ವಯಸ್ಸಾದ ಪೋಷಕರನ್ನು ಆರೈಕೆ ಮಾಡುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ತಂದೆಯಿಂದ ಆಸ್ತಿಯನ್ನು ಉಡುಗೊರೆಯಾಗಿ ಪಡೆದ ನಂತರ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದ ಪುತ್ರಿ ಮತ್ತು ಅಳಿಯನ ವರ್ತನೆಯನ್ನು ಗಮನಿಸಿದ್ದರು.
ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಹೊಣೆಗಾರಿಕೆ ಹೊರತು ದಯೆಯ ವಿಚಾರವಲ್ಲ. ವೃದ್ಧಾಪ್ಯದಲ್ಲಿ ಹೆತ್ತವರನ್ನು ಆರೈಕೆ ಮಾಡುವುದು ಮಕ್ಕಳ ಶಾಸನಬದ್ಧ ಜವಾಬ್ದಾರಿ. ಪೋಷಕರು ಆಸ್ತಿಯನ್ನು ಉಡುಗೊರೆಯಾಗಿ ನೀಡಿದಾಗ ಮಕ್ಕಳ ಮೇಲೆ ಈ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಕೋರ್ಟ್ ಹೇಳಿದೆ.
ಪ್ರಕರಣದಲ್ಲಿ ಪೋಷಕರ ಆಸ್ತಿಯನ್ನು ಉಡುಗೊರೆಯಾಗಿ ಪಡೆದುಕೊಂಡ ಪುತ್ರಿ ನಂತರ ಅವರನ್ನು ಆರೈಕೆ ಮಾಡದೆ, ಪೋಷಕರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿರುವುದನ್ನು ಕೋರ್ಟ್ ಗಮನಿಸಿದೆ. ಪೋಷಕರಿಗೆ ಮಕ್ಕಳು ಕಿರುಕುಳ ನೀಡುವ ಪ್ರಕರಣಗಳು ಅನೇಕ ಕಾರಣಗಳಿಂದ ಬೆಳಕಿಗೆ ಬರುತ್ತಿಲ್ಲ. ಇಂತಹ ವಿಷಯಗಳಲ್ಲಿ ನ್ಯಾಯಾಲಯಗಳು, ಅಧಿಕಾರಿಗಳು ಮತ್ತು ನ್ಯಾಯಮಂಡಳಿಗಳು ಜಾಗರೂಕತೆಯಿಂದ ಕೆಲಸ ಮಾಡಬೇಕು ಎಂದು ವಿಭಾಗೀಯ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಏನಿದು ಪ್ರಕರಣ?
2018ರ ಸೆ.28ರಂದು ತುಮಕೂರಿನ ಗುಬ್ಬಿ ತಾಲೂಕಿನ ಬಸವಪಟ್ಟಣದ ಆರ್.ಕವಿತಾ ಅವರಿಗೆ ತಂದೆ ರಾಜಶೇಖರಯ್ಯ ತಮ್ಮ ಆಸ್ತಿಯನ್ನು ಉಡುಗೊರೆಯಾಗಿ ನೀಡಿದ್ದರು. ಇದಾದ ಕೆಲ ದಿನಗಳ ಬಳಿಕ ನಮ್ಮನ್ನು ಸರಿಯಾಗಿ ನೊಡಿಕೊಳ್ಳುತ್ತಿಲ್ಲ ಮತ್ತು ಮನೆ ನಿರ್ಮಾಣಕ್ಕೆ 10 ಲಕ್ಷ ಹಣ ತೆಗೆದುಕೊಂಡಿದ್ದಾರೆ ಎಂದು ಪೋಷಕರು ಉಪವಿಭಾಗಾಧಿಕಾರಿ ಕಚೇರಿಗೆ ದೂರು ನೀಡಿದ್ದರು.
ಆದರೆ ಕವಿತಾ, ತಂದೆ ರಾಜಶೇಖರಯ್ಯ ಮತ್ತು ತಾಯಿ ನಿರ್ಮಲಾ ಅವರನ್ನು ಆರೈಕೆ ಮಾಡುತ್ತಿದ್ದೇವೆ. ತಂದೆಯ ವೈದ್ಯಕೀಯ ಚಿಕಿತ್ಸೆಗಾಗಿ 30 ಲಕ್ಷ ಹಣವನ್ನು ಖರ್ಚು ಮಾಡಿದ್ದೇವೆ ಎಂದು ಹೇಳಿದ್ದರು.
ಪೋಷಕರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದನ್ನು ಗಮನಿಸಿದ ಉಪವಿಭಾಗಾಧಿಕಾರಿ ಆಸ್ತಿ ಉಡುಗೊರೆ ಕ್ರಯವನ್ನು ಅಮಾನ್ಯಗೊಳಿಸಿದ್ದರು. ಈ ಆದೇಶ ಪ್ರಶ್ನಿಸಿ ಕವಿತಾ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದನ್ನು ಏಕ ಸದಸ್ಯ ನ್ಯಾಯಪೀಠ 2021ರ ಸೆ.11ರಂದು ವಜಾಗೊಳಿಸಿತ್ತು. ಇದರಿಂದ ಕವಿತಾ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನು ಓದಿ: ಮಹಿಳಾ ಪತ್ರಕರ್ತೆ ಜೊತೆ ಅನುಚಿತ ವರ್ತನೆ: ಬಿಜೆಪಿ ನಾಯಕ ಸುರೇಶ್ ಗೋಪಿಗೆ ಸಮನ್ಸ್