ತಮಿಳುನಾಡಿನ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಮನೆಗಳು ಕುಸಿದುಬಿದ್ದಿವೆ. ಪರಿಣಾಮ ಇಬ್ಬರು ಪುರುಷರು, 8 ಮಂದಿ ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿ 15 ಮಂದಿ ಮೃತಪಟ್ಟಿದ್ದಾರೆ.
ಕೊಯಮತ್ತೂರು ಜಿಲ್ಲೆ ಮೆಟ್ಟುಪಾಳ್ಯಂನಲ್ಲಿ ಮನೆಗಳು ಕುಸಿದಿವೆ. ನಾದೂರು ಗ್ರಾಮದಲ್ಲಿ 3 ಮನೆಗಳು ಕುಸಿದು ಪ್ರಾಣಹಾನಿ ಸಂಭವಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಪರಿಹಾರ ಕಾರ್ಯಗಳನ್ನು ಮುಂದುವರಿಸಿವೆ.
ಭಾರೀ ವರ್ಷಧಾರೆ ಸುರಿಯುತ್ತಿರುವುದರಿಂದ ಚನ್ನೈ, ತಿರುವಳ್ಳೂರು, ಮಾಮಕೂಡಿ, ಕಾಂಚೀಪುರಂ, ಚಂಗಲಪಟ್ಟಿ, ಕುಡ್ಡಲೂರು, ರಾಮನಾಥಪುರಂ ಮತ್ತು ಪುದುಚೇರಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಅಣ್ಣಾ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ನೀಲಗಿರಿ, ಕುಂದಹ, ಉಡುಕ್ಕಲ್, ಕುಕ್ನೂರ್, ಕೊತಗಿರಿ, ಮನಿಮೇಲ್ ಕುಡಿಯಲ್ಲಿಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇಂದು ಮತ್ತು ನಾಳೆ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಐಎಂಡಿ ಸೂಚನೆಯಂತೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಮರಗಳು ಧರೆಗೆ ಉರುಳಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಎಂದು ವರದಿಗಳು ತಿಳಿಸಿವೆ.
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಮನೆಗಳು ಜಲಾವೃತವಾಗಿವೆ. ಜನರು ನೀರಿನಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಲ್ಲುಪುರಂನಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ.