ಗೆಳತಿಯ ಕಾಲಿನ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧ ಮಹಾರಾಷ್ಟ್ರದ ಥಾಣೆಯ ಬಿಜೆಪಿ ಯುವ ಮುಖಂಡ ಅಶ್ವಜಿತ್ ಗಾಯಕ್ವಾಡ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಅಶ್ವಜಿತ್ ಬಿಜೆಪಿ ಯುವ ಮೋರ್ಚಾ ಥಾಣೆ ವಿಭಾಗದ ಅಧ್ಯಕ್ಷ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಗಾಯಾಳು ಯುವತಿ ನೀಡಿದ ದೂರಿನ ಪ್ರಕಾರ, ಡಿಸೆಂಬರ್ 11 ರಂದು ಮುಂಜಾನೆ ಥಾಣೆಯ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್ನಲ್ಲಿ ಅಶ್ವಜಿತ್ ಕುಟುಂಬದ ಕಾರ್ಯಕ್ರವೊಂದಿತ್ತು. ಅಲ್ಲಿಗೆ ಆತ ಯುವತಿಯನ್ನು ಆಹ್ವಾನಿಸಿದ್ದ. ಕಾರ್ಯಕ್ರಮದ ವೇಳೆ ಇಬ್ಬರ ನಡುವೆ ವೈಯುಕ್ತಿಕ ವಿಚಾರಕ್ಕೆ ನಡೆದ ಜಗಳ ತಾರಕಕ್ಕೇರಿ ಅಶ್ವಜಿತ್ ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಡ್ರೈವರ್ಗೆ ಹೇಳಿ ಆಕೆಯ ಕಾಲಿನ ಮೇಲೆ ಕಾರು ಹತ್ತಿಸಿದ್ದಾರೆ. ಇದರಿಂದ ಯುವತಿಗೆ ಗಂಭೀರ ಗಾಯಗಳಾಗಿವೆ. ಪ್ರಸ್ತುತ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಆರೋಪಿಯನ್ನು ಬಂಧಿಸಿಲ್ಲ: ಯುವತಿ ಆರೋಪ
ತಾನು ನೀಡಿದ ದೂರು ಪೊಲೀಸರು ಸ್ವೀಕರಿಸಿದ್ದಾರೆ. ಆದರೆ, ಆರೋಪಿ ಅಶ್ವಜಿತ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಲ್ಲ. ಬದಲಾಗಿ ಕೇವಲ ದೌರ್ಜನ್ಯ ಎಂದು ಕೇಸ್ ಹಾಕಿದ್ದಾರೆ. ಅಶ್ವಜಿತ್ ಆಗಲಿ, ಆತನಿಗೆ ಸಹಕರಿಸಿದ ಸ್ನೇಹಿತರನ್ನಾಗಲಿ ಇದುವರೆಗೆ ಬಂಧಿಸಿಲ್ಲ ಎಂದು ಆರೋಪಿಸಿ ಡಿಸೆಂಬರ್ 17 ರಂದು ಆಸ್ಪತ್ರೆಯ ಹಾಸಿಗೆಯಿಂದಲೇ ಯುವತಿ ವಿಡಿಯೋ ಮೂಲಕ ಹೇಳಿದ್ದಾರೆ. ಪೊಲೀಸರು ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಆಕೆ ಹೇಳಿದ್ದಾರೆ.
#WATCH | Thane (Maharashtra) man allegedly running his car over his girlfriend | Victim Priya Singh says, "I had a four-and-a-half-year relationship with my boyfriend. We were completely in love with each other. I did not know earlier that he was married. Later, when I came to… pic.twitter.com/WvFxLZH3g6
— ANI (@ANI) December 16, 2023
ಯುವತಿಯ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ, ಸ್ಥಳೀಯ ಪೊಲೀಸರು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುವುದಾಗಿ ಘೋಷಿಸಿದ್ದಾರೆ. ಎಸ್ಐಟಿ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲಿದೆ. ಪೊಲೀಸ್ ಶ್ರೇಣಿಯ ಉಪ ಆಯುಕ್ತರ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗುವುದು ಎಂದು ಥಾಣೆ ಪೊಲೀಸ್ ಕಮಿಷನರ್ ಜೈ ಜೀತ್ ಸಿಂಗ್ ತಿಳಿಸಿದ್ದಾರೆ.
ಆರೋಪ ನಿರಾಕರಿಸಿದ ಅಶ್ವಜಿತ್
ಯುವತಿಯ ಆರೋಪವನ್ನು ಆರೋಪಿ ಅಶ್ವಜಿತ್ ತಳ್ಳಿ ಹಾಕಿದ್ದಾರೆ. ನಾನು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹೋಟೆಲ್ಗೆ ಯುವತಿ ಕುಡಿದ ಅಮಲಿನಲ್ಲಿ ಬಂದಿದ್ದಳು. ಅಲ್ಲಿ ತನ್ನೊಂದಿಗೆ ಮಾತನಾಡುವಂತೆ ಒತ್ತಾಯಿಸಿದ್ದಳು. ಈ ವೇಳೆ ನಾನು ನಿರಾಕರಿಸಿದಾಗ ಆಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾಳೆ. ನನ್ನ ಸ್ನೇಹಿತರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಮುಂದಾದಾಗ ಅವರ ಮೇಲೂ ಹಲ್ಲೆ ಮಾಡಿದ್ದಾಳೆ. ಈ ವೇಳೆ ನನ್ನ ಡ್ರೈವರ್ ಕಾರು ತೆಗೆದಿದ್ದು, ಆಕೆ ಅದಕ್ಕೂ ಅಡ್ಡ ಬಂದಿದ್ದಳು. ಡ್ರೈವರ್ ಅವಳನ್ನು ಪಕ್ಕಕ್ಕೆ ಹೋಗುವಂತೆ ಹೇಳಿ ಕಾರು ಚಲಾಯಿಸಿದ್ದರು. ಆಗ ಕಾರು ಸ್ವಲ್ಪ ತಾಗಿ ಆಕೆ ಕೆಳಗೆ ಬಿದ್ದಳು. ಇದು ಉದ್ದೇಶಪೂರ್ಕವಾಗಿ ಮಾಡಿದ ಅಪಘಾತ ಅಲ್ಲ ಹೇಳಿದ್ದಾಗಿ ವರದಿಗಳು ತಿಳಿಸಿವೆ.
ಆರೋಪಿ ಅಶ್ವಜಿತ್ ಗಾಯಕ್ವಾಡ್ ಬಿಜೆಪಿ ಮುಖಂಡ ಮಾತ್ರವಲ್ಲದೆ, ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಯ ಮಗ ಕೂಡ ಹೌದು. ಹಾಗಾಗಿ, ಪ್ರಕರಣದಲ್ಲಿ ಪ್ರಭಾವ ಬೀರಿರುವ ಅನುಮಾನವಿದೆ.
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ಪೊಲೀಸರನ್ನು ಪ್ರತಿನಿಧಿಸುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀನಾಮೆ