ಲೋಕಸಭೆಯ ಸಮಿತಿಯು ತೃಣಮೂಲ ಕಾಂಗ್ರೆಸ್ ನಾಯಕಿ, ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧದ ‘ಪ್ರಶ್ನೆಗಾಗಿ ನಗದು’ ಆರೋಪಕ್ಕೆ ಸಂಬಂಧಿಸಿದಂತೆ ಅ.31 ರಂದು ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ.
ಗುರುವಾರ ಸಮಿತಿಯ ಸಭೆಯ ನಂತರ ಮತನಾಡಿದ ಲೋಕಸಭೆಯ ನೈತಿಕ ಸಮಿತಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್, ಸಂಸದೆಯ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ಗೃಹ ವ್ಯವಹಾರಗಳು ಮತ್ತು ಐಟಿ ಸಚಿವಾಲಯಗಳಿಂದ ನೆರವು ಪಡೆಯಲಾಗುವುದು. ಮೊಯಿತ್ರಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಕೇಳಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಮಿತಿಯು ವಕೀಲ ಜೈ ಅನಂತ್ ದೆಹದ್ರಾಯಿ ಮತ್ತು ಬಿಜೆಪಿ ನಾಯಕ ನಿಶಿಕಾಂತ್ ದುಬೆ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ಮಹುವಾ ವಿರುದ್ಧದ ಆರೋಪಗಳು ತುಂಬಾ ಗಂಭೀರವಾಗಿವೆ ಎಂದು ಸಮಿತಿ ಹೇಳಿಕೊಂಡಿದೆ. ಇಂದು ಮೂರು ಗಂಟೆಗಳ ಕಾಲ ಸಭೆ ಸೇರಿದ ಸಮಿತಿ, ಸಂಸದೆ ಮಹುವಾ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ಹಣ ಪಡೆದಿದ್ದರು ಎಂಬ ಆರೋಪಗಳ ಬಗ್ಗೆ ಪರಿಶೀಲಿಸಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ನಲ್ಲಿ ಪ್ರಶ್ನೆ ಕೇಳಲು ಉದ್ಯಮಿಯೊಬ್ಬರಿಂದ ಹಣ ಹಾಗೂ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಮೊದಲು ದೂರು ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಹುವಾ ಮೊಯಿತ್ರಾ, ನನ್ನ ವಿರುದ್ಧ ದುರುದ್ದೇಶಪೂರಿತ ಆರೋಪಗಳನ್ನು ಮಾಡಿ ಅದನ್ನು ನಕಲಿ ಪದವೀಧರರ ಮೂಲಕ ಪ್ರಚಾರ ಮಾಡುವ ಮೂಲಕ ಅದಾನಿ ಸಮೂಹಕ್ಕೆ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.