ಕೊರೊನಾ, ಓಮಿಕ್ರಾನ್ ರೂಪಾಂತರದ ಆತಂಕದ ಹಿನ್ನೆಲೆ ಇಂದಿನಿಂದ ರಾಜ್ಯಾದಂತ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂದು (ಶುಕ್ರವಾರ) ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.
ನಿಯಮಗಳನ್ನು ಮೀರಿದರೇ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ಸರ್ಕಾರ ನೀಡಿದೆ. ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಗಿ ಕ್ರಮ ಕೈಗೊಂಡಿದೆ.
ಬೆಂಗಳೂರು ನಗರದಲ್ಲಿ ಬಿಎಂಟಿಸಿ ಸಂಚಾರ ವಿರಳವಾಗಿರಲಿದೆ. ಅಗತ್ಯ ಮತ್ತು ತುರ್ತುಸೇವೆಗಾಗಿ ಶೇಕಡಾ 10 ರಷ್ಟು ಬಸ್ಗಳು ಮಾತ್ರ ರೋಡಿಗಿಳಿಯಲಿವೆ. ವಿಮಾನ ನಿಲ್ದಾಣಕ್ಕೆ ತೆರಳುವ ವಾಯುವಜ್ರ ಬಸ್ಗಳು ಓಡಾಡಲಿವೆ. ಕೆಸ್ಆರ್ಟಿಸಿ ಬಸ್ಗಳ ಸಂಚಾರವಿರಲಿದೆ.
ಇದನ್ನೂ ಓದಿ: 7 ತಿಂಗಳಲ್ಲಿ ಮೊದಲ ಬಾರಿಗೆ ದೇಶದಲ್ಲಿ ಲಕ್ಷ ಗಡಿ ದಾಟಿದ ಕೊರೊನಾ ಪ್ರಕರಣಗಳು
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ, ಲ್ಯಾಬ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಗೆ ತೆರಳುವ ರೋಗಿಗಳು ಮತ್ತು ಅವರನ್ನು ಚಿಕಿತ್ಸೆ, ಪರೀಕ್ಷೆಗೆ ಕರೆದುಕೊಂಡು ಹೋಗವವರು, ಮಾಧ್ಯಮದವರು, ಸರ್ಕಾರಿ ಉದ್ಯೋಗಿಗಳು. ಪೊಲೀಸ್, ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿ ಶಾಮಕ, ತುರ್ತು ಸೇವೆಗಳ ಸಿಬ್ಬಂದಿ ಓಡಾಡಬಹುದು.
ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ‘ನಮ್ಮ ಮೆಟ್ರೋ’ ರೈಲು ಸಂಚಾರ ಇರಲಿದೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 8 ರಿಂದ ರಾತ್ರಿ 9 ರ ತನಕ ಮೆಟ್ರೋ ರೈಲು ಸಂಚರಿಸಲಿದೆ. ನಾಗಸಂದ್ರ, ಸಿಲ್ಕ್ ಇನ್ಸ್ಟಿಟ್ಯೂಟ್, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ಬೆಳಗ್ಗೆ 8 ಗಂಟೆಗೆ ರೈಲು ಹೊರಡಲಿದೆ. ಪ್ರತಿ 20 ನಿಮಿಷಕ್ಕೆ ಒಂದು ರೈಲು ಇರಲಿದೆ. ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ರಾತ್ರಿ 9 ಗಂಟೆಗೆ ಹೊರಡಲಿದೆ.
ಅಗತ್ಯ ಸೇವೆಗಳು ಇರುತ್ತವೆ. ಸಿನಿಮಾ ಥಿಯೇಟರ್, ಮಾಲ್, ಜಿಮ್, ಉದ್ಯಾನವನ, ಪ್ರತಿಭಟನೆ, ರ್ಯಾಲಿ, ಮದ್ಯ ಮಳಿಗೆ, ಶಾಲಾ-ಕಾಲೇಜು ಬಂದ್ ಇರಲಿವೆ.