ರೈತ, ಕಾರ್ಮಿಕರು ಬೆಕ್ಕುಗಳಲ್ಲ, ಹುಲಿಗಳು. ಇದನ್ನು ನೆನಪು ಮಾಡಲು ನಾವು ‘ಮಹಾಧರಣಿ’ ಆಯೋಜಿಸಿದ್ದೇವೆ ಎಂದು ರೈತ ಮುಖಂಡ ಸಿದ್ದನಗೌಡ ಪಾಟೀಲ್ ಹೇಳಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ‘ದುಡಿಯುವ ಜನರ ಮಹಾಧರಣಿ’ಯಲ್ಲಿ ಮಾತನಾಡಿದ ಅವರು, 120 ಕೋಟಿ ಜನರ ಬಲ ಹುಲಿಯ ಬಲವಾಗಿದೆ. ಆದರೆ, ನಮ್ಮ ಈ ಬಲ ಹಿಂದೂ, ಮುಸ್ಲಿಂ, ದಲಿತ ಮತ್ತು ಬ್ರಾಹ್ಮಣ ಎಂದು ಒಡೆದು ಬೆಕ್ಕಿನಂತೆ ಆಗಿದೆ. ದುಡಿವ ಜನರಾದ ನಾವು ಒಗ್ಗಟ್ಟಾದರೆ ಹುಲಿಯ ಬಲವಾಗುತ್ತದೆ ಎಂದರು.
ಇಲ್ಲಿ ನಾವು ಬೇಡಿಕೆ ಈಡೇರಿಸಲು ಬಂದಿಲ್ಲ. ನಮ್ಮನ್ನು ಆಳುವವರಿಗೆ ಅಧಿಕಾರದಿಂದ ಕೆಳಗೆ ಇಳಿಯಿರಿ ಎಂದು ಹೇಳಲು ಬಂದಿದ್ದೇವೆ. ಅರ್ಥ, ಕುಲ ಮತ್ತು ಅಹಂಕಾರ ಮದ ಇಂದು ಜಾರಿಯಲ್ಲಿದೆ. ನನ್ನನ್ನು ಯಾರೂ ಕೇಳುವವರರೇ ಇಲ್ಲ ಎಂದು ಮೋದಿ ಹೇಳುವಾಗ, ದೆಹಲಿಯ ಬೀದಿಯಲ್ಲಿ ನಿಂತ ರೈತರು ಸಂಸತ್ ಅನ್ನು ನಿಯಂತ್ರಣ ಮಾಡಿದರು. ನರಗುಂದ ನವಲಗುಂದ ಹೋರಾಟದ ಸಮಯದಲ್ಲಿ ಅಂದಿನ ಕಾರ್ಮಿಕರು, ರೈತರು ಕೈಜೋಡಿಸಿ ಗುಂಡುರಾವ್ ಸರ್ಕಾರವನ್ನು ಪತನ ಮಾಡಿದರು ಎಂದು ಹೇಳಿದರು.
ನಾವು ಸಂಘಟಿತ ಹೋರಾಟ ಮಾಡಿದರೆ ಪ್ರಸ್ತುತ ಅಧಿಕಾರದಲ್ಲಿರುವ ಬಂಡವಾಳಶಾಹಿ, ಕಾರ್ಪೋರೇಟ್ ಪರ ಸರ್ಕಾರವನ್ನು ಒದ್ದೋಡಿಸಬಹುದು ಎಂದರು.
ಇದನ್ನೂ ಓದಿ : ನಮ್ಮನ್ನು ಆಳುವವರಿಗೆ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಬೇಕಿದೆ: ಮುಖ್ಯಮಂತ್ರಿ ಚಂದ್ರು