Homeಕರ್ನಾಟಕಕಾರವಾರ ಮೆಡಿಕಲ್ ಕಾಲೇಜು; ಆತಂಕದಲ್ಲಿ ದಲಿತರು!

ಕಾರವಾರ ಮೆಡಿಕಲ್ ಕಾಲೇಜು; ಆತಂಕದಲ್ಲಿ ದಲಿತರು!

- Advertisement -
- Advertisement -

ಕಾರವಾರ ಮೆಡಿಕಲ್ ಕಾಲೇಜು ಮತ್ತೆ ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಅವ್ಯವಹಾರ, ಅವಾಂತರದಿಂದ ಕೋಟ್ಯಾಂತರ ರೂ. ಅನುದಾನ ಈ ಕಾಲೇಜಿನ ಆಡಳಿತದಲ್ಲಿ ಆಧ್ವಾನವಾಗಿದೆ ಎಂಬ ನಿರಂತರ ಆರೋಪದ ನಡುವೆಯೇ ದಲಿತ ವರ್ಗದ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಕಿರುಕುಳ ಕೊಡಲಾಗುತ್ತಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.

ಜಾರಕಿಹೊಳಿ ಸಿಡಿ ಕೇಸ್‌ನ ಸಂತ್ರಸ್ತೆಯ ಪರ ವಕೀಲರಾಗಿದ್ದ ಹೋರಾಟಗಾರ-ವಕೀಲ ಜಗದೀಶ್ ಈಚೆಗೆ ಮೆಡಿಕಲ್ ಕಾಲೇಜಿನ ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕ್‌ರನ್ನು ಭೇಟಿಮಾಡಿ 9 ಆರೋಪಗಳ ಪಟ್ಟಿ ನೀಡಿ 7 ದಿನದಲ್ಲಿ ಸೂಕ್ತ ಸಮಜಾಯಿಷಿ ಕೊಡುವಂತೆ ಕೇಳಿದ್ದಾರೆ; ಇಲ್ಲದಿದ್ದರೆ ತನಿಖೆಗಾಗಿ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ಕೊಟ್ಟಿದ್ದಾರೆ. ಈ ನಡುವೆ ಮೆಡಿಕಲ್ ಕಾಲೇಜಿನ ಆಡಳಿ ವರ್ಗ ತನ್ನ ಅಕ್ರಮ-ಅನ್ಯಾಯ ಮುಚ್ಚಿಹಾಕಲು ದಲಿತ ದಮನ ಅಭಿಯಾನ ಶುರು ಹಚ್ಚಿಕೊಂಡಿದೆ ಎಂಬುದು ದಾಖಲೆ ಸಮೇತ ಬಹಿರಂಗವಾಗಿದೆ.

ಕಾರವಾರ ರಿಪಬ್ಲಿಕ್!

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) 2014ರಲ್ಲಿ ಶುರುವಾದಾಗ ಡಾ.ಭರತ್ ನಿರ್ದೇಶಕರಾಗಿ ನೇಮಕವಾಗಿದ್ದರು; ಕೆಲವೇ ತಿಂಗಳಲ್ಲಿ ಡಾ.ಭರತ್ ರಾಜೀನಾಮೆ ನೀಡಿದಾಗ ಆಯ್ಕೆ ಪಕ್ರಿಯೆ ಮೂಲಕ ದಲಿತ ಸಮುದಾಯದ ಡಾ.ಶಿವಾನಂದ ದೊಡ್ಮನಿ ನೇಮಕವಾದರು. ’ಕಾರವಾರ ರಿಪಬ್ಲಿಕ್’ ಎಂದೇ ಜನಜನಿವಾಗಿರುವ ಅಕ್ರಮ ವ್ಯವಹಾರ-ಬ್ಲಾಕ್‌ಮೇಲ್‌ನ ಸ್ಥಳೀಯ ಕೂಟವೊಂದು ಡಾ.ಶಿವಾನಂದ ದೊಡ್ಮನಿಯವರನ್ನು ಪಳಗಿಸಲು ವಿಫಲವಾದಾಗ ಎತ್ತಂಗಡಿಗೆ ಪ್ರಯತ್ನಿಸಿತು.

ದಕ್ಷರಾಗಿದ್ದ ದೊಡ್ಮನಿ ಬೆನ್ನಿಗೆ ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ದೇಶಪಾಂಡೆ ಬಲವಾಗಿ ನಿಂತಿದ್ದರು. ಆದರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕಾರವಾರ ರಿಪಬ್ಲಿಕ್ ಡಾ.ದೊಡ್ಮನಿಯವರನ್ನು ವರ್ಗಾಯಿಸಲು ಯಶಸ್ವಿಯಾಯಿತು; ಅಷ್ಟೇ ಅಲ್ಲ ಮೆಡಿಕಲ್ ಕಾಲೇಜಿನ ಡೀನ್-ಡೈರೆಕ್ಟರ್‌ಗೆ ನಿಗದಿಪಡಿಸಿರುವ ಅರ್ಹತೆ ಇಲ್ಲದವರೆನ್ನಲಾಗಿರುವ ಡಾ.ಗಜಾನನ ನಾಯಕ್‌ರನ್ನು ಹುಬ್ಬಳ್ಳಿ ಕೆಎಂಸಿಯಿಂದ ಆ ಸ್ಥಾನಕ್ಕೆ ತಂದುಕೊಂಡಿತು ಎನ್ನಲಾಗುತ್ತಿದೆ. ಡಾ.ದೊಡ್ಮನಿ ನಂತರ ನ್ಯಾಯವಾಗಿ ಪರಿಶಿಷ್ಠ ವರ್ಗದ ಡಾ.ಹೇಮಗಿರಿ ಅವರಿಗೆ ಅವಕಾಶ ಸಿಗಬೇಕಾಗಿತ್ತು. ಆದರೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಡಾ.ಹೇಮಗಿರಿಯವರಿಗೆ ಮೋಸ-ವಂಚನೆ ಮಾಡಲಾಯಿತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಡಾ. ಗಜಾನನ ನಾಯಕ್

ಡಾ.ದೊಡ್ಮನಿಯವರಿಂದ ತೆರವಾದ ಸ್ಥಾನಕ್ಕೆ ಖಾಯಂ ನಿರ್ದೇಶಕರನ್ನು ನೇಮಿಸಲು 2022ರಲ್ಲಿ ಪ್ರಕ್ರಿಯೆಯ ಕಣ್ಕಟ್ಟು ನಡೆಯಿತು. ನಿಯಮದಂತೆ ಮೊದಲ ನಿರ್ದೇಶಕರ ನಂತರ ಆ ಪೀಠಕ್ಕೆ ಬರುವವರು ಅದೇ ಸಂಸ್ಥೆಯಲ್ಲಿ ಸೇವಾ ಹಿರಿತನ ಮತ್ತಿತರ ಅರ್ಹತೆ ಇರುವವರಾಗಿರಬೇಕು. ಅದರಂತೆ ಕಿಮ್ಸ್‌ನಲ್ಲಿ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಹೇಮಗಿರಿ ಸಕಲ ಅರ್ಹತೆ ಹೊಂದಿದ್ದರು. ಆದರೆ ಹೇಮಗಿರಿಯವರನ್ನು ವ್ಯವಸ್ಥಿತವಾಗಿ ಬದಿಗೆ ಸರಿಸಿ ಅರ್ಹತೆಯಿಲ್ಲದ ಡಾ.ಗಜಾನನ ನಾಯಕ್‌ರನ್ನು ಹಿಂಬಾಗಿಲಿನಲ್ಲಿ ಕಿಮ್ಸ್‌ನ ನಿರ್ದೇಶಕರಾಗಿ ಪ್ರತಿಷ್ಠಾಪಿಸಲಾಯಿತೆಂಬ ಆರೋಪ ದಟ್ಟವಾಗಿದೆ.

ರಾಜ್ಯಪಾಲರ ಹೆಸರಲ್ಲಿ ವಂಚನೆ!

ವೈದ್ಯಕೀಯ ಶಿಕ್ಷಣ ಇಲಾಖೆಯ ಆಧೀನ ಕಾರ್ಯದರ್ಶಿ ದಿನಾಂಕ:19.08.2022ರಂದು ಹೊರಡಿಸಿರುವ ಅಧಿಸೂಚನೆ ಸಂಖ್ಯೆ:ಎಂಇಡಿ 379 ಎಂಪಿಎಸ್ 2022 ಪ್ರಕಾರ ಡಾ.ಗಜಾನನ ನಾಯಕ್ ಕಿಮ್ಸ್‌ನ ಪ್ರಥಮ ನಿರ್ದೇಶಕರು! ಹಾಗಾದರೆ 2014ರಲ್ಲಿ ಸ್ಥಾಪನೆಯಾಗಿ 2016ರಲ್ಲಿ ಕಾರ್ಯಾರಂಭ ಮಾಡಿದ ಕಿಮ್ಸ್‌ಗೆ ಡಾ.ಗಜಾನನ ನಾಯಕ್ ಬರುವ ಮೊದಲು ನಿರ್ದೇಶಕರೇ ಇರಲಿಲ್ಲವೇ? ನೇಮಕಾತಿ ಸಮಿತಿ ಡೈರೆಕ್ಟರ್-ಡೀನ್ ಎಂದು ಆಯ್ಕೆಮಾಡಿ ಕಳಿಸಿದ್ದ ಡಾ.ಭರತ್ ಯಾರು? ಆ ಬಳಿಕ ನಾಲ್ಕು ವರ್ಷ ಡೈರೆಕ್ಟರ್-ಡೀನ್ ಹುದ್ದೆ ನಿರ್ವಹಿಸಿದ ಡಾ.ದೊಡ್ಮನಿ ಎಷ್ಟನೆಯವರು? ಎಂಬ ಪ್ರಶ್ನೆಗಳು ಇಲ್ಲಿ ಸಹಜವಾಗಿ ಉದ್ಭವಿಸುತ್ತವೆ. ಅರ್ಹತೆಯಿಲ್ಲದ ಡಾ.ಗಜಾನನ ನಾಯಕ್‌ರನ್ನು ಕಿಮ್ಸ್‌ನ ಆಯಕಟ್ಟಿನ ಅಧಿಕಾರ ಸ್ಥಾನಕ್ಕೆ ತರುವ ಒಳ ಸಂಚಿನಿಂದ-ಮೊದಲ ನಿರ್ದೇಶಕರ ನಂತರದ ನಿರ್ದೇಶಕ, ಸಂಬಂಧಿಸಿದ ಸಂಸ್ಥೆಯಲ್ಲಿರುವವರೇ ಆಗಿರಬೇಕೆಂಬ ನಿಯಮದ ಕಣ್ಣಿಗೆ ಮಣ್ಣೆರಚಲು-ಈ ಸುಳ್ಳು ಸೃಷ್ಟಿಸಲಾಗಿದೆ ಎಂದು ತರ್ಕಿಸಲಾಗುತ್ತಿದೆ.

