ಹರಿಯಾಣ ಸರ್ಕಾರವು ಆಗಸ್ಟ್ 28 ರಂದು ಶೋಭಾಯಾತ್ರೆ ನಡೆಸಲು ವಿಶ್ವ ಹಿಂದೂ ಪರಿಷತ್ಗೆ ಅನುಮತಿ ನೀಡಿದರೆ, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ರೈತ ಸಂಘಟನೆಗಳು ಮತ್ತು ಇತರ ಸಮುದಾಯಗಳು ಲಕ್ಷಗಟ್ಟಲೆ ಟ್ರಾಕ್ಟರ್ಗಳನ್ನು ಬೀದಿಗಿಳಿಸುತ್ತೇವೆ ಎಂದು ಘೋಷಿಸಿವೆ.
36 ರೈತ ಸಂಘಟನೆಗಳು ಮತ್ತು ಸಮುದಾಯಗಳ ಪ್ರತಿನಿಧಿಗಳು ರಾಜಸ್ಥಾನದ ಅಲ್ವಾರ್ನಲ್ಲಿ ಶನಿವಾರದಂದು ಮಹಾಪಂಚಾಯತ್ ನಡೆಸಿದರು. ಈ ವೇಳೆ ಮಹತ್ವದ ಘೋಷಣೆ ಮಾಡಿದ್ದಾರೆ.
”ನುಹ್, ಮಿಯೋ ಮುಸ್ಲಿಂ ಸಮುದಾಯದ ನೆಲೆಯಾಗಿದೆ. ಇದು ಹರಿಯಾಣದ ಏಕೈಕ ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾಗಿದೆ. ಇದು ಯಾವಾಗಲೂ ಶಾಂತಿಯುತ ಪ್ರದೇಶವಾಗಿದೆ ಆದರೆ ಜುಲೈ 31ರಂದು “ಸಾಮಾಜ ಘಾತುಕ ಶಕ್ತಿಗಳಿಂದ ಇಲ್ಲಿ ಗಲಭೆಗಳು ನಡೆದಿವೆ” ಎಂದು ಪಂಚಾಯತ್ ಅಸೆಂಬ್ಲಿಯಲ್ಲಿ ಸ್ಪೀಕರ್ಗಳು ಹೇಳಿದ್ದಾರೆ.
ಈ ಗಲಭೆ ಹರಿಯಾಣದ ಇತರ ನಗರಗಳಿಗೂ ಹರಡಿತು, ಆರು ಜನ ಸಾವಿಗೀಡಾದರು ಮತ್ತು ಕನಿಷ್ಠ 80 ಜನರು ಗಾಯಗೊಂಡರು. ವಿಶ್ವ ಹಿಂದೂ ಪರಿಷತ್ ಮತ್ತು ಅದರ ಉಗ್ರಗಾಮಿ ಸಂಘಟನೆ ಬಜರಂಗದಳದಿಂದ ಹಿಂಸಾಚಾರ ಹೆಚ್ಚಾಯಿತು. ಮಸೀದಿಗೆ ಬೆಂಕಿ ಹಚ್ಚಲಾಯಿತು. ರಾಜ್ಯ ಸರ್ಕಾರ ಮುಸ್ಲಿಮರ ಮನೆಗಳು, ಅಂಗಡಿಗಳು ಮತ್ತು ಆಸ್ತಿಗಳನ್ನು ಗುರಿಯಾಗಿಸಿಕೊಂಡು ಬುಲ್ಡೋಜರ್ನಿಂದ ಧ್ವಂಸಗೊಳಿಸುವ ಕ್ರಮವನ್ನು ಅನುಸರಿಸದವು ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಆಗಸ್ಟ್ 28ರಂದು ವಿಎಚ್ಪಿ ಯಾತ್ರೆಗೆ ಕಳೆದ ವಾರ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಲಾಗಿತ್ತು. ಆದಾಗ್ಯೂ, ”ಅನುಮತಿಯ ಅಗತ್ಯವಿಲ್ಲ” ಎಂದು ವಿಎಚ್ಪಿ ಶನಿವಾರ ಘೋಷಿಸಿತ್ತು.
”ಇಂಟರ್ನೆಟ್ ಸ್ಥಗಿತಗೊಳಿಸುವಿಕೆ ಮತ್ತು ಸೆಕ್ಷನ್ 144ನ್ನು ಸ್ಪಷ್ಟವಾಗಿ ವಿಧಿಸಲಾಗಿರುವುದು ಸ್ಥಳೀಯ ನಾಗರಿಕರ ಭಯವನ್ನು ಕಡಿಮೆ ಮಾಡಿಲ್ಲ” ಎಂದು ರೈತ ಸಂಘಟನೆಗಳು ಹೇಳಿವೆ.
ಪ್ರಮುಖ ರೈತರ ನಾಯಕ ರಾಕೇಶ್ ಟಿಕೈತ್ ಅವರು ”ಹರಿಯಾಣ ಸರ್ಕಾರವು ಆಗಸ್ಟ್ 28 ರಂದು ನುಹ್ನಲ್ಲಿ ಯಾತ್ರೆಯನ್ನು ಕೈಗೊಳ್ಳಲು ಅನುಮತಿ ನೀಡಿದರೆ, ನಾವು ಟ್ರ್ಯಾಕ್ಟರ್ ಅನ್ನು ಹೊರತೆಗೆದು ರ್ಯಾಲಿ ನಡೆಸುತ್ತೇವೆ” ಎಂದು ಹೇಳಿದ್ದಾರೆ.