ಮಹಾರಾಷ್ಟ್ರ ಸರ್ಕಾರ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಒಪ್ಪಿರುವ ಹಿನ್ನೆಲೆ, ಮರಾಠ ಮೀಸಲಾತಿ ಹೋರಾಟದ ನಾಯಕ ಮನೋಜ್ ಜಾರಂಗೆ ಪಾಟೀಲ್ ಇಂದು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಜಾರಂಗೆಯನ್ನು ಭೇಟಿ ಮಾಡಿದ್ದಾರೆ.
#WATCH | Maharashtra CM Eknath Shinde and Maratha quota activist Mahesh Jarange Patil together garland the statue of Chhatrapati Shivaji Maharaj in Navi Mumbai
Patil is ending his fast today after the state government accepted the demands. pic.twitter.com/AJJhDBGsWF
— ANI (@ANI) January 27, 2024
ಮರಾಠ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಒತ್ತಾಯಿಸಿ ಮನೋಜ್ ಜಾರಂಗೆ ನಿನ್ನೆಯಿಂದ ಮುಂಬೈನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
#WATCH | Navi Mumbai: Amid a huge crowd of supporters, Maratha reservation activist Manoj Jarange Patil ends his fast in the presence of Maharashtra CM Eknath Shinde, after the state government accepted all demands. pic.twitter.com/NBuMRawZDb
— ANI (@ANI) January 27, 2024
ಎಲ್ಲಾ ಮರಾಠರಿಗೆ ‘ಕುಂಬಿ’ ಪ್ರಮಾಣಪತ್ರ, ಶಿಶುವಿಹಾರದಿಂದ ಸ್ನಾತಕೋತ್ತರ ಹಂತದವರೆಗೆ ಉಚಿತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಗಳಲ್ಲಿ ಮರಾಠರಿಗೆ ಸೀಟುಗಳನ್ನು ಮೀಸಲಿಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಜಾರಂಗೆ ಸರ್ಕಾರದ ಮುಂದಿಟ್ಟಿದ್ದರು.
ಇಲ್ಲಿಯವರೆಗೆ 37 ಲಕ್ಷ ಜನರಿಗೆ ಕುಂಬಿ ಪ್ರಮಾಣಪತ್ರಗಳನ್ನು ನೀಡಲಾಗಿದ್ದು, ಇದನ್ನು 50 ಲಕ್ಷಕ್ಕೆ ಏರಿಸಬೇಕು ಎಂದು ಜಾರಂಗೆ ಆಗ್ರಹಿಸಿದ್ದರು. ಕುಂಬಿ ಜಾತಿ ಮಹಾರಾಷ್ಟ್ರದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಎಂದು ಪರಿಗಣಿಸಲಾಗಿದೆ.
40 ವರ್ಷ ವಯಸ್ಸಿನ ಮನೋಜ್ ಜಾರಂಗೆ, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬೈನ ಆಜಾದ್ ಮೈದಾನಕ್ಕೆ ಆಗಮಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಬೆದರಿಕೆ ಹಾಕಿದ್ದರು. ನಾವು ಏನೆಂದು ತೋರಿಸುತ್ತೇವೆ ಎಂದಿದ್ದರು. ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಇಬ್ಬರು ಸಚಿವರು ಮನೋಜ್ ಜಾರಂಗೆಯನ್ನು ಭೇಟಿ ಮಾಡಿದ್ದು, ಅವರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮ ಹೋರಾಟ ಯಶಸ್ವಿಗೊಂಡಿರುವ ಹಿನ್ನೆಲೆ ಮನೋಜ್ ಜಾರಂಗೆ ನೇತೃತ್ವದಲ್ಲಿ ಮರಾಠ ಸಮುದಾಯದ ಜನರು ಇಂದು ವಾಶಿಯಲ್ಲಿ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ಮಾಡಲಿದ್ದಾರೆ ಎನ್ನಲಾಗಿದೆ.
ಮರಾಠ ಸಮುದಾಯದ ಮೀಸಲಾತಿ ಹೋರಾಟ ಸರ್ಕಾರ ಮತ್ತು ಆ ಸಮುದಾಯದ ನಡುವೆ ದೊಡ್ಡ ಬಿಕ್ಕಟ್ಟಾಗಿ ಮಾರ್ಪಟ್ಟಿತ್ತು. ಮಹಾರಾಷ್ಟ್ರದ ಪ್ರಬಲ ಸಮುದಾಯದ ಹೋರಾಟ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಸಮುದಾಯ ಬಿಜೆಪಿ ಮತ್ತು ಶಿವಸೇನೆ ಸಮ್ಮಿಶ್ರ ಸರ್ಕಾರದ ವಿರುದ್ದ ತಿರುಗಿ ಬೀಳುವುದರಿಂದ ತಪ್ಪಿಸಲು ಬೇಡಿಕೆಗಳಿಗೆ ಒಪ್ಪಿಕೊಂಡಿದೆ ಎಂದು ಹೇಳಲಾಗ್ತಿದೆ.
ಮೇ 5, 2021ರಂದು, ಸುಪ್ರೀಂ ಕೋರ್ಟ್ ಮರಾಠಾ ಸಮುದಾಯಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಮರಾಠ ಮೀಸಲಾತಿಯನ್ನು ನೀಡುವಾಗ 50 ಪ್ರತಿಶತ ಮೀಸಲಾತಿ ನಿಯಮ ಉಲ್ಲಂಘಿಸಲು ಯಾವುದೇ ಮಾನ್ಯವಾದ ಕಾರಣವಿಲ್ಲ ಎಂದು ಕೋರ್ಟ್ ಹೇಳಿತ್ತು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಆವರಣದ ವಿಗ್ರಹ ತುಂಡುಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮುಸ್ಲಿಂ ಅರ್ಜಿದಾರರು