ರಾಜ್ಯಪಾಲರ ಹೆಸರಿನಲ್ಲಿರುವ ಅದೇ ಆದೇಶದಲ್ಲಿ ಡಾ.ಗಜಾನನ ನಾಯಕ್ ಕಿಮ್ಸ್‌ನ ನ್ಯಾಯಶಾಸ್ತ್ರ ಪ್ರಾಧ್ಯಾಪಕ ಮತ್ತು ಆ ವಿಭಾಗದ ಮುಖ್ಯಸ್ಥನೆಂದು ನಮೂದಿಸಲಾಗಿದೆ. ಆದರೆ ಡಾ.ನಾಯಕ್ ಹುಬ್ಬಳ್ಳಿ ಕೆಎಂಸಿಯ ಸದ್ರಿ ವಿಷಯ ವಿಭಾಗದ ಎಚ್‌ಒಡಿಯಾಗಿದ್ದರು. ಈಗ ಕಿಮ್ಸ್ ಡೈರೆಕ್ಟರ್ ಆಗಿದ್ದರೂ ವೇತನ ಕೆಎಮ್‌ಸಿಯಿಂದಲೆ ಬಟವಾಡೆಯಾಗುತ್ತಿದೆ. ಅಂದರೆ ಕೆಎಂಸಿಯಿಂದ ಡಾ.ನಾಯಕ್ ಅಕ್ರಮವಾಗಿ ಕಿಮ್ಸ್‌ಗೆ ಎರವಲು ಬಂದಿದ್ದಾರೆ. ಕಿಮ್ಸ್ ಆರಂಭವಾದಂದಿನಿಂದ ಡಾ.ಪ್ರಮೋದ್ ನ್ಯಾಯಶಾಶ್ತ್ರ ವಿಭಾಗದ ಮುಖ್ಯಸ್ಥರಾಗಿದ್ದಾರೆಂದು ದಾಖಲೆಗಳು ಹೇಳುತ್ತವೆ. ಒಂದೇ ಹುದ್ದೆಯಲ್ಲಿ ಇಬ್ಬರು ಕಾರ್ಯನಿರ್ವಹಿಸಲು ಅವಕಾಶವಿದೆಯೆ? ಒಟ್ಟಿನಲ್ಲಿ ಎಲ್ಲ ನಿಯಮ ಗಾಳಿಗೆ ತೂರಿ ಪರಿಶಿಷ್ಟ ವರ್ಗದ ಡಾ.ಹೇಮಗಿರಿಯವರಿಗೆ ಅನ್ಯಾಯ ಮಾಡಿರುವುದು ಸ್ಪಷ್ಟವಾಗುತ್ತದೆ. ರೆಸಿಡೆಂಟ್ ವಿದ್ಯಾರ್ಥಿನಿಯೊಬ್ಬಳಿಂದ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದು ಡಾ.ಹೇಮಗಿರಿಯವರನ್ನು ಮಾನಸಿಕವಾಗಿ ಕುಗ್ಗಿಸಿತು. ಇದನ್ನು ಬೇಕೆಂದೇ ಮಾಡಿಸಲಾಗಿದೆ ಎಂಬ ಆರೋಪವೂ ಎದುರಾಯಿತು. ವಾಸ್ತವ ಅರಿತ ಆ ರೆಸಿಡೆಂಟ್ ವಿದ್ಯಾರ್ಥಿನಿ ಹಿಂದೆ ಸರಿದರೆನ್ನುವ ಮಾತುಗಳು ಈಗಲೂ ಮೆಡಿಕಲ್ ಕಾಲೇಜಿ ವಠಾರದಲ್ಲಿ ಕೇಳಿಬರುತ್ತದೆ.

