ಬುಧವಾರದಂದು ಪ್ರಧಾನಿ ಮೋದಿ ಪಂಜಾಬ್ಗೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಉಂಟಾದ ಭದ್ರತಾ ಲೋಪದ ಪ್ರಕರಣವನ್ನು ಸುಪ್ರೀಂಕೋರ್ಟ್ ಇಂದು(ಶುಕ್ರವಾರ) ವಿಚಾರಣೆ ನಡೆಸಲಿದೆ. ಆದರೆ ಘಟನೆಯ ಸಮಯದಲ್ಲಿ ಮಾಡಲಾಗಿರುವ ಹೊಸ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದದ ಬಗ್ಗೆ ಆಡಳಿತರೂಢ ಬಿಜೆಪಿಯ ಸಚಿವರು ಮತ್ತು ನಾಯಕರ ಹೇಳಿಕೆಗಳ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಧಾನಿ ಮೋದಿಯ ಕಾರು ಫ್ಲೈಓವರ್ನಲ್ಲಿ ನಿಂತಿರುವಾಗ, ಅವರ ಕಾರಿನ ತೀರಾ ಹತ್ತಿರದಲ್ಲೇ ಒಂದಷ್ಟು ಜನರು ಬಿಜೆಪಿ ಧ್ವಜವನ್ನು ಬೀಸುತ್ತಾ, ಘೋಷಣೆ ಕೂಗುವುದನ್ನು ಪ್ರತಿಭಟನಾ ನಿರತ ರೈತರು ಪ್ರಧಾನಿಯನ್ನು ತಡೆದಿದ್ದಾರೆ ಎಂದು ಮಾಧ್ಯಮಗಳು ಬುಧವಾರ ಸುದ್ದಿ ಮಾಡಿದ್ದವು. ಆದರೆ ಡಿಜಿಟಲ್ ಮಾಧ್ಯಮಗಳು, ಪ್ರಧಾನಿಯ ಕಾರಿನ ತೀರಾ ಹತ್ತಿರದಲ್ಲಿ ಇದ್ದ ಗುಂಪು ರೈತರ ಗುಂಪಲ್ಲ, ಬಿಜೆಪಿ ಕಾರ್ಯಕರ್ತರಾಗಿದ್ದು ಅವರ ಕೈಯ್ಯಲ್ಲಿ ಇದ್ದಿದ್ದು, ಬಿಜೆಪಿ ಧ್ವಜ ಎಂದು ಸ್ಪಷ್ಟವಾಗಿ ತೋರಿಸಿದ್ದವು.
ಇದನ್ನೂ ಓದಿ:ಭದ್ರತಾ ಲೋಪ: ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್, ಪಂಜಾಬ್ ಸರ್ಕಾರದಿಂದ ತನಿಖಾ ತಂಡ…10 ಪಾಯಿಂಟ್ಸ್
ಇದೀಗ ಅದೇ ಘಟನೆಯ ಸ್ಪಷ್ಟ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೊವನ್ನು ಪ್ರಧಾನಿಯ ಕಾರು ನಿಂತಿದ್ದ ಫ್ಲೈಓವರ್ನಲ್ಲೇ ಶೂಟ್ ಮಾಡಲಾಗಿದೆ.
ವಿಡಿಯೊದಲ್ಲಿ, ಬಿಜೆಪಿ ಕಾರ್ಯಕರ್ತರು ಪ್ರಧಾನಿಯ ಕಾರಿಗಿಂತ ಕೆಲವೇ ಮೀಟರ್ ಅಂತರದಲ್ಲಿ ನಿಂತು ಧ್ವಜವನ್ನು ಬೀಸುತ್ತಾ ಘೋಷಣೆ ಕೂಗುತ್ತಿದ್ದಾರೆ. ಜನರು ಹಿಡಿದಿರುವ ಧ್ವಜವು ಬಿಜೆಪಿಯದ್ದಾಗಿದ್ದು, ನರೇಂದ್ರ ಮೋದಿ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದಾರೆ.
ಎರಡು ರಸ್ತೆಗಳಿರುವ ಫ್ಲೈಓವರ್ನಲ್ಲಿ ಒಂದು ರಸ್ತೆಯಲ್ಲಿ ಪ್ರಧಾನಿಯ ಕಾರು ಮತ್ತು ಅವರ ಬೆಂಗಾವಲು ಇದ್ದು, ಇನ್ನೊಂದು ರಸ್ತೆಯಲ್ಲಿ ಜನರು ಘೋಷಣೆ ಕೂಗುತ್ತಿದ್ದಾರೆ. ಈ ರಸ್ತೆಯಲ್ಲಿ ಬಸ್ಸು ಮತ್ತು ಇತರ ವಾಹನ ನಿಂತಿರುವುದು ಕೂಡಾ ಕಾಣುತ್ತದೆ. ಜೊತೆಗೆ ಘೋಷಣೆ ಕೂಗುತ್ತಿರುವ ವ್ಯಕ್ತಿಗಳ ಮುಖವೂ ಸ್ಪಷ್ಟವಾಗಿದೆ. ಆದರೆ ಯಾರೊಬ್ಬರೂ ಅವರನ್ನು ಚದುರಿಸುವುದಾಗಲಿ, ದೂರ ಕಳಿಸುವುದಾಗಲಿ ಮಾಡುತ್ತಿಲ್ಲ.
ಇದನ್ನೂ ಓದಿ:ಪಂಜಾಬ್ ಭದ್ರತಾ ಲೋಪ ವಿವಾದ; ಪತ್ರಕರ್ತೆಯೊಬ್ಬರ ಹಲವು ಪ್ರಶ್ನೆಗಳು!
ಪ್ರಧಾನಿ ಮೋದಿ ಈ ಫ್ಲೈಓವರ್ನಲ್ಲಿ ಸುಮಾರು 20 ನಿಮಿಷಗಳ ಕಾಲ ನಿಂತು, ನಂತರ ತನ್ನ ಚುನಾವಣಾ ರ್ಯಾಲಿಯನ್ನು ರದ್ದುಗೊಳಿಸಿ ವಿಮಾನ ನಿಲ್ದಾಣಕ್ಕೆ ವಾಪಾಸಾಗಿದ್ದಾರೆ. ಈ ವೇಳೆ “ತನ್ನನ್ನು ಜೀವ ಸಹಿತ ವಿಮಾನ ನಿಲ್ದಾಣಕ್ಕೆ ತಲುಪಿಸಿದ್ದಕ್ಕೆ ಪಂಜಾಬ್ ಸಿಎಂಗೆ ಧನ್ಯವಾದ ತಿಳಿಸಿ” ಎಂದು ಅಧಿಕಾರಿಗಳೊಂದಿಗೆ ಹೇಳಿದ್ದಾಗಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಈ ಹೇಳಿಕೆಯಲ್ಲಿ ಅವರು, ತನ್ನ ಜೀವಕ್ಕೆ ಅಪಾಯ ಇತ್ತು ಎಂದು ಸಂದೇಶ ಹರಡಿದ್ದರು. ಅವರ ಹೇಳಿಕೆಯ ಹಿನ್ನಲೆಯಲ್ಲೇ ಕೇಂದ್ರ ಮಂತ್ರಿ ಸೃತಿ ಇರಾನಿ ಅವರು ಪ್ರಧಾನಿಯನ್ನು ಕೊಲ್ಲಲು ಸಂಚು ಹೂಡಲಾಗಿದೆ ಎಂದು ಹೇಳಿಕೆ ನೀಡಿದ್ದರು.
ಇದೀಗ ಹೊಸದಾಗಿ ಬಂದ ವಿಡಿಯೊದಲ್ಲಿ ಫ್ಲೈಓವರ್ ಮೇಲೆ ಇದ್ದ ಜನರು ಯಾರು ಎಂದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಹೋರಾಟದ ಸುದ್ದಿಗಳನ್ನು ನೀಡುತ್ತಿದ್ದ ಟ್ವಿಟರ್ ಖಾತೆ ಟ್ರಾಕ್ಟರ್ ಟು ಟ್ವಿಟರ್, “ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಕಾರ್ಯಕರ್ತರಿಂದ ಮತ್ತು ಅವರ ಪರವಾಗಿ ನಿಂತ ಕೆಲವೇ ಜನರಿಂದ ತಪ್ಪಿಸಿಕೊಂಡಿದ್ದಾರೆಯೇ?” ಎಂದು ಪ್ರಶ್ನಿಸಿದ್ದು, ಪಂಜಾಬ್ಅನ್ನು ಕೆಟ್ಟದಾಗಿ ಬಿಂಬಿಸುವುದನ್ನು ನಿಲ್ಲಿಸಿ ಎಂದು ಹೇಳಿದೆ. ಜೊತೆಗೆ ವೈರಲ್ ವಿಡಿಯೋವನ್ನು ಕೂಡಾ ಅದು ಟ್ವಿಟರ್ಗೆ ಅಪ್ಲೋಡ್ ಮಾಡಿದೆ.
ಇದನ್ನೂ ಓದಿ:ಪಂಜಾಬ್: ಪ್ರಧಾನಿ ಕಾರ್ಯಕ್ರಮ ರದ್ದು; ಏನಂತಾರೆ ನೆಟ್ಟಿಗರು?
