ಅಕ್ಟೋಬರ್ 14ರಂದು ಇಂಫಾಲ್ನಲ್ಲಿ ನಡೆದ ಗುಂಡಿನ ದಾಳಿಯ ಪ್ರಮುಖ ಆರೋಪಿ ಎನ್ನಲಾದ ಮಣಿಪುರ ರಾಜ್ಯ ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷ ಎಂ ಬರೀಶ್ ಶರ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಸೇರಿದಂತೆ ಕನಿಷ್ಠ ಐವರು ಗಾಯಗೊಂಡಿರುವ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಇಂಫಾಲ್ ಪೊಲೀಸ್ ಠಾಣೆಯ ತಂಡವು ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷ ಎಂ ಬರೀಶ್ ಶರ್ಮಾ ಅವರ ನಿವಾಸದಿಂದ ಶನಿವಾರ ತಡರಾತ್ರಿ ಬಂಧಿಸಲಾಯಿತು. ಭಾನುವಾರ ಇಂಫಾಲ್ ಪಶ್ಚಿಮ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಅವರನ್ನು ಹಾಜರುಪಡಿಸಲಾಯಿತು, ಅಲ್ಲಿ ಅವರನ್ನು ನಾಲ್ಕು ದಿನಗಳವರೆಗೆ ಅಂದರೆ ಅಕ್ಟೋಬರ್ 25 ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ.
ಬರೀಶ್ ಶರ್ಮಾ ವಿರುದ್ಧದ ಎಫ್ಐಆರ್ನಲ್ಲಿ, ಶಸ್ತ್ರಾಸ್ತ್ರ ಕಾಯ್ದೆ, ಕರ್ಫ್ಯೂ ಉಲ್ಲಂಘನೆ, ಕ್ರಿಮಿನಲ್ ಬೆದರಿಕೆ ಮತ್ತು ಕೊಲೆ ಯತ್ನದ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ಟೋಬರ್ 14 ರಂದು ರಾತ್ರಿ ಇಂಫಾಲ್ ಪಶ್ಚಿಮ ಜಿಲ್ಲೆಯ ಕ್ವಾಕಿಥೆಲ್ ಕೊಂಜೆಂಗ್ ಲೈಕೈ ಎಂಬಲ್ಲಿ ಒಬ್ಬ ವ್ಯಕ್ತಿಯನ್ನು ಅಪಹರಿಸಲು ಸುಮಾರು 20 ಶಸ್ತ್ರಸಜ್ಜಿತ ದುಷ್ಕರ್ಮಿಗಳು ಬಂದರು. ಅವರನ್ನು ಎದುರಿಸಿದ ಜನಸಮೂಹದ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಇದರಲ್ಲಿ ಒಬ್ಬ ಮಹಿಳೆ ಸೇರಿದಂತೆ ಐವರು ಗಾಯಗೊಂಡರು.
ಗುಂಡಿನ ಘಟನೆಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದ ಮುಂದಿನ ಕ್ರಮದಲ್ಲಿ, ಪ್ರಕರಣದ ತನಿಖೆ ನಡೆಸುತ್ತಿರುವ ಇಂಫಾಲ್ ಪೊಲೀಸ್ ಠಾಣೆಯ ತಂಡವು ಘಟನೆಯಲ್ಲಿ ಭಾಗಿಯಾಗಿರುವ ಮಣಿಪುರ ರಾಜ್ಯ ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷ ಎಂ ಬರೀಶ್ ಶರ್ಮಾ ಹಾಗೂ ಹಾಲಿ ಉಪಾಧ್ಯಕ್ಷ ಸೇರಿದಂತೆ ಮೂವರನ್ನು ಬಂಧಿಸಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಕೇಂದ್ರ, ಮಣಿಪುರ ಸರ್ಕಾರಕ್ಕೆ ವಿವರಣೆ ಕೇಳಿ NHRC ನೊಟೀಸ್