Homeಕರ್ನಾಟಕFact check: ರಾಜ್ಯ ಬಜೆಟ್‌ಗೆ ಕೋಮು ಬಣ್ಣ ಬಳಿದ ಸಂಪಾದಕ, ಸತ್ಯಾಂಶ ಇಲ್ಲಿದೆ

Fact check: ರಾಜ್ಯ ಬಜೆಟ್‌ಗೆ ಕೋಮು ಬಣ್ಣ ಬಳಿದ ಸಂಪಾದಕ, ಸತ್ಯಾಂಶ ಇಲ್ಲಿದೆ

- Advertisement -
- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ 16, 2024ರಂದು ತನ್ನ15ನೇ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಈ ಬೆನ್ನಲ್ಲೇ ನವದೆಹಲಿಯ ಪ್ರಮುಖ ಸುದ್ದಿ ವಾಹಿನಿಯೊಂದರ ಸಲಹಾ ಸಂಪಾದಕ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು.

ಅದರಲ್ಲಿ, “ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರವು ತನ್ನ ಬಜೆಟ್‌ನಲ್ಲಿ ವಕ್ಫ್‌ ಆಸ್ತಿಯ ಅಭಿವೃದ್ಧಿಗಾಗಿ, ಮಂಗಳೂರಿನಲ್ಲಿ ಹಜ್ ಭವನಕ್ಕಾಗಿ ಮತ್ತು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ₹330ಕೋಟಿ ಮೀಸಲಿಟ್ಟಿದೆ. ಕರ್ನಾಟಕ ದತ್ತಿ (ಮುಜರಾಯಿ) ಇಲಾಖೆಯಿಂದ ನಿಯಂತ್ರಿಸಲ್ಪಡುವ 400 ‘ಎ ಮತ್ತು ಬಿ’ ವರ್ಗದ ದೇವಾಲಯಗಳಿಗೆ ಹಿಂದೂ ಭಕ್ತರಿಂದ ಬರುವ ವಾರ್ಷಿಕ ದೇಣಿಗೆ ಸರಾಸರಿ ₹450 ಕೋಟಿಯನ್ನು ಜೇಬಿಗಿಳಿಸುವ ರಾಜ್ಯ ಸರ್ಕಾರವು ಇದಾಗಿದೆ” ಎಂದು ಬರೆದುಕೊಂಡಿದ್ದರು.

“ಕೆಟ್ಟ ವಿಷಯವೆಂದರೆ, ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಯಾವುದೇ ಮಸೂದೆಯನ್ನು ಈ ಸರ್ಕಾರ ವಿರೋಧಿಸುತ್ತದೆ. ಇದು ಸೆಕ್ಯುಲರಿಸಂ” ಎಂದೂ ಸಂಪಾದಕ ಬರೆದುಕೊಂಡಿದ್ದರು. ಪೋಸ್ಟ್ ಜೊತೆಯಲ್ಲಿ ರಾಜ್ಯದ ದೇವಾಲಯಗಳ ವಾರ್ಷಿಕ ಆದಾಯ ₹445 ಕೋಟಿಯನ್ನು ಜಿಲ್ಲಾವಾರು ವಿಭಜಿಸುವ ಗ್ರಾಫಿಕ್ ಟೇಬಲ್ ಅನ್ನು ಸಂಪಾದಕ ಹಂಚಿಕೊಂಡಿದ್ದರು.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಸಂಪಾದಕನ ಪೋಸ್ಟ್ ಅನ್ನು ತ್ವರಿತವಾಗಿ ಮರು ಪೋಸ್ಟ್ ಮಾಡಿದ್ದರು. ಅದಕ್ಕೆ ತಮ್ಮದೇ ಆದ ಅಭಿಪ್ರಾಯವನ್ನು ಸೇರಿಸಿದ್ದರು.

“ಹಿಂದೂ ದೇವಾಲಯಗಳಿಂದ ಹಣವನ್ನು ತೆಗೆದುಕೊಂಡು ಅದನ್ನು ಹಿಂದೂಯೇತರ ಧರ್ಮಗಳ ಧಾರ್ಮಿಕ ಸಂಸ್ಥೆಗಳಿಗೆ ಧನ ಸಹಾಯ ಮಾಡಲು ಬಳಸುವುದು ಸಿದ್ದರಾಮಯ್ಯನವರಂತಹ ‘ಜಾತ್ಯತೀತ’ ನಾಯಕರ ಪ್ರಮಾಣಿತ ಎಸ್‌ಒಪಿ. ಅವರ ಸೆಕ್ಯುಲರಿಸಂ ಹಿಂದೂಗಳನ್ನು ಹೊಡೆಯುವ ಕೋಲು ಮಾತ್ರವಲ್ಲ, ಅದು ಹಿಂದೂಗಳ ವೆಚ್ಚದಲ್ಲಿ ಇತರರನ್ನು ಆರ್ಥಿಕವಾಗಿ ಶ್ರೀಮಂತಗೊಳಿಸುವ ಸಾಧನವಾಗಿದೆ” ಎಂದು ಬರೆದುಕೊಂಡಿದ್ದರು.

ಫ್ಯಾಕ್ಟ್‌ಚೆಕ್ : ಹಾಗಾದರೆ, ಮಾಧ್ಯಮ ಸಂಪಾದಕ ಮತ್ತು ಸಂಸದ ತೇಜಸ್ವಿ ಸೂರ್ಯ ಹೇಳಿದಂತೆ ಹಿಂದೂ ದೇವಾಲಯಗಳ ಹಣವನ್ನು ಇತರ ಧರ್ಮೀಯ ಧಾರ್ಮಿಕ ಕೇಂದ್ರಗಳಿಗೆ ನೀಡಲಾಗುತ್ತಿದೆಯಾ? ಈ ಬಾರಿಯ ಬಜೆಟ್‌ನಲ್ಲಿ ವಿವಿಧ ಧರ್ಮಗಳ ಧಾರ್ಮಿಕ ಸಂಸ್ಥೆಗಳಿಗಾಗಿ ಮೀಸಲಿಟ್ಟ ಹಣವೆಷ್ಟು ನೋಡೋಣ…

ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಬಜೆಟ್ ಹಂಚಿಕೆ:

ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಮತ್ತು ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕರ್ನಾಟಕ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಸುಮಾರು ₹730 ಕೋಟಿ ಮೀಸಲಿಟ್ಟಿದೆ.

ಇದರಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ₹100 ಕೋಟಿ ಅನುದಾನ, ತಿರುಮಲ, ಶ್ರೀಶೈಲಂ, ವಾರಣಾಸಿ ಮತ್ತು ಗುಡ್ಡಾಪುರದಂತಹ ಯಾತ್ರಾ ಸ್ಥಳಗಳಲ್ಲಿ ಸುಸಜ್ಜಿತ ವಸತಿ ಸಂಕೀರ್ಣಗಳ ನಿರ್ಮಾಣವೂ ಸೇರಿದೆ.

“ತಿರುಮಲದಲ್ಲಿ ₹200ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಶ್ರೀಶೈಲದಲ್ಲಿ ₹85ಕೋಟಿ ಹಾಗೂ ಗುಡ್ಡಾಪುರದಲ್ಲಿ ₹11 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸಕ್ತ ವರ್ಷ ₹5ಕೋಟಿ ವೆಚ್ಚದಲ್ಲಿ ವಾರಣಾಸಿಯಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು” ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಅಲ್ಲದೆ, ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ‘ಶ್ರೀ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ’ಯನ್ನು ರಚಿಸುವ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ₹158 ಕೋಟಿ ವೆಚ್ಚದಲ್ಲಿ ರಾಯಚೂರು ಜಿಲ್ಲೆಯ ಚಿಕ್ಕನಹಳ್ಳಿ ಗ್ರಾಮದ ಬಳಿ ಸೇತುವೆ-ಕಮ್-ಬ್ಯಾರೇಜ್ ಯೋಜನೆಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಯಾವುದೇ ಆದಾಯವಿಲ್ಲದ 34,165 ಸಿ ಕೆಟಗರಿ ಐತಿಹಾಸಿಕ ದೇವಸ್ಥಾನಗಳಿಗೆ ಮೂಲ ಸೌಕರ್ಯ ಒದಗಿಸಲು ‘ವಿಷನ್ ಗ್ರೂಪ್’ ರಚಿಸಲಾಗುವುದು ಮತ್ತು ಇನಾಂ/ಇನಾಂ ಅಲ್ಲದ ಭೂಮಿ ಕಳೆದುಕೊಂಡ 29,523 ಸಿ ಕೆಟಗರಿ ದೇವಸ್ಥಾನಗಳ ಅರ್ಚಕರಿಗಾಗಿ ವಾರ್ಷಿಕ ₹170ಕೋಟಿ ಹಣ ಮೀಸಲಿಡಲಾಗಿದೆ.

ವಿವಿಧ ಅಲ್ಪಸಂಖ್ಯಾತ ಸಮುದಾಯಗಳಿಗೆ ಬಜೆಟ್ ಹಂಚಿಕೆ:

2024-25ರ ಬಜೆಟ್‌ನಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ) ಮೂಲಕ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಒಟ್ಟು ₹393ಕೋಟಿ ಮೀಸಲಿಡಲಾಗಿದೆ.

ಇದರಲ್ಲಿ ವಕ್ಫ್ ಆಸ್ತಿ ಅಭಿವೃದ್ಧಿಗೆ ₹100ಕೋಟಿ, ಮಂಗಳೂರು ಹಜ್ ಭವನ ನಿರ್ಮಾಣಕ್ಕೆ ₹10ಕೋಟಿ, ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹200ಕೋಟಿ ಮತ್ತು ಜೈನ ಯಾತ್ರಾ ಸ್ಥಳಗಳಿಗೆ ₹50 ಕೋಟಿ ನೀಡಲಾಗಿದೆ.

ಹೆಚ್ಚುವರಿಯಾಗಿ, ಸಿಕ್ಲಿಗರ್ ಸಮುದಾಯವನ್ನು ಸಬಲೀಕರಣಗೊಳಿಸುವ ಉದ್ದೇಶಿತ ಯೋಜನೆಗಳಿಗೆ ₹2 ಕೋಟಿ ನೀಡಲಾಗುವುದು ಮತ್ತು ಬೀದರ್‌ನ ಶ್ರೀ ನಾನಕ್ ಜೀರಾ ಸಾಹಿಬ್ ಗುರುದ್ವಾರಕ್ಕೆ ₹1 ಕೋಟಿ ಅಭಿವೃದ್ಧಿ ಅನುದಾನವನ್ನು ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ, ಹೊಸ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಅಸ್ತಿತ್ವದಲ್ಲಿರುವ ಘಟಕಗಳ ಉನ್ನತೀಕರಣಕ್ಕಾಗಿ ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ (ಕೆಎಸ್‌ಎಫ್‌ಸಿ) ಪಡೆದ ₹10 ಕೋಟಿವರೆಗಿನ ಸಾಲದ ಮೇಲೆ ಶೇಕಡಾ 6 ರ ಬಡ್ಡಿ ಸಹಾಯಧನವನ್ನು ಒದಗಿಸಲಾಗುವುದು.

ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ರೇಷ್ಮೆ ರೀಲರ್‌ಗಳನ್ನು ಆರ್ಥಿಕವಾಗಿ ಬೆಂಬಲಿಸಲು ರೇಷ್ಮೆ ಇಲಾಖೆ ಮೂಲಕ ತರಬೇತಿಯೊಂದಿಗೆ ಕೆಎಂಡಿಸಿ ಮೂಲಕ ಸಾಲವನ್ನು ನೀಡಲಾಗುವುದು.

ಅಲ್ಪಸಂಖ್ಯಾತ ಸಮುದಾಯಗಳ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುವುದು ಮತ್ತು ಅಂತಹ ಕಾರ್ಯಕ್ರಮಗಳಿಗೆ ₹10 ಕೋಟಿ ವಿನಿಯೋಗಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಸಂಪಾದಕನ ಆರೋಪ ಅಲ್ಲಗಳೆದ ಸಚಿವರು:

ಮುಖ್ಯವಾಹಿನಿ ಮಾಧ್ಯಮ ಸಂಪಾದಕನ ಆರೋಪವನ್ನು ತಳ್ಳಿಹಾಕಿದ ಸಚಿವ ರಾಮಲಿಂಗಾ ರೆಡ್ಡಿ, “ಹಿಂದೂ ದೇವಾಲಯಗಳ ಹಣವನ್ನು ಯಾರಿಗೂ ಹಸ್ತಾಂತರಿಸದೆ, ಅವುಗಳ ಅಭಿವೃದ್ಧಿಗೆ ಮಾತ್ರ ಬಳಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಸಂಪಾದಕನ ದಾರಿತಪ್ಪಿಸುವ ಪೋಸ್ಟ್‌ ಅನ್ನು ಟೀಕಿಸಿದ ಸಚಿವರು, ತಮ್ಮ ಸ್ಪಷ್ಟೀಕರಣದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಟ್ಯಾಗ್ ಮಾಡಿದ್ದಾರೆ.

“ಇದು ಯಾವ ರೀತಿಯ ಪತ್ರಿಕೋದ್ಯಮ? ಪ್ರತಿಷ್ಠಿತ ಸುದ್ದಿ ವಾಹಿನಿಯ ಸಲಹಾ ಸಂಪಾದಕರಾಗಿ ಇದು ಕನ್ನಡಿಗರನ್ನು ಮತ್ತು ಇಡೀ ರಾಷ್ಟ್ರವನ್ನು ದಾರಿ ತಪ್ಪಿಸುವ ಮಾರ್ಗವಲ್ಲವೇ? ಮುಜುರಾಯಿ ದೇವಾಲಯಗಳಿಂದ ಬರುವ ಹಣವನ್ನು ಅದೇ ದೇಗುಲಗಳಿಗೆ ಮಾತ್ರ ಬಳಸಲಾಗುತ್ತಿದೆ ಎಂದು ಸರ್ಕಾರ ಮತ್ತು ನಾನು ಪದೇ ಪದೇ ಹೇಳುತ್ತಿದ್ದೇವೆ. ಒಂದು ದೇವಸ್ಥಾನದ ಹಣದ ಒಂದು ಪೈಸೆಯನ್ನೂ ಮತ್ತೊಂದು ದೇವಸ್ಥಾನಕ್ಕೆ ಬಳಸುವಂತಿಲ್ಲ. ದೇವಾಲಯದಲ್ಲಿ ಸಂಗ್ರಹಿಸಲಾದ ಹಣವನ್ನು ನಿರ್ದಿಷ್ಟ ದೇವಾಲಯಕ್ಕೆ ಮಾತ್ರ ವಿನಿಯೋಗಿಸಲಾಗುತ್ತಿದೆ” ಎಂದು ಸಚಿವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ವಿರುದ್ದ ಕಿಡಿಕಾರಿದ ಸಚಿವರು, “ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಂಸದರ ಈ ರೀತಿಯ ಪೋಸ್ಟ್‌ ಅಥವಾ ಹೇಳಿಕೆ ಮತ್ತೊಂದು ರಾಜಕೀಯ ಸ್ಟಂಟ್ ಆಗಿದೆ. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲೂ ಹೀಗೆಯೇ ಮಾಡಲಾಗಿತ್ತು. ಆದರೆ, ಬಿಜೆಪಿ ಸ್ನೇಹಿತರ ಹಿಂದೂ ನಾಟಕವನ್ನು ನೋಡಿರುವ ನಮ್ಮ ಕರ್ನಾಟಕದ ಜನತೆಗೆ ಸತ್ಯ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ ಜನಸ್ನೇಹಿಯಾಗಿದೆ. ಜನರಿಂದ, ಜನರಿಗಾಗಿ ಇರುವ ಬಜೆಟ್ ಅನ್ನು ವಿರೋಧಿಸಲು ಬಿಜೆಪಿ ಸ್ನೇಹಿತರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಹೊಸ ನಾಟಕ ಶುರು ಮಾಡಿದ್ದಾರೆ” ಎಂದಿದ್ದಾರೆ.

“ಈ ರೀತಿ ಸುಳ್ಳು ಸುದ್ದಿ ಹಬ್ಬುವ ಬದಲಿಗೆ, ಬಿಜೆಪಿ ಪಕ್ಷ ಮತ್ತು ಅದರ 25ಕ್ಕೂ ಹೆಚ್ಚು ಸಂಸದರು ಕರ್ನಾಟಕಕ್ಕೆ ಬರ ಬೇಕಿರುವ ತೆರಿಗೆ ಪಾಲನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ” ಎಂದು ರಾಮಲಿಂಗಾರೆಡ್ಡಿ ತಿರುಗೇಟು ಕೊಟ್ಟಿದ್ದಾರೆ.

