ಕಳೆದ ವರ್ಷ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತ ಹತ್ಯಾಕಾಂಡ ನಡೆಸಿದ ಆರೋಪ ಹೊತ್ತಿರುವ ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಶ್ ಮಿಶ್ರಾ ಇಂದು ಸ್ಥಳೀಯ ನ್ಯಾಯಾಲಯದಲ್ಲಿ ಶರಣಾಗಿದ್ದು, ಅವರನ್ನು ಮರಳಿ ಲಖಿಂಪುರ್ ಜೈಲಿಗೆ ಕಳಿಸಲಾಗಿದೆ.
ಉತ್ತರ ಪ್ರದೇಶ ಚುನಾವಣೆಯ ಪ್ರಚಾರದ ಮಧ್ಯೆ ಫೆಬ್ರವರಿ 10ರಂದು ಆಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ಅದನ್ನು ಅಕ್ಟೋಬರ್ 3 ರಂದು ನಡೆದ ಹತ್ಯಾಕಾಂಡದಲ್ಲಿ ಹತ್ಯೆಗೀಡಾದ ರೈತರ ಕುಟುಂಬಗಳು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದವು. ಆಶಿಶ್ ಮಿಶ್ರಾಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಕಳೆದ ಸೋಮವಾರ ರದ್ದುಗೊಳಿಸಿತ್ತು ಮತ್ತು ಒಂದು ವಾರದಲ್ಲಿ ಶರಣಾಗುವಂತೆ ಆದೇಶಿಸಿತ್ತು.
“ಆಶಿಶ್ ಮಿಶ್ರಾ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ. ಶರಣಾಗಲು ಕೋರ್ಟ್ ವಾರಗಳ ಕಾಲಾವಕಾಶ ನೀಡಿತ್ತು. ಸೋಮವಾರ ಆ ಕಾಲಾವಕಾಶದ ಕೊನೆಯ ದಿನವಾಗಿತ್ತು. ಹಾಗಾಗಿ ಒಂದು ದಿನ ಮೊದಲೆ ಶರಣಾಗಿದ್ದಾರೆ” ಎಂದು ಅವರ ಕೀಲರಾದ ಅವದೇಶ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಲಖಿಂಪುರ ಖೇರಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಆಶಿಶ್ ಮಿಶ್ರಾ, ನಾಲ್ವರು ರೈತರು ಮತ್ತು ಪತ್ರಕರ್ತರ ಮೇಲೆ ಕಾರು ಚಲಾಯಿಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅವರ ವಿರುದ್ದ ಕ್ರಮ ಕೈಗೊಳ್ಳಲು ಯುಪಿ ಪೋಲಿಸ್ ಮತ್ತು ಆಡಳಿತವು ವಿಳಂಬ ಮಾಡುತ್ತಿದೆ ಎಂದು ದೇಶದಾದ್ಯಂತ ಆಕ್ರೋಶ ವ್ಯಕ್ತವಾದ ನಂತರ, ಘಟನೆ ನಡೆದು ಹಲವಾರು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡದ ಆರೋಪಿ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಯಿಲ್ಲವೆಂದ ಯುಪಿ ಸರ್ಕಾರ
ಆಶಿಶ್ ಮಿಶ್ರಾ ಸಾಕ್ಷಿಗಳಿಗೆ ಬೆದರಿಕೆಯೊಡ್ಡಿರುವ ಕಾರಣ ಅವರ ಜಾಮೀನು ರದ್ದುಗೊಳಿಸಬೇಕು ಎಂದು ರೈತರ ಕುಟುಂಬಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. “ಕಳೆದ ಮಾರ್ಚ್ನಲ್ಲಿ ಪ್ರಕರಣದ ಸಾಕ್ಷಿಯೊಬ್ಬರ ಮೇಲೆ ದಾಳಿ ನಡೆಸಲಾಯಿತ್ತು. ಅಲ್ಲದೆ ಇತ್ತೀಚಿಗೆ ಯುಪಿ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಉಲ್ಲೇಖಿಸಿ ದಾಳಿಕೋರರು ತಮಗೆ ಬೆದರಿಕೆ ಹಾಕಿದ್ದರು” ಎಂದು ಅವರು ಆರೋಪಿಸಿದ್ದಾರೆ.
“ಸಂತ್ರಸ್ತರಿಗೆ ಪರಿಣಾಮಕಾರಿ ವಿಚಾರಣೆಯ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ನಾವು ಭಾವಿಸುತ್ತೇವೆ” ಎಂದು ಸುಪ್ರೀಂ ನ್ಯಾಯಮೂರ್ತಿ ಸೂರ್ಯ ಕಾಂತ್ ಜಾಮೀನು ರದ್ದುಗೊಳಿಸುವಾಗ ಹೇಳಿದ್ದರು. ಪ್ರತ್ಯೇಕ ಪೀಠ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.