ಬಿಜೆಪಿ ಮತ್ತು ಒಕ್ಕೂಟ ಸರ್ಕಾರವು ಭದ್ರತಾ ಲೋಪ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಮೇಲೆ ಮುಗಿಬಿದ್ದಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಚನ್ನಿ ಅವರು, “ರಾಜ್ಯ ಸರ್ಕಾರದಿಂದ ಯಾವುದೆ ಲೋಪ ಆಗಿಲ್ಲ. ಆದರೆ ಪ್ರಧಾನಿ ಮೋದಿ ಅವರು ರಸ್ತೆ ಮೂಲಕ ತೆರಳಲಿದ್ದಾರೆ ಎಂದು ನಿಗದಿಯಾಗಿರಲಿಲ್ಲ. ಪ್ರಧಾನಿ ಮೋದಿ ಜೀವಕ್ಕೆ ಯಾವುದೆ ಬೆದರಿಕೆ ಇಲ್ಲ. ಒಬ್ಬ ಪಂಜಾಬಿಯಾಗಿ ಅವರ ಜೀವವನ್ನು ರಕ್ಷಿಸಲು ನಾನು ಜೀವ ಪಣಕ್ಕಿಡಲೂ ಸಿದ್ದ” ಎಂದು ಹೇಳಿದ್ದರು.
ಹೊಸ ವೈರಲ್ ವಿಡಿಯೊವನ್ನು ಹಲವಾರು ಜನರು ಹಂಚಿ ಕೊಂಡಿದ್ದು, ಅಲ್ಲಿಗೆ ಬಿಜೆಪಿ ಕಾರ್ಯಕರ್ತರು ಹೇಗೆ ಬಂದರು? ಇದು ಭದ್ರತಾ ಲೋಪವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಅವರು ತನ್ನ ಚುನಾವಣ ಭಾಷಣಕ್ಕೆ ವಾಯು ಮಾರ್ಗದ ಮೂಲಕ ತೆರಳುವುದು ಎಂದು ಮೊದಲಿಗೆ ನಿಗದಿಯಾಗಿತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣ ನೀಡಿ, ಎರಡು ಗಂಟೆಗಳ 111 ಕಿ.ಮಿ. ರಸ್ತೆ ಮಾರ್ಗವನ್ನು ಅನಿರೀಕ್ಷಿತವಾಗಿ ಆಯ್ಕೆ ಮಾಡಲಾಗಿತ್ತು. ಹೀಗೆ ಆಕಸ್ಮಿಕವಾಗಿ ರಸ್ತೆ ಬದಲಾಗಿದ್ದು ಬಿಜೆಪಿ ಕಾರ್ಯಕರ್ತರಿಗೆ ಹೇಗೆ ತಿಳಿಯಿತು ಎಂದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಫ್ಲೈಓವರ್ನಲ್ಲಿದ್ದ ಬಿಜೆಪಿ ಕಾರ್ಯಕರ್ತರು ಧ್ವಜದೊಂದಿಗೆ ಅಲ್ಲಿಗೆ ತಯಾರಾಗಿಯೇ ಬಂದಿದ್ದರು ಎಂದು ಅವರ ವೇಷಭೂಷಣಗಳನ್ನು ನೋಡಿದರೆ ತಿಳಿಯುತ್ತದೆ, ಹಾಗಾದರೆ ಅವರಿಗೆ ಅಲ್ಲಿ ಪ್ರಧಾನಿ ತಲುಪುತ್ತಾರೆ ಎಂದು ಹೇಗೆ ತಿಳಿಯಿತು ಎಂದು ಕೂಡಾ ಪ್ರಶ್ನಿಸಲಾಗಿದೆ.
ಇದನ್ನೂ ಓದಿ:ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲ ರೈತ ಸಂಘಟನೆಗಳ ನಿರ್ಧಾರ: ಅಂತರ ಕಾಯ್ದುಕೊಂಡ SKM
ಈ ಮಧ್ಯೆ, 2018ರಲ್ಲಿ ಬಿಜೆಪಿ ತನ್ನ ಅಧೀಕೃತ ಖಾತೆಯಲ್ಲಿ ಹಂಚಿರುವ ವಿಡಿಯೊವನ್ನು ಪಂಜಾಬ್ ಕಾಂಗ್ರಸ್ ಇಂದು ಹಂಚಿಕೊಂಡಿದ್ದು, “ನರೇಂದ್ರ ಮೋದಿ ಅವರ ಈ ನಡೆ ಏನು ಹೇಳುತ್ತದೆ? ಪಂಜಾಬ್ನಲ್ಲಿರುವಾಗ ನೀವು ನಿಮ್ಮ ಅಡ್ಡದಾರಿ ದುಸ್ಸಾಹಸಗಳನ್ನು ‘ಭದ್ರತಾ ಲೋಪ’ ಎಂದು ಕರೆಯುತ್ತೀರಿ. ಬಿಜೆಪಿ ಸರ್ಕಾರ ಇರುವ ಬೇರೆ ಕಡೆ ಇದನ್ನು ಶ್ರಮದಾನ ಎಂದು ಕರೆಯುತ್ತಾರೆಯೇ?” ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ಪಂಜಾಬ್ ಕೋರ್ಟ್ ಸ್ಪೋಟ ಪ್ರಕರಣಕ್ಕೆ ತಿರುವು: ಮೃತಪಟ್ಟ ಮಾಜಿ ಪೊಲೀಸ್ ಆರೋಪಿ!