ದಲಿತರಿಗೆ ಕಿರುಕುಳ

ಯಾರೋ ಮಾಡಿದ ಭ್ರಷ್ಟಾಚಾರ-ಅವಾಂತರ ಅಪರಾಧ ಅಮಾಯಕ ದಲಿತರ ಮೇಲೆ ಹೊರಿಸಲಾಗುತ್ತಿದೆ ಎಂಬ ಅಳಲು ಕಿಮ್ಸ್‌ನಲ್ಲಿದೆ. ಆರ್ಥೋಪಿಡಿಕ್ ವಿಭಾಗದಲ್ಲಿ ಅಂಗವಿಕಲ ಪ್ರಮಾಣ ಪತ್ರ ಕೊಡಲು ಲಂಚ ಪಡೆಯಲಾಗುತ್ತದೆ ಎಂಬ ಗುಲ್ಲೆದ್ದಿತ್ತು. ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಶ ತಪ್ಪೊಪ್ಪಿಕೊಂಡಿದ್ದರು. ಈ ಹಗರಣದಲ್ಲಿ ದಲಿತ ಸಮುದಾಯದ ಡಾ.ಮಧುಕರ್‌ರನ್ನು ಸಿಕ್ಕಿಹಾಕಿಸಲು ಕುತಂತ್ರ ಮಾಡಲಾಯಿತು. ತಾನು ಅರ್ಥೋಪಿಡಿಕ್ ವಿಬಾಗದ ಮುಖ್ಯಸ್ಥ ಡಾ.ಮಧುಕರ್ ಸೂಚನೆಯಂತೆ ಲಂಚ ಪಡೆದಿರುವುದಾಗಿ ಸುಳ್ಳು ಹೇಳಿಕೆಯನ್ನು ಲಂಚ ಪಡೆದಿದ್ದ ಡಾ.ಶ್ರೀಶರಿಂದ ಆಡಳಿತಗಾರರು ಪಡೆದುಕೊಂಡರು. ತಮ್ಮ ಮಾತು ಕೇಳದ ಡಾ.ಮಧುಕರ್ ಮೇಲೆ ಆಡಳಿಗಾರರಿಗೆ ಸಿಟ್ಟಿತ್ತು. ಮಾಜಿ ಶಾಸಕರೊಬ್ಬರ ಮಧ್ಯಪ್ರವೇಶದಿಂದ ಪ್ರಕರಣವನ್ನು ಪರಿಸಮಾಪ್ತಿಗೊಳಿಸಲಾಯಿತು. ಆದರೆ ಇವತ್ತಿಗೂ ಲಂಚದ ಹಣ 35 ಸಾವಿರ ಎಲ್ಲಿ ಹೋಯಿತೆಂಬುದು ಯಾರಿಗೂ ಗೊತ್ತಿಲ್ಲ!

ಫೋರ್ಜರಿ ನೇಮಕಾತಿಗಳು!

ಕಿಮ್ಸ್‌ನಲ್ಲಿ ಅಕ್ರಮ ನೇಕಾತಿಗಳ ಮೂಲಕ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬುದು ಹಳೆಯ ಆರೋಪ. ವೃಂದ ಹಾಗು ನೇಮಕಾತಿ ನಿಯಮದಂತೆ ವೈದ್ಯಕೀಯ ಕಾಲೇಜಿನ ಸಹಾಯಕ ಅಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗೆ 38 ವರ್ಷ ಗರಿಷ್ಠ ವಯೋಮಿತಿ. ಆದರೆ ದಂತ ವೈದ್ಯಕೀಯದ ಸಹಾಯಕ ಅಧ್ಯಾಪಕ ನೇಮಕಾತಿಗೆ 25.11.2020ರಂದು ನಡೆದ ನೇರ ಸಂದರ್ಶನದಲ್ಲಿ 39 ವರ್ಷ ಮೀರಿದ ಡಾ.ವಿನುತಾ ಹೆಗಡೆಯವರನ್ನು ಆಯ್ಕೆ ಮಾಡಲಾಗಿದೆ! ಹವ್ಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಡಾ.ವಿನುತಾ ಹೆಗಡೆ ಶಾಲಾ ದಾಖಲಾತಿಗಳ ಪ್ರಕಾರ ಜನ್ಮ ದಿನಾಂಕ 5.11.1981. ವಯೋಮಿತಿ ಮೀರಿದ ಡಾ.ವಿನುತಾ ಅರ್ಜಿ ಸಲ್ಲಿಸಲಿಕ್ಕೂ ಅರ್ಹರಲ್ಲ; ಅರ್ಜಿ ಹಾಕಿದರೂ ಅದನ್ನು ನಿಯಮದಂತೆ ತಿರಸ್ಕರಿಸಬೇಕು.

ಜಗದೀಶ್

ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದ 6.11.2020ಕ್ಕೆ ಡಾ.ವಿನುತಾರವರ ವಯಸ್ಸು 38 ವರ್ಷವೆಂದು ಸಾಧಿಸಲು ಜನ್ಮ ದಾಖಲೆಯನ್ನು 5.11.1982 ಎಂದು ತಿದ್ದುಪಡಿ ಮಾಡಲಾಗಿದೆ ಎಂಬ ದೂರು ವೈದ್ಯಕೀಯ ಶಿಕ್ಷಣ ಇಲಾಖೆಗೂ ಹೋಗಿದೆ. ಈ ಆಯ್ಕೆ ಪಟ್ಟಿಯಲ್ಲಿ ವಿನುತಾ ಹೆಗಡೆ ನಂತರದ ಸ್ಥಾನದಲ್ಲಿದ್ದ ಪರಿಶಿಷ್ಠ ಪಂಗಡದ ಡಾ.ರವಿ ತಳವಾರ್‌ರಿಗೆ ವಂಚಿಸಲಾಗಿದೆ. ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕರ ಪರಮಾಪ್ತ ಅನೆಸ್ಥೇಸಿಯಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಭಟ್ಟರ ಮಡದಿ ಈ ಡಾ.ವಿನುತಾ ಹೆಗಡೆ ಎಂಬುದು ಗಮನಾರ್ಹ ಸಂಗತಿ.

ಅಂಕೋಲಾದ ಕೆಎಲ್‌ಇ ಆಸ್ಪತ್ರೆಯಲ್ಲಿನ ಅನುಭವವನ್ನು ಬೆಳಗಾವಿ ಕೆಎಲ್‌ಇ ವೈದ್ಯಕೀಯ ಕಾಲೇಜಿನ ಅನುಭವವೆಂದು ತಿರಿಚಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಹುದ್ದೆ ಪಡೆದಿರುವ ಡಾ.ಅಮಿತ್ ಕಾಮತ್ ಪರಿಶಿಷ್ಟ ಪಂಗಡದ ಡಾ.ರಾಜು ತಳವಾರ್‌ರಿಗೆ ನಿರಂತರವಾಗಿ ಕಾಡುತ್ತಿದ್ದಾರೆಂಬ ದೂರುಗಳಿದ್ದರೆ, ಪೀಡ್ರಿಯಾಟ್ರಿಕ್ ವಿಭಾಗದ ಡಾ.ರಾಜಕುಮಾರ್ ಮರೋಳಿ ದಲಿತ ಸಮುದಾಯದ ವಿದ್ಯಾರ್ಥಿಯೋರ್ವನನ್ನು ಪ್ರಾಯೋಗಿಕ ಪರೀಕ್ಷೆಯಲ್ಲಿ ಸುಖಾಸುಮ್ಮನೆ ಅನುತ್ತೀರ್ಣಗೊಳಿಸಿದ್ದಾರೆಂಬ ಪ್ರಕರಣ ಹೈಕೋರ್ಟ್ ಕಟಕಟೆಯನ್ನೇರಿತ್ತು. ’ಹಾವೇರಿಯಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಡಾ.ರಾಜಕುಮಾರ್ ಮರೋಳಿ ದಾವಣಗೆರೆ ವೈದ್ಯಕೀಯ ಕಾಲೇಜಿನಿಂದ ಫೋರ್ಜರಿ ಅನುಭವ ಪತ್ರ ಪಡೆದು ಪ್ರೊಫೆಸರ್ ಹುದ್ದೆ ಪಡೆದಿದ್ದಾರೆ; ತನಗೆ ಅಕ್ರಮವಾಗಿ ಉದ್ಯೋಗ ದಯಪಾಲಿಸಿರುವ ಡೈರೆಕ್ಟರ್ ಋಣ ತೀರಿಸಲು ದಲಿತ ವರ್ಗದ ವಿದ್ಯಾರ್ಥಿ ಸಂದೀಪ್‌ರನ್ನು ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿದ್ದಾರೆ’ ಎಂಬ ಆರೋಪವಿದೆ.

ದಲಿತ ವಿದ್ಯಾರ್ಥಿ ಬಲಿ!

