ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕುಂದನಿ ಬೆಟ್ಟದ ಮೇಲೆ 15 ಕಟ್ಟೆ ಕಟ್ಟಿ ಹೆಸರಾಗಿದ್ದ ಪ್ರಕೃತಿಪ್ರಿಯ ಕಲ್ಮನೆ ಕಾಮೇಗೌಡ (83) ಅವರು ಸೋಮವಾರ ನಸುಕಿನಲ್ಲಿ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮಳವಳ್ಳಿ ತಾಲೂಕಿನ ದಾಸನದೊಡ್ಡಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ವೆಂಕಟಗೌಡ ಮತ್ತು ರಾಜಮ್ಮ ದಂಪತಿಯ ಪುತ್ರ ಕಾಮೇಗೌಡರು ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಆದರೆ ಪುಟ್ಟ ಕೆರೆಗಳನ್ನು ಸಂರಕ್ಷಿಸಿ ಪ್ರಕೃತಿ ಪ್ರೀತಿ ಮೆರೆದಿದ್ದರು.
ಕುರಿಗಾಹಿಯಾಗಿದ್ದ ಅವರು ಕುರಿ ಮಾರಿ ಸಂಪಾದಿಸಿದ ಹಣದಲ್ಲಿ ಬೆಟ್ಟದ ಮೇಲೆ ಕಟ್ಟೆಗಳನ್ನು ತೋಡಿಸಿದ್ದರು. ಪ್ರತಿ ಕಟ್ಟೆಗೂ ದೇವರು ಹಾಗೂ ಮೊಮ್ಮಕ್ಕಳ ಹೆಸರು ಇಟ್ಟಿದ್ದರು. ಹಲವು ವರ್ಷಗಳಿಂದಲೂ ಕಟ್ಟೆಗಳನ್ನು ಸಂರಕ್ಷಿಸಿ ಬೆಟ್ಟದ ತಟದಲ್ಲಿ ಹಸಿರು ಪರಿಸರ ಇರುವಂತೆ ನೋಡಿಕೊಂಡಿದ್ದರು.
ಬೆಟ್ಟದ ಮೇಲ್ಭಾಗ ಹಾಗೂ ತಟದಲ್ಲಿ ನೂರಾರು ಸಸಿ ನೆಟ್ಟು ಬೆಳೆಸಿದ್ದರು. ಕಾಮೇಗೌಡರ ಪ್ರಕೃತಿ ಸಂರಕ್ಷಣೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿತ್ತು, 2020ರಲ್ಲಿ ‘ಮನ್ ಕಿ ಬಾತ್’ ಸರಣಿಯಲ್ಲಿ ಕಾಮೇಗೌಡರ ಸೇವೆಯನ್ನು ಕೊಂಡಾಡಿದ್ದರು.
‘ಬಾಯಾರಿದ ಪ್ರಾಣಿ-ಪಕ್ಷಿಗಳಿಗಾಗಿ ತಮ್ಮ ಸ್ವಂತ ಹಣದಿಂದ ಕಟ್ಟೆಗಳನ್ನು ನಿರ್ಮಿಸಿರುವ ಕಾಮೇಗೌಡರು ಎಲ್ಲರಿಗೂ ಮಾದರಿ. ತಮ್ಮ ಕುರಿಗಳನ್ನು ಮೇಯಿಸಲು ಹೋಗಿದ್ದ ಕಾಮೇಗೌಡರಿಗೆ ನೀರಿನ ಮಹತ್ವದ ಅರಿವಾಯಿತು. ಕಠಿಣ ಪರಿಶ್ರಮ ಮತ್ತು ಬೆವರಿನಿಂದ ಜಲಕಾಯಕ ಮಾಡಿದವರು ಅವರು. ಈ ಕೆರೆಗಳಿಂದ ಸುತ್ತಮುತ್ತಲ ಪ್ರದೇಶದಲ್ಲಿ ಹಸಿರು ಆವರಿಸಿಕೊಂಡಿದೆ’ ಎಂದು ಮೋದಿ ಬಣ್ಣಿಸಿದ್ದರು.
ಇದನ್ನೂ ಓದಿರಿ: ಚಿಕ್ಕಬಳ್ಳಾಪುರ: ಹಾವು ಪ್ರದರ್ಶಿಸಿದ ಜಗ್ಗಿ ವಿರುದ್ಧ ದೂರು; ಕಾನೂನು ಉಲ್ಲಂಘನೆ ಪಟ್ಟಿಗೆ ಮತ್ತೊಂದು ಪ್ರಕರಣ ಸೇರ್ಪಡೆ
ರಾಷ್ಟ್ರಮಟ್ಟದಲ್ಲಿ ಹಲವು ನಾಯಕರು ಅವರ ಸೇವೆಯನ್ನು ಹೊಗಳಿದ್ದರು. ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಕಾಮೇಗೌಡರ ಸೇವೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಮಾಗೋವಿಂದ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಕಾಮೇಗೌಡರಿಗೆ ಸಂದಿದ್ದವು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಕಾಮೇಗೌಡರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂತಾಪ ಸೂಚಿಸಿದ್ದು, “ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡು ಸುಮಾರು 15ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಗಳಿಸಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಜಲಋಷಿ ಶ್ರೀ ಕಾಮೇಗೌಡರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು” ಎಂದು ಟ್ವೀಟ್ ಮಾಡಿದ್ದಾರೆ.
ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡು ಸುಮಾರು15 ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಗಳಿಸಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಜಲಋಷಿ ಶ್ರೀ ಕಾಮೇಗೌಡರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು.
1/2 pic.twitter.com/QRQoBUFqhc— Basavaraj S Bommai (@BSBommai) October 17, 2022
“ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕುಂದೂರು ಬೆಟ್ಟದಲ್ಲಿ 15 ಕೆರೆ ನಿರ್ಮಿಸಿ ಆಧುನಿಕ ಭಗೀರಥ ಎಂದೇ ಪ್ರಸಿದ್ಧಿ ಪಡೆದಿದ್ದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು” ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಹೃದಯಪೂರ್ವಕ ಶ್ರದ್ಧಾಂಜಲಿ.
Prani pakshi parisara premi karmayogi Kamegowdarige hruthpoorvaka shraddanjaligalu.Om shanthi.Om namah shivaya.