ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ (ಮಾ.2) ಪ್ರಕಟಿಸಿದೆ. ಮೊದಲ ಹಂತದಲ್ಲಿ ಕರ್ನಾಟಕದ ಯಾವುದೇ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ತನ್ನ ಮೈತ್ರಿ ಪಾಲುದಾರ ಜನತಾ ದಳ (ಜಾತ್ಯತೀತ) ದೊಂದಿಗೆ ಸೀಟು ಹಂಚಿಕೆ ಮಾತುಕತೆಗಳು ನಡೆಯುತ್ತಿರುವುದರಿಂದ ಕರ್ನಾಟಕದಲ್ಲಿ ಅಭ್ಯರ್ಥಿಗಳ ಘೋಷಣೆ ವಿಳಂಬವಾಗಲಿದೆ ಎನ್ನಲಾಗಿದೆ.
ರಾಜ್ಯ ಬಿಜೆಪಿ ನಾಯಕರು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. ಪಕ್ಷದ ಹೈಕಮಾಂಡ್ಗೆ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸುವ ಮೊದಲು ಕೋರ್ ಕಮಿಟಿ ಸಭೆಗಳಲ್ಲಿ ಚರ್ಚಿಸಲಾಗುವುದು. ಜೆಡಿಎಸ್ ಜೊತೆ ಸೀಟು ಹಂಚಿಕೆ ಅಂತಿಮಗೊಂಡರೆ ಮುಂದಿನ ವಾರ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿರುವುದಾಗಿ ದಿ ಸೌತ್ ಫಸ್ಟ್ ವರದಿ ಮಾಡಿದೆ.
ಹೊಸ ಮುಖಗಳಿಗೆ ಹುಡುಕಾಟ:
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಹೊಸ ಮುಖಗಳಿಗೆ ಹುಡುಕಾಟ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಶಿವಕುಮಾರ್ ಉದಾಸಿ, ಜಿಎಸ್ ಬಸವರಾಜು ಮತ್ತು ಅಬ್ಬಯ್ಯ ನಾರಾಯಣಸ್ವಾಮಿಯಂತಹ ಪ್ರಮುಖ ವ್ಯಕ್ತಿಗಳು ಸೇರಿದಂತೆ ಹಲವಾರು ಹಾಲಿ ಸಂಸದರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. ಹಾಗಾಗಿ, ಹೊಸ ಅಭ್ಯರ್ಥಿಗಳನ್ನು ಹುಡುಕುವುದು ಬಿಜೆಪಿ ಅನಿವಾರ್ಯವಾಗಿದೆ.
ಹಾವೇರಿ-ಗದಗ ಸಂಸದ ಶಿವಕುಮಾರ್ ಉದಾಸಿ, ತುಮಕೂರು ಸಂಸದ ಜಿ.ಎಸ್.ಬಸವರಾಜು, ಚಿತ್ರದುರ್ಗ ಸಂಸದ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಅಬ್ಬಯ್ಯ ನಾರಾಯಣಸ್ವಾಮಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.
ಅಲ್ಲದೆ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್, ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಕೂಡ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿ ಹೈಕಮಾಂಡ್ 2024ರ ಚುನಾವಣೆಗೆ ಕರ್ನಾಟಕದಿಂದ ಸುಮಾರು ಎಂಟು ಹೊಸ ಮುಖಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಇದರಿಂದ ಬಹುತೇಕ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಸಿಗುವುದು ಖಚಿತ ಎನ್ನಬಹುದು ಎಂದು ಸೌತ್ ಫಸ್ಟ್ ಹೇಳಿದೆ.
ಗಮನಾರ್ಹ ಬೆಳವಣಿಗೆಯಲ್ಲಿ, ಕರ್ನಾಟಕ ಬಿಜೆಪಿಯ ಹಿರಿಯ ಲಿಂಗಾಯತ ನಾಯಕರಾದ ಬಿಎಸ್ ಯಡಿಯೂರಪ್ಪ ಮತ್ತು ವಿ ಸೋಮಣ್ಣ ಒಂದಾಗಿದ್ದಾರೆ. ಚುನಾವಣೆಗೆ ಮುಂಚಿತವಾಗಿ ಇಬ್ಬರು ನಾಯಕರ ಅಸಮಧಾನ ಕೊನೆಗೊಂಡಿದೆ. ಇಬ್ಬರು ನಾಯಕರ ನಡುವಿನ ಸಭೆ ಯಶಸ್ವಿಯಾಗಿದೆ. ಈ ಒಗ್ಗಟ್ಟು ಬಿಜೆಪಿಗೆ ಚುನಾವಣೆಯಲ್ಲಿ ಲಾಭ ತಂದು ಕೊಡಲಿದೆ ಎಂದು ಸೌತ್ ಫಸ್ಟ್ ಅಭಿಪ್ರಾಯಪಟ್ಟಿದೆ.
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ನಿವಾಸಕ್ಕೆ ಭೇಟಿ ನೀಡಿ, ಜನ್ಮದಿನದ ಶುಭಾಶಯ ಕೋರಿ, ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @JagadishShettar ಅವರು, ಶ್ರೀ ಜಿ.ಎಸ್.ಬಸವರಾಜು ಅವರು, ಶ್ರೀ ಲಕ್ಷ್ಮೀ ನಾರಾಯಣ ಅವರು, ಯುವ ಮುಖಂಡರಾದ ಡಾ. ಅರುಣ್ ಸೋಮಣ್ಣ ಅವರು ಉಪಸ್ಥಿತರಿದ್ದರು. pic.twitter.com/vIBqMeZph1
— V. Somanna (@VSOMANNA_BJP) March 3, 2024
ಇದನ್ನೂ ಓದಿ : ಕೇಂದ್ರ ಸಚಿವೆ ಮೀನಾಕ್ಷಿ ಲೇಖಿಗೆ ಕೈ ತಪ್ಪಿದ ಟಿಕೆಟ್: ಮಂಗಳೂರಿನ ಬಿಜೆಪಿ ಕಾರ್ಯಕ್ರಮ ಮುಂದೂಡಿಕೆ