ಕಾರವಾರ ಮೆಡಿಕಲ್ ಕಾಲೇಜಿನ ಆಡಳಿತಗಾರರ ದಲಿತ ದ್ವೇಷಕ್ಕೆ ಪಾಪದ ವಿದ್ಯಾರ್ಥಿಗಳೂ ಬಲಿಯಾಗುತ್ತಿರುವುದು ಆಘಾತಕಾರಿಯಾಗಿದೆ. ಕಳೆದ ಫೆಬ್ರುವರಿ 2022ರಲ್ಲಿ ಜರುಗಿದ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಯಲ್ಲಿ ಪರಿಶಿಷ್ಟ ವರ್ಗದ ಸಂದೀಪ್ ಎಂಬ ಪ್ರತಿಭಾನ್ವಿತ ವಿದ್ಯಾರ್ಥಿ ಅನುತ್ತೀರ್ಣನಾಗುವಂತೆ ಮಾಡಿದ್ದು ಆ ಸಮುದಾಯದ ವಿದ್ಯಾರ್ಥಿಗಳನ್ನು ಕಂಗೆಡಿಸಿಬಿಟ್ಟಿದೆ; ಹಾಸ್ಟೆಲ್‌ನ ಅವ್ಯವಸ್ಥೆ, ಕಳಪೆ ಊಟ-ಉಪಹಾರ ಮತ್ತು ಸರಕಾರದಿಂದ ಬರುವ ಸವಲತ್ತು ಒದಗಿಸದಿರವುದನ್ನು ಸಂದೀಪ್ ಪ್ರಶ್ನಿಸಿದ್ದು ಬೋಗಸ್ ’ಬಿಲ್’ವಿದ್ಯಾ ಪಾರಂಗತರ ಕಣ್ಣು ಕೆಂಪಾಗಿಸಿತ್ತು ಎನ್ನಲಾಗಿದೆ.

ಸಾಮಾನ್ಯವಾಗಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ನಪಾಸಾಗುವುದಿಲ್ಲ; ಪರೀಕ್ಷಕರೂ ಫೇಲ್ ಮಾಡುವಷ್ಟು ಕಟ್ಟುನಿಟ್ಟಾಗಿರುವುದಿಲ್ಲ. ಸಂದೀಪ್ ಪೀಡ್ರಿಯಾಟ್ರಿಕ್ಸ್ ಪ್ರಾಕ್ಟಿಕಲ್ ಒಂದನ್ನು ಬಿಟ್ಟು ಬೇರೆಲ್ಲಾ ಥಿಯರಿ ಹಾಗು ಪ್ರಾಕ್ಟಿಕಲ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದ.

ಇದನ್ನೂ ಓದಿ: ಮೋದಿ ಸರ್ಕಾರ ಭಾರತದ ಬಹುತ್ವವನ್ನು ಧ್ವಂಸಗೊಳಿಸುತ್ತಿದೆ: ಅಮರ್ತ್ಯ ಸೇನ್

ಆಘಾತಗೊಂಡ ಸಂದೀಪ್ ಹೈಕೋರ್ಟ್ ಮೊರೆಹೋದ. ರಿಟ್ ಅರ್ಜಿ (ಸಂಖ್ಯೆ:10694/2022) ವಿಚಾರಣೆ ನಡೆಸಿದ ಹೈಕೋರ್ಟ್ ಸಂದೀಪ್‌ಗೆ ಮರು ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಆದೇಶಿಸಿತು. ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಮರು ಪ್ರಯೋಗಿಕ ಪರೀಕ್ಷೆಯಲ್ಲಿ ಸಂದೀಪ್ ಉತ್ತಮ ಅಂಕ ಗಳಿಸಿ ಉತ್ತೀರ್ಣನಾದ! ತಮ್ಮ ಹಿಡನ್ ಹಿತಾಸಕ್ತಿ ಮತ್ತು ಪ್ರತಿಷ್ಠೆಗೆ ಮುಗ್ಧ ವಿದ್ಯಾರ್ಥಿಗಳ ಭವಿಷ್ಯವನ್ನೇ ಕರಾಳವಾಗಿಸುವ ಬರ್ಬರ ಕ್ರೌರ್ಯಕ್ಕೂ ಕಾರವಾರ ಮೆಡಿಕಲ್ ಕಾಲೇಜಿನ ಆಡಳಿತಗಾರರು ಹೇಸುವುದಿಲ್ಲ ಎಂಬುದೀಗ ಜಗಜ್ಜಾಹೀರಾಗಿಹೋಗಿದೆ!

