ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಕಾರ್ಮಿಕ ಮತ್ತು ರೈತರಿಗೆ ಇನ್ನೂ ಸ್ವಾತಂತ್ರ್ಯ ದೊರೆತಿಲ್ಲ. ಅಧಿಕಾರದ ದಾಹದಿಂದ ನಮ್ಮನ್ನು ಆಳುವವರು ಕಣ್ಣೊರೆಸುತ್ತಾರೆ. ನಾವು ಅವರನ್ನು ಚುನಾವಣೆಗಳಲ್ಲಿ ಸೋಲಿಸುವ ಮೂಲಕ ಉತ್ತರ ನೀಡಬೇಕಾಗಿದೆ ಎಂದು ನಟ, ಆಮ್ ಆದ್ಮಿ ಪಕ್ಷ (ಎಎಪಿ)ದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ‘ದುಡಿಯು ಜನರ ಮಹಾಧರಣಿ’ಯಲ್ಲಿ ಮಾತನಾಡಿದ ಅವರು, ಏಕ ವ್ಯಕ್ತಿ, ಏಕ ಪಕ್ಷ ಎನ್ನುತ್ತಾ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ಪಾಲಿಸುತ್ತಿದೆ. ಏಕ ದೇವರಿಗೆ ಪ್ರಾಮುಖ್ಯತೆ ನೀಡುತ್ತಾ ನಮ್ಮ ಊರಿನ ದೇವರನ್ನು ನಗಣ್ಯ ಮಾಡಲಾಗುತ್ತಿದೆ ಎಂದರು.
ಸಿದ್ದರಾಮಯ್ಯ ಮೇಲೆ ನಿರೀಕ್ಷೆ ಇತ್ತು. ಆದರೆ, ಅವರು ಕೂಡ ಅಧಿಕಾರಕ್ಕೆ ಬಂದು 6 ತಿಂಗಳೂ ಕಳೆದರೂ ರೈತರು, ಕಾರ್ಮಿಕರಿಗಾಗಿ ಏನೂ ಮಾಡಿಲ್ಲ. ಕನಿಷ್ಠ ಒಂದು ಸಭೆಯನ್ನು ಮಾಡಿಲ್ಲ. ಎರಡೂ ಪಕ್ಷದವರು ಕುಟುಂಬ ರಾಜಕಾರಣ ಮಾಡುತ್ತಿವೆ. ರೈತರು, ಕಾರ್ಮಿಕರು ಅಧಿಕಾರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಎರಡೂ ಪಕ್ಷಗಳು ರೈತ, ಕಾರ್ಮಿಕರ ವಿರೋಧಿಗಳು ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.
ಕನ್ಯಾದಾನ ಮಾಡುವಾಗ ಯಾರೋ ಒಬ್ಬನಿಗೆ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ. ಹಾಗೆಯೇ ಮತದಾನ ಮಾಡುವಾಗ ಕೂಡಾ ನಮಗೆ ಅವರು ನಮಗಾಗಿ ಕೆಲಸ ಮಾಡುತ್ತಾರಾ? ಎಂಬುವುದನ್ನು ನೋಡಿ ಮತದಾನ ಮಾಡಬೇಕಾಗಿದೆ. ಒಂದು ಮಡಕೆ ಕೊಳ್ಳುವ ಮಹಿಳೆ ಅದನ್ನು ಎಲ್ಲಾ ರೀತಿಯಲ್ಲಿ ಪರೀಕ್ಷೆ ಮಾಡುತ್ತಾರೆ. ಹಾಗೆಯೇ ನಮ್ಮನ್ನು ಆಳುವವರ ತಲೆಗೆ ಟಣ್ ಎಂದು ಬಡಿದು ಪರೀಕ್ಷೆ ಮಾಡಿಯೇ ಮತ ನೀಡಬೇಕಾಗಿದೆ ಎಂದರು.
ಇದನ್ನೂ ಓದಿ : ಬೆಂಗಳೂರು: ದುಡಿಯುವ ಜನರ ಮಹಾಧರಣಿ; ಚಿತ್ರಗಳಲ್ಲಿ ನೋಡಿ