ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುವ ಘಟನೆ ಕಲಬುರಗಿ ನಗರದ ಹೊರವಲಯದಲ್ಲಿರುವ ಕೋಟನೂರ (ಡಿ) ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕೃತ್ಯವನ್ನು ಖಂಡಿಸಿ ಮಂಗಳವಾರ ಬೆಳಿಗ್ಗೆಯಿಂದ ದಲಿತ ಸಂಘಟನೆಗಳು ಕಲಬುರಗಿ ನಗರದ ರಾಮಮಂದಿರ, ಫರತಹಬಾದ್, ನಾಗನಹಳ್ಳಿ ರಿಂಗ್ ರೋಡ್, ಲುಂಬಿಣಿ ಪಾರ್ಕ್ ಸೇರಿದಂತೆ ಹಲವೆಡೆ ಸಂಚಾರ ಮತ್ತು ಮಳಿಗೆಗಳನ್ನು ಬಂದ್ ಮಾಡಿಸಿ, ಟೈರ್ಗೆ ಬೆಂಕಿ ಹಚ್ಚಿದ ಪ್ರತಿಭಟನೆ ನಡೆಸಿವೆ.
ನಿನ್ನೆ (ಸೋಮವಾರ) ರಾತ್ರಿ ಕಿಡಿಗೇಡಿಗಳು ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ್ದು, ಇಂದು (ಮಂಗಳವಾರ) ಕಲಬುರಗಿ ರಸ್ತೆ ಮತ್ತು ರಾಮಮಂದಿರ ವೃತ್ತದಲ್ಲಿ ಜಮಾಯಿಸಿದ ಜನರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಮನವಿ ಆಲಿಸಬೇಕು, ಅಂಬೇಡ್ಕರ್ಗೆ ಅಪಮಾನ ಮಾಡಿದ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದರು.
ಪ್ರತಿಭಟನೆ ಹೆಚ್ಚಾದಾಗ ಸ್ಥಳಕ್ಕೆ ಬಂದು ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಡಾ.ಬಿ.ಆರ್ ಅಂಬೇಡ್ಕರ್ ಅವರು ನಮಗೆಲ್ಲರಿಗೂ ನಾಯಕ. ಅವರಿಗೆ ಅಪಮಾನ ಮಾಡಿದವರನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಬಳಿಕ ಘಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಹಾಗೂ ಪೊಲೀಸ್ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಮಂಡ್ಯ: ನಾಪತ್ತೆಯಾಗಿದ್ದ ಶಿಕ್ಷಕಿ ಶವವಾಗಿ ಪತ್ತೆ, ಕೊಲೆ ಶಂಕೆ