ಕಿಮ್ಸ್‌ನ ನಿರ್ದೇಶಕ ಡಾ.ಗಜಾನನ ನಾಯಕ್ ಮತ್ತು ಅಧೀಕ್ಷಕ ಡಾ.ಶಿವಾನಂದ ಕುಡ್ತರ್‌ಕರ್‌ರ ದಲಿತ ದ್ವೇಷದಿಂದ ನಿರಪರಾಧಿ ವಿದ್ಯಾರ್ಥಿ ಸಂದೀಪ್ ಕಷ್ಟ-ನಷ್ಟಕ್ಕೆ ಈಡಾಗಿದ್ದಾನೆಂಬುದು ಮೇಲಿನ ಪ್ರಕರಣದಿಂದ ತಿಳಿಯುತ್ತದೆ. ಆತ ಇಂಟರ್‍ನ್‌ಶಿಪ್‌ಅನ್ನು ನಾಲ್ಕು ತಿಂಗಳು ವಿಳಂಬವಾಗಿ ಆರಂಭಿಸುವಂತಾಗಿದೆ. ’ಗುರು’ಗಳ ದ್ರೋಹದಿಂದಾದ ಈ ವಿಳಂಬ ಮುಂದೆ ಆತನನ್ನು ಹಲವು ಅವಕಾಶಗಳಿಂದ ವಂಚಿತನಾಗಿಸುವ ಸಾಧ್ಯತೆಯೂ ಇದೆ. ಇಂಟರ್‍ನಶಿಪ್‌ಅನ್ನು ಕಾರವಾರದಲ್ಲೇ ಮಾಡುತ್ತಿರುವ ಸಂದೀಪ್‌ಗೆ ಹೈಕೋರ್ಟ್ ತೀರ್ಪಿನಿಂದ ಮುಖಭಂಗವಾಗಿರುವ ’ಗುರು’ಗಳು ಕಾಡುತ್ತಲೇ ಇದ್ದಾರಂತೆ; “ನೀನು ಅದ್ಹೇಗೆ ಇಟರ್‍ನಶಿಪ್ ಮುಗಿಸುತ್ತೀಯೋ ನೋಡ್ತೇವೆ” ಎಂಬ ಬೆದರಿಕೆಯನ್ನೂ ಹಾಕಿದ್ದಾರನ್ನಲಾಗಿದೆ. ಕಿರುಕುಳದಿಂದ ಸಂದೀಪ್‌ಗೆ ಅಭದ್ರತೆ, ಭಯ ಶುರುವಾಗಿದೆ! ಈ ನಪಾಸು ಪ್ರಕರಣ ಮತ್ತು ಒಂದರ ಹಿಂದೊಂದರಂತೆ ನಡಯುತ್ತಿರುವ ದಾಳಿಯಿಂದ ಕಿಮ್ಸ್‌ನ ದಲಿತ ವಿದ್ಯಾರ್ಥಿ-ಸಿಬ್ಬಂದಿ ಸಮೂಹ ಆತಂಕದಲ್ಲಿ ದಿನ ದೂಡುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ದಲಿತೇತರ ಬೋಧಕ ಸಿಬ್ಬಂದಿಯೊಬ್ಬರು ’ನ್ಯಾಯಪಥ’ಕ್ಕೆ ಹೇಳಿದರು.

ಅನರ್ಹರ ಆಡುಂಬೊಲ

ಮತ್ತೊಂದಡೆ ಕಿಮ್ಸ್, ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್‌ಎಂಸಿ) ನಿಗದಿಪಡಿಸಿರುವ ಅರ್ಹತೆ-ಅನುಭವಗಳಿಲ್ಲದವರ ಆಡಳಿತಕ್ಕೊಳಪಟ್ಟಿದೆ ಎಂಬ ಕೂಗೆದ್ದಿದೆ. ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರ್‌ಕರ್ ಅಲಂಕರಿಸಿರುವ ಹುದ್ದೆಗೆ ಬೇಕಾದ ಅರ್ಹತೆಯೇ ಇಲ್ಲ; ಇವರು ನೇಮಿಸಿಕೊಂಡಿರುವ ಕೆಲವು ಅಧ್ಯಾಪಕರು ಮತ್ತಿತರ ಸಿಬ್ಬಂದಿಗೂ ಆ ಸ್ಥಾನಕ್ಕೆ ಬೇಕಾದ ಅರ್ಹತೆ ಹೊಂದಿಲ್ಲ. ಹೀಗಾಗಿ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಋಣಾಯ್ಮಕ ಪರಿಣಾಮ ಆಗುತ್ತಿದೆ ಎನ್ನುವ ಪುಕಾರುಗಳಿವೆ.

ಎನ್‌ಎಂಸಿ ನಿಯಮದಂತೆ ವೈದ್ಯಕೀಯ ಕಾಲೇಜಿನಲ್ಲಿ ನಿರ್ದೇಶಕನಾಗಬೇಕಾದರೆ ಕನಿಷ್ಟ ಐದು ವರ್ಷ ಪ್ರಾಧ್ಯಾಪಕನಾಗಿ ಪಾಠಮಾಡಿದ ಅನುಭವವಿರಬೇಕು. ಕಾಲೇಜಿನ ಅಧೀಕ್ಷಕನಾಗಲು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ (ಎಂಡಿ/ಎಂಎಸ್) ಕನಿಷ್ಠ ಹತ್ತು ವರ್ಷ ಆಡಳಿತದಲ್ಲಿ ಅನುಭವವಿರಬೇಕು. ಈ ಅರ್ಹತೆ ಡಾ.ಗಜಾನನ ನಾಯಕ್ ಮತ್ತು ಡಾ.ಶಿವಾನಂದ ಕುಡ್ತರ್‌ಕರ್‌ಗೆ ಇಲ್ಲ. ಆರೋಗ್ಯ ಇಲಾಖೆಯ ನೌಕರರಾದ ಡಾ.ಕುಡ್ತರ್‌ಕರ್ ಮೆಡಿಕಲ್ ಕಾಲೇಜಿಗೆ ಬರಬಹುದೇ? ಎಂಬ ಪ್ರಶ್ನೆ ಎದ್ದಿದೆ.

