ ಬಳಸುತ್ತಿದ್ದಾರೆ” ಎಂದು ಉದಯನಿಧಿ ಆರೋಪಿಸಿದ್ದಾರೆ.