ಕಾಂಗ್ರೆಸ್ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬುಧವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಇತರ ನಾಯಕರ ಸಮ್ಮುಖದಲ್ಲಿ ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರಿದರು. ಮಧ್ಯಾಹ್ನ 12.30 ನಿಗದಿಯಾಗಿದ್ದ ಕಾರ್ಯಕ್ರಮ “ರಾಹು ಕಾಲ”ದ ಪರಿಣಾಮವಾಗಿ ಎರಡು ಗಂಟೆ ಮುಂದೂಡಲ್ಪಟ್ಟಿತು.
ಜ್ಯೋತಿರಾದಿತ್ಯ ಸಿಂಧಿಯಾ ಅವರ ತಂದೆ ದಿವಂಗತ ಕಾಂಗ್ರೆಸ್ ನಾಯಕ ಮಾಧವರಾವ್ ಸಿಂಧಿಯಾ ಅವರ 75 ನೇ ಜನ್ಮ ದಿನಾಚರಣೆಯಾದ ನಿನ್ನೆ ಕಾಂಗ್ರೆಸಿನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸದಸ್ಯರಾಗಿ ರಾಜ್ಯ ಸಭೆಗೆ ಪ್ರವೇಶಿಸಿ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
ಸಿಂಧಿಯಾ ಕಾಂಗ್ರೆಸಿನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ”… ಇದು ಕಳೆದ ಒಂದು ವರ್ಷದಿಂದ ತನ್ನನ್ನು ತಾನು ಸೆಳೆಯುತ್ತಿರುವ ಮಾರ್ಗವಾಗಿದೆ. ನನ್ನ ಗುರಿ ಮತ್ತು ಉದ್ದೇಶ ಮೊದಲಿನಿಂದಲೂ ಇದ್ದಂತೆ ನನ್ನ ರಾಜ್ಯ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸುವುದಾಗಿದೆ. ಈ ಪಕ್ಷದೊಳಗೆ ಇನ್ನು ಮುಂದೆ ಇದನ್ನು ಮಾಡಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ನಾನು ನಂಬುತ್ತೇನೆ” ಎಂದು ಅವರು ಬರೆದಿದ್ದಾರೆ.
ಇಪ್ಪತ್ತೊಂದು ಕಾಂಗ್ರೆಸ್ ಶಾಸಕರು ಇದನ್ನು ಅನುಸರಿಸಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರಿಂದ ಕಮಲ್ ನಾಥ್ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಉರುಳುವ ಭೀತಿಯಲ್ಲಿದೆ. ಕಾಂಗ್ರೆಸ್ ಶಾಸಕರ ರಾಜೀನಾಮೆ ಸಂಖ್ಯೆ 30 ಕ್ಕೆ ಏರಬಹುದು ಎಂದು ಮಧ್ಯಪ್ರದೇಶದ ಮಾಜಿ ಗೃಹ ಸಚಿವ ಮತ್ತು ಬಿಜೆಪಿ ಮುಖಂಡ ಭೂಪೇಂದ್ರ ಸಿಂಗ್ ಹೇಳಿದ್ದಾರೆ.