ಮುಂಬರುವ ಲೋಕಸಭೆ ಚುನಾವಣೆಗೆ ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮೈತ್ರಿ ಮಾಡಿಕೊಂಡಿರುವುದಾಗಿ ಘೋಷಿಸಿವೆ.
ಬಿಎಸ್ಪಿ ತೆಲಂಗಾಣ ಘಟಕದ ಅಧ್ಯಕ್ಷ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಆರ್ಎಸ್ ಪ್ರವೀಣ್ ಕುಮಾರ್ ಅವರೊಂದಿಗೆ ಬಿಆರ್ಎಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, “ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರಿಂದ ಒಪ್ಪಿಗೆ ಪಡೆದ ನಂತರ ಕುಮಾರ್ ಅವರು ನಮ್ಮನ್ನು ಸಂಪರ್ಕಿಸಿ ಮೈತ್ರಿ ಪ್ರಸ್ತಾವ ಮಾಡಿದ್ದರು. ಹಾಗಾಗಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ತಾತ್ವಿಕವಾಗಿ ಒಪ್ಪಿಕೊಂಡಿವೆ” ಎಂದಿದ್ದಾರೆ.
కలిసి పని చేయాలని నిర్ణయించుకున్న బీఆర్ఎస్, బీఎస్పీ పార్టీలు
బీఆర్ఎస్ అధినేత కేసీఆర్ మరియు బీఎస్పీ రాష్ట్ర అధ్యక్షుడు ఆర్ఎస్ ప్రవీణ్ కుమార్ జాయింట్ ప్రెస్ మీట్ pic.twitter.com/qrv2hTF2eb
— BRS Party (@BRSparty) March 5, 2024
“ಬಿಆರ್ಎಸ್ ಮತ್ತು ಬಿಎಸ್ಪಿ ಎರಡೂ ಪಕ್ಷಗಳು ಒಂದೇ ಸಿದ್ಧಾಂತ ಮತ್ತು ಗುರಿಗಳನ್ನು ಹೊಂದಿವೆ. ತೆಲಂಗಾಣದಲ್ಲಿ ದಲಿತ ಬಂಧು, ವಸತಿ ಕಲ್ಯಾಣ ಶಾಲೆಗಳು ಸೇರಿದಂತೆ ದುರ್ಬಲ ವರ್ಗದ ಜನರಿಗಾಗಿ ಬಿಆರ್ಎಸ್ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿತ್ತು. ನನ್ನ ಹಳೆಯ ಪರಿಚಯಸ್ಥರಾದ ಮಾಯಾವತಿ ಅವರೊಂದಿಗೆ ಮಾತನಾಡಿದ ನಂತರ ನಾವು ಸೀಟು ಹಂಚಿಕೆಗೆ ಸಂಬಂಧಿಸಿದ ವಿಷಯಗಳನ್ನು ಅಂತಿಮಗೊಳಿಸುತ್ತೇವೆ” ಎಂದು ಕೆಸಿಆರ್ ಹೇಳಿದ್ದಾರೆ.
ದೇಶದ ಜಾತ್ಯತೀತ ವ್ಯವಸ್ಥೆ ನಾಶ ಮಾಡಲು ಪ್ರಯತ್ನಿಸುತ್ತಿರುವ ಮತ್ತು ದುರ್ಬಲ ವರ್ಗಗಳ ಸಾಂವಿಧಾನ ಹಕ್ಕುಗಳನ್ನು ಕಸಿದುಕೊಳ್ಳಲು ಪಿತೂರಿ ನಡೆಸುತ್ತಿರುವ ಬಿಜೆಪಿಯನ್ನು ಎದುರಿಸಲು ಬಿಆರ್ಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಬಿಎಸ್ಪಿ ಅಧ್ಯಕ್ಷ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಕೂಡ ದಲಿತ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಪ್ರವೀಣ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
“ಎರಡು ಪಕ್ಷಗಳಿಂದ (ಬಿಜೆಪಿ ಮತ್ತು ಕಾಂಗ್ರೆಸ್) ತೆಲಂಗಾಣವನ್ನು ರಕ್ಷಿಸುವ ಸಲುವಾಗಿ, ನಾವು ಮುಂಬರುವ ಚುನಾವಣೆಯಲ್ಲಿ ಬಿಆರ್ಎಸ್ನೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಕೆಸಿಆರ್ ಬಲವಾದ ಜಾತ್ಯತೀತ ಧ್ವನಿಯಾಗಿದ್ದಾರೆ. ನಮ್ಮ ಮೈತ್ರಿ ತೆಲಂಗಾಣದ ಗಂಗಾ ಜಮುನಿ ತೆಹಝೀಬ್ ಅನ್ನು ರಕ್ಷಿಸುವ ಗುರಿ ಹೊಂದಿದೆ” ಎಂದು ಅವರು ಹೇಳಿದ್ದಾರೆ.
ಮೈತ್ರಿ ಮಾತುಕತೆಯ ಸಭೆಯಲ್ಲಿ ಬಿಆರ್ಎಸ್ ಹಿರಿಯ ಮುಖಂಡರಾದ ಟಿ.ಹರೀಶ್ ರಾವ್, ವೇಮುಲ ಪ್ರಶಾಂತ್ ರೆಡ್ಡಿ, ಜೆ.ಸಂತೋಷ್ ಕುಮಾರ್, ಬಾಲ್ಕ ಸುಮನ್, ಎಂಎಲ್ ಸಿ ದೇಶಪತಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ವರದಿಗಳ ಪ್ರಕಾರ, ಪ್ರವೀಣ್ ಕುಮಾರ್ ಅವರು ಮೈತ್ರಿಕೂಟದ ಅಭ್ಯರ್ಥಿಯಾಗಿ ತೆಲಂಗಾಣದ ನಾಗರ್ಕರ್ನೂಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಕ್ಷೇತ್ರದ ಹಾಲಿ ಬಿಆರ್ಎಸ್ ಸಂಸದ ಪೋತುಗಂಟಿ ರಾಮುಲು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಜೊತೆ ಕೈಜೋಡಿಸಿದ್ದು, ಕಳೆದೆರಡು ದಿನಗಳ ಹಿಂದೆ ತಮ್ಮ ಪುತ್ರ ಪೋತುಗಂಟಿ ಭರತ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ : ‘ರಾಯಬರೇಲಿ ಕರೆಯುತ್ತಿದೆ…’; ಕಾಂಗ್ರೆಸ್ ಭದ್ರಕೋಟೆ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿಯನ್ನು ಬೆಂಬಲಿಸಿ ಪೋಸ್ಟರ್ ಚಳವಳಿ