Homeಕರ್ನಾಟಕಬಾಬಾಸಾಹೇಬರ ಫೋಟೋ ತೆರವು ಘಟನೆ; ಈ ಅವಮಾನ ಕೊನೆಯದಲ್ಲ...

ಬಾಬಾಸಾಹೇಬರ ಫೋಟೋ ತೆರವು ಘಟನೆ; ಈ ಅವಮಾನ ಕೊನೆಯದಲ್ಲ…

- Advertisement -
- Advertisement -

ಸಂವಿಧಾನ ಸಭೆಯಲ್ಲಿ ಮುಖ್ಯನ್ಯಾಯಾಧೀಶ ಹುದ್ದೆಯ ಅಧಿಕಾರದ ಬಗ್ಗೆ ಚರ್ಚೆಗಳಾಗುತ್ತಿದ್ದಾಗ ಡಾ. ಬಿ. ಆರ್. ಅಂಬೇಡ್ಕರ್ ’ನಾನೂ ವೈಯಕ್ತಿಕವಾಗಿ ಒಪ್ಪುತ್ತೇನೆ. ಮುಖ್ಯ ನ್ಯಾಯಾಧೀಶರು ಬಹಳ ಶ್ರೇಷ್ಠ ವ್ಯಕ್ತಿ. ಆದರೆ, ಎಷ್ಟಾದರೂ ಅವರು ನಮ್ಮಂತೆ ಮನುಷ್ಯರೇ. ಎಲ್ಲರಂತೆ ಲೋಪಗಳು, ಭಾವನೆಗಳು ಮತ್ತು ಪೂರ್ವಾಗ್ರಹಗಳನ್ನು ಹೊಂದಿರುತ್ತಾರೆ’ ಎಂದಿದ್ದರು. ಅವರ ಈ ಮಾತುಗಳಲ್ಲಿ ನ್ಯಾಯಾಧೀಶರಾದವರು ಈ ಸಮಾಜದ ಸಹಜ ಲೋಪಗಳನ್ನು ಸದಾ ಮೀರಬೇಕೆಂಬ ತುಡಿತವಿತ್ತು. ಭಾರತದ ಸಂವಿಧಾನ ಪೀಠಿಕೆಯೂ ಸಹ ಸಾಮಾಜಿಕ ನ್ಯಾಯವನ್ನು ಈ ನಿಟ್ಟಿನಲ್ಲಿಯೇ ಎತ್ತಿ ಹಿಡಿಯುತ್ತದೆ. ನ್ಯಾಯವನ್ನು ನೀಡುವ ಮನುಷ್ಯರು ಸಾಧ್ಯವಾದಷ್ಟು ಸಾಮಾಜಿಕ ಪಟ್ಟಭದ್ರ ಹಿತಾಸಕ್ತಿಗಳಿಂದ ದೂರವಿರಬೇಕಾದ್ದು ನ್ಯಾಯಾಂಗದ ಮೊಟ್ಟ ಮೊದಲ ಅರ್ಹತೆ. ಆದರೇನು ಮಾಡುವುದು ನಮ್ಮ ನ್ಯಾಯಾಂಗದ ನಡವಳಿಕೆಗಳು ಕೆಲವೊಮ್ಮೆ ಭಾರತದ ಸಂವಿಧಾನದ ಮೌಲ್ಯಗಳ ವಿರುದ್ಧವಿರುತ್ತದೆ.