ಈ ನಡುವೆ, ಫ್ಯಾಕ್ಟ್ ಚೆಕ್ಕಿಂಗ್ ವೆಬ್‌ಸೈಟ್ ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಝುಬೈರ್ ಅವರು, “ಬಜೆಟ್ ಹಂಚಿಕೆಗೆ ಕೋಮುವಾದದ ಬಣ್ಣ ಹಚ್ಚಲು ಪ್ರಯತ್ನಿಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ದಾರಿ ತಪ್ಪಿಸುವ ‘ಸುದ್ದಿ ನಿರೂಪಕನ’ ವಿರುದ್ಧ ಏಕೆ ಎಫ್‌ಐಆರ್ ದಾಖಲಿಸಬಾರದು? ಎಂದು ಪ್ರಶ್ನಿಸಿದ್ದಾರೆ.

ಸಚಿವರ ಸ್ಪಷ್ಟೀಕರಣಕ್ಕೆ ಸಂಪಾದಕನ ಪ್ರತಿಕ್ರಿಯೆ

ಸುಳ್ಳು ಮಾಹಿತಿಯ ತನ್ನ ಪೋಸ್ಟ್‌ಗೆ ಸಚಿವರು ಸ್ಪಷ್ಟೀಕರಣ ಕೊಡುತ್ತಿದ್ದಂತೆ ಪ್ರತಿಕ್ರಿಯಿಸಿದ ಸಂಪಾದಕ, “ಮಾನ್ಯ ಸಚಿವರೇ ನೀವು ಹಿಂದೂ ದೇವಾಲಯಗಳ ಹಣವನ್ನು ಅನ್ಯ ಧರ್ಮೀಯ ದೇವಾಲಯಗಳಿಗೆ ಕೊಡುತ್ತಿದ್ದೀರಿ ಎಂದು ನಾನು ಹೇಳುತ್ತಿಲ್ಲ. ವಾಸ್ತವವಾಗಿ, ನೀವು ಕಾನೂನಿನ ಮೂಲಕ ಇದನ್ನು ಮಾಡಲು ಸಾಧ್ಯವಿಲ್ಲ. ನಾನು ಹೇಳುವುದೇನೆಂದರೆ, ಯಾವುದೇ ಧರ್ಮದ ಧಾರ್ಮಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು, ನಿರ್ವಹಿಸಲು ಅಥವಾ ಮೇಲ್ದರ್ಜೆಗೆ ಏರಿಸಲು ಯಾವುದೇ ರಾಜ್ಯ ಸರ್ಕಾರ (ಬಿಜೆಪಿ ಕೂಡ) ಜನರ ಹಣವನ್ನು ಯಾಕೆ ಬಳಸಬೇಕು? ಸರ್ಕಾರ ಯಾಕೆ ದೇವಸ್ಥಾನಗಳನ್ನು ನಿಯಂತ್ರಿಸಬೇಕು? ಜಾತ್ಯಾತೀತೆ ಎಂದರೆ ಧರ್ಮ ಮತ್ತು ಸರ್ಕಾರವನ್ನು ಪ್ರತ್ಯೇಕಿಸುವಂತದ್ದು. ದುರದೃಷ್ಟವಶಾತ್, ಭಾರತದಲ್ಲಿ, ನಾವು ಈ ಸಾಲುಗಳನ್ನು ಮಸುಕುಗೊಳಿಸಿದ್ದೇವೆ. ನೀವು ಒಪ್ಪುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ಸಚಿವರು ನೀಡಿರುವ ಸ್ಪಷ್ಟೀಕರಣ ಮತ್ತು ಬಜೆಟ್‌ನ ಅಂಕಿ ಅಂಶಗಳ ಪ್ರಕಾರ, ಹಿಂದೂ ದೇವಾಲಯಗಳ ಹಣವನ್ನು ಇತರ ಧರ್ಮಗಳ ಧಾರ್ಮಿಕ ಕೇಂದ್ರಗಳಿಗೆ ನೀಡಲಾಗುತ್ತಿದೆ ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಮಾಧ್ಯಮ ಸಂಪಾದಕನ ಪೋಸ್ಟ್‌ ಮತ್ತು ಅದಕ್ಕೆ ಸಂಸದ ತೇಜಸ್ವಿ ಸೂರ್ಯ ನೀಡಿರುವ ಪ್ರತಿಕ್ರಿಯೆ ಕೋಮು ಭಾವನೆಯಿಂ ಕೂಡಿದೆ ಎಂಬುವುದು ಸ್ಪಷ್ಟ.

ಇದನ್ನೂ ಓದಿ: Fact Check: ಸದಾ ಜೈ ಶ್ರೀರಾಮ್ ಎನ್ನುವ ಹಿಂದೂಗಳ ಮೇಲೆ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ ಎಂಬುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...