ಕಲಬುರಗಿಯಲ್ಲಿ ಯುವಕರ ಗುಂಪೊಂದು ಸಹೋದರರಿಬ್ಬರ ಮೇಲೆ ದಾಳಿ ಮಾಡಿ ಅದರಲ್ಲಿ ಮಹೇಶ್ ಶಿವಕುಮಾರ ಬೆಣ್ಣೂರಕರ್ ಎಂಬುವವರನ್ನು ಕೊಲೆ ಮಾಡಿದ್ದ ಪ್ರಕರಣ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ಘಟನೆ ಮಾಸುವ ಮೊದಲೇ ತನ್ನ ತಂಗಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಯುವತಿಯ ಯುವಕನೊಬ್ಬ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.
ನಗರದ ಓಂನಗರದಲ್ಲಿನ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಆಕಾಶ್ (22) ಮೃತಪಟ್ಟ ಯುವಕ. ಈತ ತನ್ನ ಸ್ನೇಹಿತ ಶ್ರೀನಿಧಿಯ ಸಹೋದರಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಹಲವು ಬಾರಿ ಆಕಾಶ್ ಮತ್ತು ಶ್ರೀನಿಧಿ ನಡುವೆ ಗಲಾಟೆ ಕೂಡ ಆಗಿತ್ತು. ಕೆಲ ದಿನಗಳ ಹಿಂದೆ ಶ್ರೀನಿಧಿ ಅವರ ಸಹೋದರಿ ಆಕಾಶ್ ಅವರೊಂದಿಗೆ ಮನೆ ಬಿಟ್ಟು ಹೋಗಿದ್ದರು. ಈ ಘಟನೆಯ ನಂತರ ಆಕ್ರೋಶಗೊಂಡಿದ್ದ ಶ್ರೀನಿಧಿ, ಆಕಾಶ್ ಹತ್ಯೆಗೆ ಸಂಚು ರೂಪಿಸಿದ್ದ. ನಿನ್ನೆ ರಾತ್ರಿ ಆಕಾಶ್ ನನ್ನು ಕರೆದುಕೊಂಡು ಹೋಗಿ, ಚಾಕುವಿನಿಂದ ಇರಿದು ಹತ್ಯೆ ಮಾಡಲಿದ್ದಾನೆ ಎನ್ನಲಾಗುತ್ತಿದೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹ ಘಟನೆಗಳು ಇದೇ ಮೊದಲೇನಲ್ಲ. ಪರಸ್ಪರ ಜೊತೆಯಾಗಿದ್ದ ಸ್ನೇಹಿತರು ಒಬ್ಬರನ್ನೊಬ್ಬರು ಕೊಲ್ಲುವ ಮಟ್ಟಿಗೆ ದ್ವೇಷ ಹುಟ್ಟಿಸಿಕೊಳ್ಳುವುದು, ತಂದೆ, ತಾಯಂದಿರನ್ನು ಮಕ್ಕಳು, ಮಕ್ಕಳನ್ನು ತಂದೆ ತಾಯಂದಿರೇ ಕೊಲ್ಲುವಂತಹ ಘಟನೆಗಳು ಸಿನಿಮಾಗಳಲ್ಲಷ್ಟೆ ನೋಡುತ್ತಿದ್ದೆವು. ಆದರೆ ಇವೆಲ್ಲವೂ ಇಂದಿನ ಸಮಾಜದಲ್ಲಿ ನಡೆಯುತ್ತಿರುವ ನೈಜ ಘಟನೆಗಳಾಗಿ ಬದಲಾಗಿವೆ.
ಪ್ರೀತಿಯ ವಿಷಯದಲ್ಲಂತೂ ಜಾತಿ ಕಾರಣಕ್ಕೆ ಹೆತ್ತ ಮಕ್ಕಳು, ಒಡಹುಟ್ಟಿದವರು ಎಂಬುದನ್ನು ನೋಡದೇ ಕೊಲೆಗೈಯ್ಯುವ ಹೆಚ್ಚಾಗಿದೆ. ಜನರ ಆಲೋಚನೆ ಹೀಗೆ ಸಂಕುಚಿತಗೊಂಡಿದ್ದೇಕೆ? ಪ್ರೀತಿ ಮದುವೆಯ ಕುರಿತು ಜನರಲ್ಲಿ ಪೂರ್ವಗ್ರಹಗಳು ಹೆಚ್ಚಾಗಿರುವುದೇಕೆ? ಜಾತಿ, ಧರ್ಮ ಸೇರಿದಂತೆ ಮತೀಯ ಆಲೋಚನೆಗಳಲ್ಲಿ ಮುಳುಗಿರುವ ಜನರು ಅಮಾನವೀಯತೆಯಿಂದ ನಡೆದುಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತ ನಾಗರಿಕ ಸಮಾಜ ಎಚ್ಚರ ವಹಿಸಬೇಕಿದೆ. ಜನರು ಸಹನೆ, ತಾಳ್ಮೆ ಮಾನವೀಯತೆಯನ್ನು ರೂಡಿಸಿಕೊಳ್ಳುವಂತೆ ಸರ್ಕಾರ, ಪೊಲೀಸ್ ಇಲಾಖೆ ಜವಾಬ್ದಾರಿ ವಹಿಸಬೇಕಿದೆ.
ಇದನ್ನೂ ಓದಿ: ಟಿಕ್ರಿ ಗಡಿ ಬಳಿ ದುರ್ಘಟನೆ: ಲಾರಿ ಹರಿದು ಮೂವರು ರೈತ ಮಹಿಳೆಯರ ಸಾವು