ಮಲ್ಲಿಕಾರ್ಜುನ ಗೌಡ

ಕೆಳಹಂತದ ನ್ಯಾಯಾಧೀಶರ ಕತೆಗಳೊಂದಷ್ಟನ್ನು ಕೇಳಿಬಿಟ್ಟರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಒಂದೆರಡು ಉದಾಹರಣೆಗಳನ್ನು ನೋಡುವುದಾದರೆ, 2013ರಲ್ಲಿ ಅಲಹಾಬಾದ್‌ನಲ್ಲಿ ಜಿಲ್ಲಾ ನ್ಯಾಯಾಧೀಶರೊಬ್ಬರು ತಮಗೆ ಗೊತ್ತು ಮಾಡಿದ ಕೊಠಡಿಯನ್ನು ಗಂಗಾಜಲದಿಂದ ಶುದ್ಧೀಕರಿಸಿದ್ದರಂತೆ. ಅದಕ್ಕೆ ಕಾರಣ ಈ ಹಿಂದೆ ಆ ಕೊಠಡಿಯಲ್ಲಿದ್ದದ್ದು ದಲಿತ ನ್ಯಾಯಾಧೀಶರು! ಇದೇ ವರ್ಷದಲ್ಲಿ ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಧೀಶರೊಬ್ಬರು ಎಲ್ಲಾ ಶಾಲಾಮಕ್ಕಳಿಗೂ ಬ್ರಾಹ್ಮಣ ಜ್ಯೋತಿಷಿಯ ಬಳಿ ಭವಿಷ್ಯ ಕೇಳಿಸಿ ಶಾಲೆಗೆ ದಾಖಲಿಸಬೇಕೆಂದು ಅಭಿಪ್ರಾಯಪಟ್ಟಿದ್ದರು. ಬಾಂಬೆ ಹೈಕೋರ್ಟ್ ಜ್ಯೋತಿಷ್ಯವನ್ನು ವಿಜ್ಞಾನವೆಂದು ತೀರ್ಪು ನೀಡಿತ್ತು. ಹೀಗಿದ್ದ ನ್ಯಾಯಾಧೀಶರು 2021ರಷ್ಟೊತ್ತಿಗೆ ಯಾವ ಮಟ್ಟ ತಲುಪಿದ್ದಾರೆ ನೋಡಿ. ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ’ಆಕ್ಸಿಜನ್‌ಅನ್ನು ಹೊರಹಾಕುವ ಏಕೈಕ ಪ್ರಾಣಿ ದನವಾಗಿದೆ’ ಎಂದಿದ್ದರು. ’ದನವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕು’ ಎಂದಿದ್ದರು. ಇತ್ತೀಚೆಗೆ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರಾದ ಅಬ್ದುಲ್ ನಜೀರ್ ಸಾಬ್ ’ಮನು, ಚಾಣಕ್ಯರಂತಹ ದೇಸೀ ನ್ಯಾಯದಿಶಾರದರ ನ್ಯಾಯಸಂಹಿತೆಯನ್ನು ಅಳವಡಿಸಿಕೊಳ್ಳಬೇಕೆಂದು’ ಕರೆ ನೀಡಿದ್ದರು.

ಈ ಮೇಲಿನಂತೆ ನೂರಾರು ಹೇಳಿಕೆಗಳಿವೆ ಬಿಡಿ. ಇಂತಹ ನ್ಯಾಯಾಧೀಶರಿಂದ ಸಂವಿಧಾನ ಮೌಲ್ಯವನ್ನು ಎತ್ತಿಹಿಡಿಯಲಾಗುತ್ತದೆಯೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಮುಖಾಮುಖಿಯಾಗಿ ಮೊನ್ನೆ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನ ತಾರತಮ್ಯಪೂರಿತ ಅವಿವೇಕತನವನ್ನು ನೋಡಬೇಕಿದೆ. ಆತನಿಗೆ ಉದ್ಯೋಗ ನೀಡಿ ಕರ್ತವ್ಯಗಳ ಪಟ್ಟಿಯನ್ನು ನಿಗದಿಪಡಿಸಿರುವುದು ಭಾರತದ ಸಂವಿಧಾನವಾದರೂ ಅವರ ತಲೆಯಲ್ಲಿ ತುಂಬಿರುವುದು ಮಾತ್ರ ಭಾರತದ ವಿಲಕ್ಷಣ ಜಾತಿ ತಾರತಮ್ಯ ವ್ಯವಸ್ಥೆ. ನ್ಯಾಯಾಧೀಶನೊಬ್ಬ ಈ ಹಿಂದೆ ಇಂತಹ ತಾರತಮ್ಯ ಮಾಡಲು ಹಿಂದುಮುಂದು ನೋಡುತ್ತಿದ್ದನೇನೋ (ಕನಿಷ್ಟ 80-90 ರ ದಶಕದಲ್ಲಿ ಇದು ಸತ್ಯವಾಗಿರುತ್ತದೆ). ಕನಿಷ್ಠ ತನ್ನ ಇತರೆ ಜಾತಿಯ ಸಹವರ್ತಿಗಳು ತನ್ನ ಬಗ್ಗೆ ಏನೆಲ್ಲಾ ಭಾವಿಸಬಹುದು ಎಂದು ಅಳುಕುತ್ತಿದ್ದನೇನೋ. ಆದರೆ ಇಂದು ಪ್ರಭುತ್ವವೇ ಇಂತಹ ನ್ಯಾಯಾಧೀಶರ ಪರವಾಗಿ ನಿಂತಿದೆ. ಸುಪ್ರೀಂ ಕೋರ್ಟ್ ಎಸ್.ಸಿ ಮತ್ತು ಎಸ್.ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989 (ಅಟ್ರಾಸಿಟಿ ತಡೆ ಕಾಯ್ದೆ) ಮತ್ತು ತಿದ್ದುಪಡಿ 2015 ಇದನ್ನು ದಲಿತರು ’ಅತಿರೇಕದ ದುರ್ಬಳಕೆ’ ಮಾಡಿಕೊಳ್ಳುತ್ತಿದ್ದಾರೆ ಎಂದು ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಇಂತಹ ಮನಸ್ಥಿತಿಗಳ ಹಿಂದೆ ಪ್ರಭುತ್ವದ ಒಪ್ಪಿಗೆ ಇರಲೇಬೇಕು. ಪ್ರಭುತ್ವದ ಧೋರಣೆಯೇ ಸಮಾಜದ ಧೋರಣೆಯೆಂದು ಬಿಂಬಿಸುವ ಜಾಗಟೆಗಳಿರಬೇಕು. ಆ ಜಾಗಟೆಗಳು ಇದನ್ನು ಸಾರ್ವತ್ರೀಕರಣಗೊಳಿಸಬೇಕು. ಹೀಗೆ ಪ್ರಭುತ್ವವೊಂದು ನಮ್ಮದೆಂದು ಜನತೆಗೆ ಅನಿಸಿದಾಗ ಪ್ರಭುತ್ವದ ವಿರೋಧಿಗಳೆಲ್ಲ ಜನರ ವಿರೋಧಿಗಳಾಗಿಯೂ ಪ್ರಭುತ್ವಕ್ಕೆ ಬಹುಪರಾಕು ಹೇಳುವವರೆಲ್ಲ ಜನನಾಯಕರಂತೆಯೂ ಕಾಣುತ್ತಾರೆ. ಅಲ್ಲಿಗೆ ಫ್ಯಾಸಿಸಂ ತನ್ನ ಬಲೆಗಳನ್ನು ದೊಡ್ಡದು ಮಾಡಿಕೊಳ್ಳುತ್ತಾ ಹೋಗುತ್ತಿರುತ್ತದೆ.

ಭಾರತದ ಸಂವಿಧಾನ ಜಾರಿಯಾದಾಗಿನಿಂದಲೂ ಅದರ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಎನ್ನುವುದನ್ನು ಒಪ್ಪಿಕೊಳ್ಳಲು ತಿಣುಕಾಡುತ್ತಿದ್ದ ಬೆರಳೆಣಿಕೆಯಷ್ಟು ಜನರ ಸಂಖ್ಯೆ ಇಂದು ಗಮನಾರ್ಹವಾಗಿ ಬೆಳೆದು ನಿಂತಿದೆ. ಸಂವಿಧಾನ ಸಭೆಯ ಚರ್ಚೆಗಳನ್ನು ಹೆಕ್ಕಿ ಮುಂದಿಟ್ಟರೂ ಸತ್ಯವನ್ನು ಅರಿಯಲು ಅವರಿಂದ ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ ’ಸಂವಿಧಾನವನ್ನು ಬದಲಾಯಿಸುತ್ತೇವೆ’ ಎಂದು ಸರ್ಕಾರದ ಪಾಲುದಾರನೇ ಹೇಳುತ್ತಿದ್ದರು ಅದನ್ನು ನಂಬಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ’ಗೋಹತ್ಯಾ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆ’ಗಳು ಸೇರಿಕೊಳ್ಳಲು ಹೇಗೆ ಸಾಧ್ಯ? ಬ್ರಾಹ್ಮಣರಾದಿಯಾಗಿ ಮೇಲ್ಜಾತಿಗಳಿಗೆ ಕೇವಲ ಆರ್ಥಿಕ ಮಾನದಂಡದ ಆಧಾರದಲ್ಲಿ ಅವರ ಜನಸಂಖ್ಯೆಗಿಂತಲೂ ಹೆಚ್ಚಿಗೆ ಮೀಸಲಾತಿ ಕೊಡಲು ಹೇಗೆ ಸಾಧ್ಯ? 72 ವರ್ಷದ ನಂತರವೂ ಅಸ್ಪೃಶ್ಯತೆ ನಿಷೇಧವಾಗದಿರಲು ಹೇಗೆ ಸಾಧ್ಯ? ಕೇವಲ 10 ಶ್ರೀಮಂತರು ಭಾರತದ ಶೇ. 45 ರಷ್ಟು ಸಂಪತ್ತನ್ನು ಹೊಂದಲು ಹೇಗೆ ಸಾಧ್ಯ? ಈ ಪ್ರಶ್ನೆಗಳಿಗೆ ಉತ್ತರವೇನು? ಎಲ್ಲಾ ಭಾರತೀಯರಿಗಾಗಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಉಳ್ಳವರು ತಮ್ಮ ಪರವಾಗಿ ತಿದ್ದುಪಡಿ ಮಾಡಿಕೊಳ್ಳುತ್ತಿದ್ದಾರೆ ಎಂಬುದಲ್ಲವೇ?

