ಬಹಳ ದಿನಗಳ ನಂತರ ಸಹೋದರ ಮತ್ತು ಸಹೋದರಿ ಭೇಟಿಯಾಗಲು ಸೇರಿದ್ದರು. ಆದರೆ ಅವರು ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಿದ ಗುಂಪೊಂದು ಅವರನ್ನು ಮನೆಯಿಂದ ಹೊರಗೆಳೆದು, ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.
ಆ ಮಹಿಳೆಯ ಪತಿಯು ಅಲ್ಲಿಯ ಗ್ರಾಮಸ್ಥರಿಗೆ ಫೋನ್ ಮೂಲಕ ಅವರಿಬ್ಬರು ಒಡಹುಟ್ಟಿದವರೆಂದು ಹೇಳುತ್ತಿದ್ದರೂ ಕೇಳಿಸಿಕೊಳ್ಳದ ಗುಂಪು ಒಂದು ಗಂಟೆಗಳ ಕಾಲ ಅವರನ್ನು ಥಳಿಸಿದೆ.
ಇಂದೋರ್ನಿಂದ ಸುಮಾರು 170 ಕಿಮೀ ದೂರದಲ್ಲಿರುವ ಮತ್ತು ಮಹಾರಾಷ್ಟ್ರದ ಗಡಿಗೆ ಸಮೀಪವಿರುವ ಪಿಪ್ಲೋಡ್ ಪ್ರದೇಶದ ಬಮಂಡಾ ಗ್ರಾಮದಲ್ಲಿ ಈ ಅಮಾನುಷ ಘಟನೆ ನಡೆದಿದೆ.
ಈ ಬಗ್ಗೆ ಖಾಂಡ್ವಾ ಎಸ್ಪಿ ಸತ್ಯೇಂದ್ರ ಶುಕ್ಲಾ ಮಾತನಾಡಿ, ”ಝರಿಖೇಡಾ ಗ್ರಾಮದ ನಿವಾಸಿ ಜ್ಞಾನಲಾಲ್ ಶುಕ್ರವಾರ ಸಂಜೆ ತನ್ನ ಸಹೋದರಿ ಕಲಾವತಿಯನ್ನು ಭೇಟಿಯಾಗಲು ಬಾಮಂಡಾಗೆ ಹೋಗಿದ್ದರು. ಅವನು ಬಂದಾಗ ಅವಳು ಒಬ್ಬಳೇ ಇದ್ದಳು. ಇವರಿಬ್ಬರು ಮನೆಯೊಳಗೆ ಕುಳಿತು ಮಾತನಾಡುತ್ತಿದ್ದಾಗ ಗುಂಪೊಂದು ಏಕಾಏಕಿ ಒಳಗೆ ನುಗ್ಗಿ ಇಬ್ಬರ ನಡುವೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಹೆಚ್ಚಾದ ನಿರುದ್ಯೋಗ: 3 ವರ್ಷಗಳಲ್ಲಿ ಕೇವಲ 21 ಜನರಿಗೆ ಮಾತ್ರ ಸರ್ಕಾರಿ ಕೆಲಸ
ಪೊಲೀಸರಿಗೆ ಜ್ಞಾನಲಾಲ್ ದೂರು ನೀಡಿದ್ದು, ”ಅವರು ನಮ್ಮನ್ನು ಮನೆಯಿಂದ ಮುಖ್ಯ ರಸ್ತೆಗೆ ಎಳೆದೊಯ್ದರು, ಮರಕ್ಕೆ ಕಟ್ಟಿಹಾಕಿದರು ಮತ್ತು ನಮಗೆ ಹೊಡೆಯಲು ಪ್ರಾರಂಭಿಸಿದರು. ಅವರು ನನ್ನ ಅಂಗಿಯನ್ನು ಹರಿದು ಹಾಕಿದರು” ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಲಾವತಿ ಅವರ ಪತಿ ರಮೇಶ್, ಜ್ಞಾನಲಾಲ್ ಅವರ ದೂರದ ಸಂಬಂಧಿಯಾಗಿದ್ದು, ಅವರು ರತ್ಲಂನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಕೆಲ ಕುಟುಂಬಸ್ಥರು ರಮೇಶ್ಗೆ ಕರೆ ಮಾಡಿ ನಿಮ್ಮ ಪತ್ನಿ ಹಾಗೂ ಸೋದರ ಮಾವನನ್ನು ಥಳಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಕೆಲವರು ಹಲ್ಲೆ ಮಾಡುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು, ಆದರೆ ಯಾರೂ ಗಮನ ಹರಿಸಲಿಲ್ಲ.
ಗ್ರಾಮಸ್ಥರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತು. ಅಲ್ಲಿ ಆ ಸಹೋದರ ಮತ್ತು ಸಹೋದರಿಯನ್ನು ರಕ್ಷಿಸಿ, ಅವರು ಗಾಯಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಮತ್ತೊಂದು ಪೊಲೀಸ್ ತಂಡ ಆರೋಪಿಗಳನ್ನು ಹುಡುಕಲು ಗ್ರಾಮಕ್ಕೆ ಹೋದರು, ಆದರೆ ಅವರು ಪರಾರಿಯಾಗಿದ್ದರು. ಪೊಲೀಸರು ಅವರನ್ನು ಪತ್ತೆಹಚ್ಚಿ ರಾತ್ರಿಯ ವೇಳೆಗೆ ಬಂಧಿಸಿದ್ದಾರೆ.
ಪಿಪ್ಲೋಡ್ ಪೊಲೀಸ್ ಠಾಣೆಯ ಅಧಿಕಾರಿ ಹರೇ ಸಿಂಗ್ ರಾವತ್ ಅವರು ಬಂಧಿತರಬಗ್ಗೆ ಮಾಹಿತಿ ನೀಡಿದ್ದು, ರಾಮದಾಸ್ ಮಂಗ್ಟು, ದಯಾರಾಮ್ ಟಿಕಾರಾಂ ಮತ್ತು ಈಶ್ವರ್ ಅಲಿಯಾಸ್ ಹನು ಬಂಧಿತರಾಗಿದ್ದು, ಅವರ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.