ರಾಯಚೂರಿನ ಹಿರಿಯ ಜನಪರ ವಕೀಲರಾದ ಎನ್ ಪದ್ಮವರ್ಧನ್ರವರು ನಿನ್ನೆ ರಾತ್ರಿ 10.30 ರ ಸುಮಾರಿಗೆ ಹೃದಯಾಘಾತದ ಕಾರಣದಿಂದ ಹಠಾತ್ತನೇ ನಿಧನರಾಗಿದ್ದಾರೆ.
ಮಕ್ಕಳಾದ ಮೇಘನ, ಕೌಸಲ್ಯ ಮತ್ತು ಪತ್ನಿ ಪದ್ಮಾರವರನ್ನು ಸೇರಿ ಸಾವಿರಾರು ಸಾಮಾಜಿಕ ಕಾರ್ಯಕರ್ತರು ಪದ್ಮವರ್ಧನ್ ಸಾವಿಗೆ ಮಿಡಿದಿದ್ದಾರೆ.
ಜನರ ಪರವಾದ ವಕೀಲರೆಂದರೆ ಪದ್ಮವರ್ದನ್. ಬಡವರು ಇವರ ಬಳಿ ಹೋದರೆ 10ರೂ ಕೊಡದೆ ಕೇಸು ಕೊಡಬಹುದಿತ್ತು…ಕೇಸು ನಡೆಸಬಹುದಿತ್ತು. ಸಾಮಾಜಿಕ ಹೋರಾಟಗಾರರು, ದಲಿತ ಚಳವಳಿ, ಶೋಷಿತ ಸಮುದಾಯಗಳ ಪರವಾಗಿ ಯಾರಾದರೂ ಧ್ವನಿ ಎತ್ತಿದರೆ ಅವರ ಪರವಾಗಿ ನಿಲ್ಲದೇ ಇರುತ್ತಿರಲಿಲ್ಲ ಪದ್ಮವರ್ಧನ್. ಇವರು ಸೀನಿಯರ್ ಅಡ್ವೊಕೇಟ್ ಆಗಿದ್ದರೂ ಬರೀ ಕೋರ್ಟ್ ನಲ್ಲಿ ನ್ಯಾಯ ಸಿಗುವುದಿಲ್ಲ, ಬೀದಿ ಹೋರಾಟಗಳನ್ನು ನಡೆಸಬೇಕೆನ್ನುವ ಅ್ಯಕ್ಟಿವಿಸ್ಟ್ ಸಹ ಆಗಿದ್ದರು.
ಸ್ವಂತ ಜೀವನದ ಬಗ್ಗೆ ಎಂದೂ ಸೀರಿಯಸ್ಸಾಗಿ ಪರಿಗಣಿಸದೆ, ವ್ಯಕ್ತಿಗತವಾಗಿ ಯಾವ ಆಸ್ತಿಯನ್ನೂ ಹೊಂದಿಲ್ಲದಿದ್ದರೂ ಅಪಾರ ಹೋರಾಟದ ಒಡನಾಡಿಗಳು, ಸ್ನೇಹಿತರೇ ಇವರ ಸಂಪತ್ತು ಎಂದು ಅವರ ಹತ್ತಿರದ ಒಡನಾಡಿ ಕುಮಾರ್ ಸಮತಳ ತಿಳಿಸಿದ್ದಾರೆ.
ಇತ್ತೀಚೆಗೆ ರಾಯಚೂರಿನಲ್ಲಿ 25 ವರ್ಷದ ಹಳೆಯ ಕೇಸಿನಲ್ಲಿ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಬಂಧನದ ವಿರುದ್ದ ವಕಾಲತ್ತನ್ನು ಪದ್ಮವರ್ಧನ್ರವರೇ ವಹಿಸಿಕೊಂಡಿದ್ದರು.
ಪದ್ಮವರ್ಧನ್ರವರ ಅಂತ್ಯಕ್ರಿಯೆ ಹುಟ್ಟೂರಾದ ಹಟ್ಟಿ(ಹಟ್ಟಿ ಚಿನ್ನದ ಗಣಿ ,ಲಿಂಗಸಗೂರು ತಾಲ್ಲೂಕು )ಯಲ್ಲಿ ಇಂದು ಸಂಜೆಯೊಳಗೆ ನಡೆಯಲಿದೆ ಎಂದು ಇವರ ಅಣ್ಣರಾದ ಎನ್. ರವಿನಾರಾಯಣ್ರವರು ತಿಳಿಸಿದ್ದಾರೆ.