ಅಬ್ದುಲ್ ನಜೀರ್ ಸಾಬ್

ಮೇಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಾಗ ಮಾತ್ರ ಜಿಲ್ಲಾ ನ್ಯಾಯಾಧೀಶನೊಬ್ಬ ’ಸಂವಿಧಾನ ಶಿಲ್ಪಿಯ ಭಾವಚಿತ್ರವನ್ನು ಇಡಲು ಹಾಗೂ ಇಟ್ಟ ಭಾವಚಿತ್ರವನ್ನು ನಿರಾಕರಿಸಲು ಇರುವ ಕಾರಣಗಳನ್ನು ತಿಳಿಯಬಹುದಾಗಿದೆ. ಅಂದು ಅಂಬೇಡ್ಕರರ ಭಾವಚಿತ್ರಕ್ಕೆ ಆದ ಅವಮಾನಕ್ಕೆ ಅದೆಷ್ಟು ಜನ ಕೆಂಡಾಮಂಡಲರಾದರೋ ಬಹುಶಃ ಅದಕ್ಕಿಂತಲೂ ಹೆಚ್ಚು ಜನ ಒಳಗೊಳಗೇ ಖುಷಿಗೊಂಡಿಲ್ಲ ಎಂಬುದನ್ನು ಖಚಿತವಾಗಿ ಹೇಳುವ ಧೈರ್ಯ ಯಾರಿಗಿದೆ? ಇದು ಕೇವಲ ಭಾವಚಿತ್ರದ ಕತೆಯಲ್ಲ. ಇಡೀ ದೇಶದ ಕತೆ. ಭಾರತೀಯರ ಕತೆ. ಕೊಳೆತ ಹೆಣವನ್ನು ಹೂಳದೆ ಮಮ್ಮಿಯಾಗಿಸಿಕೊಂಡು ಅದನ್ನೇ ಪರಂಪರೆಯೆಂದು ಕೊಂಡಾಡುತ್ತ ಆಗಾಗ ಸುಗಂಧದ್ರವ್ಯವನ್ನು ಲೇಪಿಸಿಕೊಂಡಿರುವ ಸಮಾಜದಲ್ಲಿ ಸದಾ ಚಿಗುರುತ್ತಲೇ ಇರುವ ಅಂಬೇಡ್ಕರ್ ವಿಚಾರಧಾರೆಯನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಹಾಗಾಗಿ ಒಮ್ಮೆ ಹೊಗಳಬೇಕು, ಹೊಗಳಿ ದೇವರಾಗಿಸಬೇಕು. ಇಲ್ಲವೇ ಆಗಾಗ ತೆಗಳಿ ಚಿಗುರನ್ನು ಚಿವುಟುತ್ತಿರಬೇಕು. ಈ ಎರಡೂ ಕೆಲಸವನ್ನು ಪ್ರಭುತ್ವ ಈಗಾಗಲೇ ಅಂಬೇಡ್ಕರರ ವಿಷಯದಲ್ಲಿ ಮಾಡಿದೆ, ಮಾಡುತ್ತಿದೆ. ಎರಡನೆಯದರ ಭಾಗವಾಗಿ ಮಲ್ಲಿಕಾರ್ಜುನ ಗೌಡ ತನ್ನ ಕೆಲಸವನ್ನು ಮುಂದುವರೆಸಿದ್ದಾರೆ. ಮೊದಲನೆಯದ್ದರ ಭಾಗವಾಗಿ ಪ್ರಭುತ್ವ ’ಪಂಚತೀರ್ಥ’ವನ್ನಾಗಿಸುತ್ತಿದೆ. ನಿಜವಾದ ಅಂಬೇಡ್ಕರ್ ಅನುಯಾಯಿಗಳ ಮುಂದಿರುವ ಆಯ್ಕೆ ಇವೆರಡರಲ್ಲಿ ಒಂದಾದರೆ ಅದು ಅಂಬೇಡ್ಕರ್ ಅವರಿಗೆ ಬಗೆದ ದ್ರೋಹವಾಗುತ್ತದೆ. ಹಾಗೆಂದರೆ ಮೂರನೆಯದೊಂದಿದೆಯೇ? ಎಂದು ಪ್ರಶ್ನಿಸಿದರೆ ಮೂರನೆಯದ್ದೋ.. ನಾಲ್ಕನೆಯದ್ದೋ.. ಐದನೆಯದ್ದೋ.. ಬನ್ನಿ ಜಾತಿವಿನಾಶದೆಡೆಗೆ ಹಲವು ಪ್ರಯೋಗ ಮಾಡುತ್ತಾ ಅಂಬೇಡ್ಕರರ ರಥವನ್ನು ಮುಂದೆಳೆಯೋಣ ಎಂದು ಹೇಳುತ್ತೇನೆ.


ಇದನ್ನೂ ಓದಿ: ಕೋಮುವಾದಿಗಳು ಆಕ್ಟೀವ್ ಆಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ: ಜಸ್ಟೀಸ್ ದಾಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...