ಮಣಿಪುರ ಸರ್ಕಾರವು ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ನಿಷೇಧವನ್ನು ನವೆಂಬರ್ 8 ರವರೆಗೆ ವಿಸ್ತರಿಸಿದೆ. ಆಯುಕ್ತ (ಗೃಹ) ಟಿ. ರಂಜಿತ್ ಸಿಂಗ್ ಅವರು ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ”ಸಾಮಾಜಿಕ ವಿರೋಧಿಗಳು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಬಹುದೆಂಬ ಆತಂಕದ ನಂತರ ನಿಷೇಧವನ್ನು ವಿಸ್ತರಿಸಲಾಗಿದೆ. ಸಾರ್ವಜನಿಕರ ಭಾವೋದ್ರೇಕಗಳನ್ನು ಪ್ರಚೋದಿಸುವ ಚಿತ್ರಗಳು, ದ್ವೇಷದ ಭಾಷಣಗಳು ಮತ್ತು ದ್ವೇಷದ ವೀಡಿಯೊ ಸಂದೇಶಗಳ ಪ್ರಸಾರವು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು” ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ನವೆಂಬರ್ 1 ರಂದು, ಒಂದು ಗುಂಪು ಮಣಿಪುರ ರೈಫಲ್ಸ್ ಶಿಬಿರದ ಮೇಲೆ ದಾಳಿ ಮಾಡಿ ಅದರ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿತು, ಇದು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಲು ಪ್ರೇರೇಪಿಸಿತು.
ಜೀವಹಾನಿ ಮತ್ತು/ಅಥವಾ ಸಾರ್ವಜನಿಕ-ಖಾಸಗಿ ಆಸ್ತಿಗೆ ಹಾನಿಯಾಗುವ ಅಪಾಯದ ಅಂಶಗಳು ಕಂಡುಬಂದ ನಂತರ ಈ ಸೂಚನೆಯು ಹೊರಬಂದಿದೆ. ದ್ವೇಷಪೂರಿತ ಸಂದೇಶ ಮತ್ತು ಸುಳ್ಳು ವದಂತಿಗಳು ಸಾಮಾಜಿಕ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ಹರಡಬಹುದು / ಪ್ರಸಾರ ಮಾಡಬಹುದು ಎನ್ನುವ ಉದ್ದೇಶದಿಂದ ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ನಿಷೇಧವನ್ನು ಮುಂದುವರೆಸಿದೆ.
ಅಕ್ಟೋಬರ್ 31ರಂದು ಮೊರೆಹ್ ಪಟ್ಟಣದಲ್ಲಿ ಬುಡಕಟ್ಟು ಉಗ್ರಗಾಮಿಗಳು ಎಸ್ಡಿಪಿಒ ಅವರನ್ನು ಗುಂಡಿಕ್ಕಿ ಕೊಂದ ಘಟನೆಯ ನಂತರ ರಾಜ್ಯ ರಾಜಧಾನಿ ಉದ್ವಿಗ್ನತೆಗೆ ಸಾಕ್ಷಿಯಾಗಿದೆ.
ಮಣಿಪುರದಲ್ಲಿ ಸೆಪ್ಟೆಂಬರ್ ತಿಂಗಳ ಕೆಲವು ದಿನಗಳನ್ನು ಹೊರತುಪಡಿಸಿ ಮೇ 3 ರಿಂದ ಮೊಬೈಲ್ ಇಂಟರ್ನೆಟ್ ಅನ್ನು ನಿಷೇಧಿಸಲಾಗಿದೆ. ಮೇ 2023ರಲ್ಲಿ ಮಣಿಪುರದಲ್ಲಿ ಸಂಭವಿಸಿದ ಜನಾಂಗೀಯ ಘರ್ಷಣೆಯ ನಂತರ ಇಂಟರ್ನೆಟ್ ನಿಷೇಧವನ್ನು ವಿಧಿಸಲಾಯಿತು. ಸರ್ಕಾರವು ನಿಯತಕಾಲಿಕವಾಗಿ ಮೊಬೈಲ್ ಇಂಟರ್ನೆಟ್ ನಿಷೇಧವನ್ನು ವಿಸ್ತರಿಸುತ್ತಿದೆ.