ತುಮಕೂರು ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿರುವುದು, ಇದೀಗ ಆಯಾ ತಾಲೂಕು ಆಡಳಿತಕ್ಕೂ ತಲೆ ನೋವಿನ ಸಂಗತಿಯಾಗಿದೆ. ಒಂದು ತಿಂಗಳಲ್ಲೇ ಕುಣಿಗಲ್ ತಾಲೂಕಿನಲ್ಲಿ ಮೂವರ ಮೇಲೆ ಚಿರತೆ ಹಲ್ಲೆ ನಡೆಸಿ ಕೊಂದು ಹಾಕಿರುವುದು ಜನರನ್ನು ಕೆರಳುವಂತೆ ಮಾಡಿರುವುದರಿಂದ ಚಿರತೆಗಳ ತಡೆಗೆ ಏನು ಮಾಡಬೇಕೆಂದು ಯೋಚಿಸಿ ಇದೀಗ ಕೆಲವು ಸೂಚನೆಗಳನ್ನು ಜನರಿಗೆ ನೀಡಲಾಗಿದೆ.
ನರಭಕ್ಷಕ ಚಿರತೆ ಮನುಷ್ಯನ ರಕ್ತದ ರುಚಿ ನೋಡಿದೆ. ಹೀಗಾಗಿಯೇ ಕುಣಿಗಲ್ ತಾಲೂಕಿನಲ್ಲಿ ಪದೇ ಪದೇ ಒಂಟಿ ಮನುಷ್ಯರ ಮೇಲೆ ದಾಳಿ ಮಾಡುತ್ತಲೇ ಇದೆ. ಅರಣ್ಯದಂಚಿನಲ್ಲಿ ಇದ್ದವರ ಮೇಲೆಯ ದಾಳಿ ನಡೆದಿರುವುದು ಗ್ರಾಮಸ್ಥರಲ್ಲಿ ಭಯವನ್ನು ಹುಟ್ಟು ಹಾಕಿದೆ. ಭಯ ದೂರಾಗುವಂತಹ ಕೆಲಸವನ್ನು ಅರಣ್ಯ ಇಲಾಖೆಯಾಗಲೀ, ತಾಲೂಕು ಆಡಳಿತವಾಗಲೀ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಆದರೆ ಜನರಿಗೆ ಕುಣಿಗಲ್ ತಾಲೂಕು ಆಡಳಿತ ಕೆಲವು ಸೂಚನೆಗಳನ್ನು ನೀಡಿರುವುದು ಹಾಸ್ಯಾಸ್ಪದವಾಗಿದೆ. ಮಕ್ಕಳು, ವೃದ್ದರು ಮತ್ತು ಮಹಿಳೆಯರು ಸಂಜೆ ಆರು ಗಂಟೆಯ ಒಳಗೆ ಮನೆಯನ್ನು ಸೇರಿಕೊಳ್ಳಬೇಕು. ಬಯಲು ಬಹಿರ್ದೆಸೆಗೆ ಹೋಗಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಬಹಿರ್ದೆಸೆಗೆ ಹೋಗುವುದನ್ನು ಹೇಗೆ ತಡೆಯಲು ಸಾಧ್ಯ ಎಂಬ ಕನಿಷ್ಠ ಜ್ಞಾನವೂ ಇಲ್ಲದಿರುವುದು ಶೋಚನೀಯವಾಗಿದೆ.
ಚಿರತೆ ಕಂಡರೆ ಜನರು ಗದ್ದಲ ಮಾಡಬಾರದು. ಗುಂಪುಗೂಡಿ ಓಡಿಸಲು ಯತ್ನಿಸಬಾರದು. ಮೇಕೆ, ಕುರಿ, ದನ ಮೇಯಿಸುವವರು ಪೊದೆಯ ಪಕ್ಕದಲ್ಲಿ ಕುಳಿತುಕೊಳ್ಳಬಾರದು. ಒಬ್ಬರೇ ಮೇಯಿಸುವಾಗ ಬಯಲಲ್ಲಿ ಇರಬೇಕು ಎನ್ನುವುದು ವಿಚಿತ್ರ ಎನಿಸುತ್ತದೆ. ಕುರಿ, ಮೇಕೆ ಮೇಯಿಸುವವರು ಬೇಕೆಂದೇನು ಪೊದೆಯ ಪಕ್ಕದಲ್ಲಿ ಕೂರುವುದಿಲ್ಲ. ಬಿಸಿಲ ತಡೆಯಲಾರದೆ ನೆರಳು ಬೇಕೆಂಬ ಉದ್ದೇಶಕ್ಕಾಗಿ ಅಲ್ಲಿ ಕುಳಿತುಕೊಳ್ಳುತ್ತಾರೆ.
ಸಾಕು ಪ್ರಾಣಿಗಳನ್ನು ಸಂಜೆಯಾದ ಮೇಲೆ ರೊಪ್ಪದಲ್ಲಿ ಬಿಡಬೇಕು ಎಂದು ಹೇಳಿದೆ. ದನಗಳನ್ನು ಹೊರತುಪಡಿಸಿ ಉಳಿದ ಸಾಕು ಪ್ರಾಣಿಗಳು ರೊಪ್ಪ, ಕೊಟ್ಟಿಗೆಯಲ್ಲೇ ಕಟ್ಟಲಾಗುತ್ತದೆ. ಇದರ ಹೊರತಾಗಿಯೂ ಚಿರತೆಗಳು ಕೊಟ್ಟಿಗೆಗೆ ದಾಳಿ ಮಾಡಿ ಕುರಿಗಳನ್ನು ಸಾಯಿಸಿರುವ ಉದಾಹರಣೆಗಳು ಇವೆ. ಹೊಲಗಳಿಗೆ ಯಾರೂ ಬೇಕೆಂದೇ ಹೋಗುವುದಿಲ್ಲ. ರಾತ್ರಿ ವಿದ್ಯುತ್ ನೀಡುವುದರಿಂದ ಅನಿವಾರ್ಯವಾಗಿ ನೀರು ಹಾಯಿಸಲು ಒಬ್ಬೊಬ್ಬರೇ ಹೋಗಬೇಕಾದ ಅನಿವಾರ್ಯತೆ ಬರುತ್ತದೆ. ಆಗ ಕರಡಿ, ಚಿರತೆ ದಾಳಿ ನಡೆಯುತ್ತದೆ. ಇದಕ್ಕ ಪರಿಹಾರಗಳನ್ನು ಜಿಲ್ಲಾಡಳಿತ ಕಂಡುಕೊಳ್ಳಬೇಕಾಗಿದೆ. ಅದನ್ನು ಬಿಟ್ಟು ಈ ರೀತಿಯ ಬಿಟ್ಟಿ ಸಲಹೆಗಳನ್ನಲ್ಲ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.