ಅನರ್ಹ ಮೆಡಿಕಲ್ ಸುಪರಿಂಡೆಂಟ್ ಇರುವುದರಿಂದ ಎಂಸಿಐ 2018-19ರಲ್ಲಿ ಕಿಮ್ಸ್ ಮಾನ್ಯತೆ ರದ್ದುಪಡಿಸಿತ್ತು. ಆಗ ಅನರ್ಹ ಅಧೀಕ್ಷನನ್ನು ಬದಲಾಯಿಸುವುದಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ.ಮಂಜುಳಾ ಕೋರ್ಟಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ ಡಾ.ಕುಡ್ತರ್‌ಕರ್ ಇವತ್ತಿಗೂ ಅದೇ ಹುದ್ದೆಯಲ್ಲಿ ಅಬಾಧಿತವಾಗಿ ಮುಂದುವರಿದ್ದಾರಷ್ಟೇ ಅಲ್ಲ, ಕಿಮ್ಸ್ ಆಡಳಿತವನ್ನು ನಿಯಂತ್ರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಡಾ.ಕುಡ್ತರ್‌ಕರ್ ವೈದ್ಯಕೀಯ ಕಲಿಯುತ್ತಿರುವ ತನ್ನ ಮಗನಿಂದ ಗೀತಾ ಬಾನಾವಳಿ ಎಂಬ ಬಾಣಂತಿಗೆ ಅರವಳಿಕೆ ಚುಚ್ಚುಮದ್ದು ಕೊಡಿಸಿ ಅನಾಹತವಾಗಿತ್ತು ಎಂಬ ಆರೋಪ ಹಿಂದೆಎದ್ದಿತ್ತು. ಗೀತಾ ಸಾವಿಗೀಡಾಗಿದ್ದರು. ಆಗ ಕಾರವಾರದಲ್ಲಿ ಆಕ್ರೋಶ-ಪ್ರತಿಭಟನೆ ತಿಂಗಳುಗಟ್ಟಲೆ ಭುಗಿಲೆದ್ದಿತ್ತು; ಶಾಸಕಿ ರೂಪಾಲಿ ನಾಯ್ಕ್ ತಿರುಗಿಬಿದ್ದಿದ್ದರು. ಬೆಂಗಳೂರಿನ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿರುವ ಕೆಲವರ ಕೃಪಾಶ್ರಯದಿಂದ ಡಾ.ಕುಡ್ತರ್‌ಕರ್ ಶಾಸಕಿಗೂ ಕೇರ್ ಮಾಡದೆ ಕಿಮ್ಸ್‌ನಲ್ಲಿ ಉಳಿದುಕೊಂಡದ್ದಾರೆಂಬ ಮಾತು ಸಾಮಾನ್ಯವಾಗಿದೆ!

ಕಿಮ್ಸ್‌ನ ಖರೀದಿ-ಕಾಮಗಾರಿ-ಗುತ್ತಿಗೆ ಮತ್ತಿತರ ಹಣಕಾಸಿನ ವ್ಯವಹಾರದ್ದೇ ಪ್ರತ್ಯೇಕ ಪುರಾಣ ಆಗುವಷ್ಟಿದೆ ಎನ್ನಲಾಗಿದೆ. ಇದೆಲ್ಲವನ್ನು ಸರಿಪಡಿಸಬೇಕಾದ ರಾಜ್ಯ ಸರಕಾರ ಮತ್ತು ದಿಲ್ಲಿಯ ಎನ್‌ಎಂಸಿ (National Medical Council) ಕಣ್ಮುಚ್ಚಿ ಕೂತಿದೆ. ಎನ್‌ಎಂಸಿ ಪರಿಶೀಲನಾ ಸಮಿತಿ ಮುಖ್ಯಸ್ಥ ಡಾ.ಗಂಗಾಧರಯ್ಯ ಕಿಮ್ಸ್ ತಪಾಸಣೆ ಮಾಡದೆ ’ಸನ್ಮಾನ’ ಸ್ವೀಕರಿಸಿ ಹೋಗಿದ್ದಾರೆಂಬ ಆರೋಪ ಗುಲ್ಲೆದ್ದಿದೆ; ನ್ಯಾಯಾಧೀಶರಂತೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿಭಾಯಿಸಬೇಕಿದ್ದ ಎನ್‌ಎಂಸಿ ಮುಖ್ಯಸ್ಥರ ನಡೆ ಅನೇಕ ಅನುಮಾನಗಳಿಗೆ ಎಡೆಮಾಡಿದೆ ಎಂಬ ಚರ್ಚೆ ಕಿಮ್ಸ್ ಕಾರಿಡಾರ್‌ನಲ್ಲಿ ಜೋರಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...