ರಾಜಸ್ಥಾನ ಜೈಪುರದ ಬೆಹ್ರೋರ್ ಜಿಲ್ಲೆಯಲ್ಲಿ ದಲಿತ ಬಾಲಕ ಸರಕಾರಿ ಶಾಲಾ ತರಗತಿ ಕೊಠಡಿಯಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಇಬ್ಬರು ಶಿಕ್ಷಕರನ್ನು ಶಾಲೆಯಿಂದ ಅಮಾನತು ಮಾಡಲಾಗಿದೆ.
ಪ್ರಾಗ್ಪುರ ಪ್ರದೇಶದ ಜವಾಹರ್ ನವೋದಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ದಲಿತ ಬಾಲಕನೊಬ್ಬ ತನ್ನ ತರಗತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಬಾಲಕನ ಕುಟುಂಬವು ಇಬ್ಬರು ಶಿಕ್ಷಕರನ್ನು ಬಂಧನಕ್ಕೆ ಆಗ್ರಹಿಸಿ ಪ್ತತಿಭಟನೆ ನಡೆಸಿತ್ತು. ಶಿಕ್ಷಕರು ಬಾಲಕನಿಗೆ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಕುಟುಂಬ ಆರೋಪಿಸಿತ್ತು.
ಪೊಲೀಸರು ಇದೀಗ ಇಬ್ಬರು ಶಿಕ್ಷಕರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಬ್ಬರು ಶಿಕ್ಷಕರು ಕಿರುಕುಳ ನೀಡುತ್ತಿರುವ ಬಗ್ಗೆ ಬಾಲಕ ತನ್ನ ತಂದೆಗೆ ತಿಳಿಸಿದ್ದಾನೆ ಎಂದು ಎಫ್ಐಆರ್ ನಲ್ಲಿ ಹೇಳಾಗಿದೆ. ಆದರೆ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಬಾಲಕನ ಕುಟುಂಬವು ಪೊಲೀಸರು ಶಿಕ್ಷಕರ ವಿರುದ್ಧ ಕೇಸ್ ದಾಖಲಿಸುತ್ತಿದ್ದಂತೆ ಮತ್ತು ಶಾಲೆಯು ಬಾಲಕನ ಕುಟುಂಬಕ್ಕೆ ಪರಿಹಾರ ಕೊಡುವುದಾಗಿ ಘೋಷಿಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡಿದೆ.
ಕೊಟ್ಪುಟಾಲಿ-ಬೆಹ್ರೋರ್ನ ಪೊಲೀಸ್ ವರಿಷ್ಠಾಧಿಕಾರಿ ರಂಜಿತಾ ಶರ್ಮಾ ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ್ದು, ಇಬ್ಬರು ಶಿಕ್ಷಕರು ಬಾಲಕನಿಗೆ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಆರೋಪಿ ಶಿಕ್ಷಕರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ಸೇರಿದಂತೆ ಹಲವು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಪಶ್ಚಿಮ ಬಂಗಾಳ: ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ; 7 ಮಂದಿ ಸಾವು