ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಹಿಂಸಾಚಾರ ತಾರಕಕ್ಕೇರಿದೆ. ಗಲಭೆಯಿಂದಾಗಿ ಬುಧವಾರದಿಂದ ಇಲ್ಲಿಯವರಿಗೆ ಅಧಿಕೃತವಾಗಿ 54 ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
54 ಮೃತರಲ್ಲಿ 16 ಶವಗಳನ್ನು ಚುರಾಚಂದ್ಪುರ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, 15 ಮೃತದೇಹಗಳು ಇಂಫಾಲ್ ಪೂರ್ವ ಜಿಲ್ಲೆಯ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುರಾಚಂದ್ಪುರ, ಮೋರೆ, ಕಾಕ್ಚಿಂಗ್ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳನ್ನು ಸೇನೆಯು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಒಟ್ಟು 13,000 ಜನರನ್ನು ರಕ್ಷಿಸಲಾಗಿದೆ ಮತ್ತು ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಮಣಿಪುರದ 16 ಜಿಲ್ಲೆಗಳ ಪೈಕಿ ಒಂಬತ್ತು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಸುಮಾರು 20,000 ಜನರು ನಿರಾಶ್ರಿತರಾಗಿದ್ದಾರೆ ಮತ್ತು ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸಬೇಕೆಂಬ ಬಹುಸಂಖ್ಯಾತ ಮೈತೇಯಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಮಣಿಪುರದ ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ ನಂತರ ಬುಧವಾರ ಹಿಂಸಾಚಾರ ಭುಗಿಲೆದ್ದಿತು.
ಕಳೆದ ತಿಂಗಳು ವಿಚಾರಣೆಯನ್ನು ನಡೆಸಿದ ಮಣಿಪುರ ಉಚ್ಚ ನ್ಯಾಯಾಲಯವು, ಮೈತೇಯಿ ಸಮುದಾಯದ ಬೇಡಿಕೆಯ ಅರ್ಜಿಗಳನ್ನು ಪರಿಗಣಿಸಲು ಮತ್ತು ಅದನ್ನು “ತ್ವರಿತವಾಗಿ” ವಿಲೇವಾರಿ ಮಾಡಲು ಬಿಜೆಪಿ ಸರ್ಕಾರಕ್ಕೆ ಸೂಚಿಸಿತ್ತು.
ಹಾಕಿಪ್ನ ಹತ್ಯೆಯ ಹಿನ್ನೆಲೆಯಲ್ಲಿ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಶುಕ್ರವಾರ ಮಣಿಪುರದ ತನ್ನ ಎಲ್ಲಾ ಸಿಬ್ಬಂದಿಗೆ ಸಂದೇಶವನ್ನು ರವಾನಿಸಿದೆ. ರಜೆಯಲ್ಲಿ ಇರುವ ಎಲ್ಲಾ ಸಿಬ್ಬಂದಿ ತಮ್ಮ ಕುಟುಂಬ ಸದಸ್ಯರೊಂದಿಗೆ ಹತ್ತಿರದ ಭದ್ರತಾ ನೆಲೆಗೆ ಬಂದು ತಕ್ಷಣ ವರದಿ ಮಾಡಬೇಕೆಂದು ಸೂಚಿಸಲಾಗಿದೆ. ಅಂತಹ ಸಿಬ್ಬಂದಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಸಿಆರ್ಪಿಎಫ್ನ ನಾಗಾಲ್ಯಾಂಡ್ ಸೆಕ್ಟರ್ ಆಫೀಸ್ಗೆ ತಿಳಿಸಲಾಗಿದೆ.
ಶುಕ್ರವಾರ ಮುಂಜಾನೆ, ಉಗ್ರಗಾಮಿ ಗುಂಪುಗಳು ಮತ್ತು ಭದ್ರತಾ ಪಡೆಗಳ ನಡುವೆ ಮಧ್ಯಂತರ ಗುಂಡಿನ ಚಕಮಕಿಗಳು ನಡೆದಿವೆ. ಚುರಾಚಂದ್ಪುರ ಜಿಲ್ಲೆಯ ಕಾಂಗ್ವೈ, ಪಕ್ಕದ ಬಿಷ್ಣುಪುರ ಜಿಲ್ಲೆಯ ಫೌಗಕ್ಚಾವೊದ ಪಶ್ಚಿಮ ಗುಡ್ಡಗಾಡು, ಇಂಫಾಲ್ ಪೂರ್ವ ಜಿಲ್ಲೆಯ ದೋಲೈತಾಬಿ ಮತ್ತು ಪುಖಾವೊದಲ್ಲಿ ಗುಂಡಿನ ಘರ್ಷಣೆಗಳು ವರದಿಯಾಗಿವೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಸಿಆರ್ಪಿಎಫ್ ಯೋಧನಿಗೆ ಗುಂಡಿಕ್ಕಿ ಹತ್ಯೆ