ಬಲಪಂಥೀಯವಾದವನ್ನು ವಿರೋಧಿಸುವ ಭರದಲ್ಲಿ ಒಮ್ಮೊಮ್ಮೆ ನಾವು ಕುರುಡಾಗುವುದುಂಟು. ಮೋದಿ ಮಾಡಿದ್ದೆವೂ ತಪ್ಪು, ಆತನ ಕುರಿತು ಏನಾದರು ಸಿಕ್ಕರೆ ಸಾಕು ತಮಾಷೆ ಮಾಡಲು ಕಾಯುತ್ತಿದ್ದ ನಮ್ಮಂಥ ಯುವಕರಿಗೆ ಗೌರಿ ಮೇಡಂ ನಮ್ಮ ವಿರೋಧ ಏನಿದ್ದರೂ ಸೈದ್ಧಾಂತಿಕವಾದದ್ದು ಎನ್ನುವ ಪಾಠ ಕಲಿಸಿದ್ದರು! ’ಬೂಸಿ ಬಸ್ಯಾ ಮೋದಿ’ ಎನ್ನುವ ಕಾಲಂಅನ್ನು 50 ವಾರದ ಗಡಿಯವರೆಗೂ ಪ್ರಕಟಿಸಿದ್ದ ಗೌರಿ ಮೇಡಂ, ನರೇಂದ್ರ ಮೋದಿ ಒಮ್ಮೆ ಶ್ರೀಲಂಕಾ ಪ್ರವಾಸದಲ್ಲಿ ಇಂಗ್ಲಿಷ್ನಲ್ಲಿ ಮಾತನಾಡುತ್ತಾ ಮಾಡಿದ ಯಡವಟ್ಟಿನ ಭಾಷಣದ ತುಣುಕು ಹಿಡಿದುಕೊಂಡು ನಾವೆಲ್ಲ ತಮಾಷೆ ಮಾಡುವಾಗ, “ಭಾಷೆ ಬರಲ್ಲ ಅನ್ನುವ ಕಾರಣಕ್ಕೆ ಹಾಗೆಲ್ಲ ಆಡಿಕೊಳ್ಳಬಾರದು ಮರಿ” ಎಂದು ಎಚ್ಚರಿಸಿದ್ದರು. ಅಲ್ಲದೆ ಅವರು ಈ ಕುರಿತ ತಮಾಷೆಯನ್ನು ತಮ್ಮ ಫೇಸ್ಬುಕ್ ವಾಲ್ ಹಾಗೂ ಅಂಕಣದಲ್ಲಿಯೂ ದಾಖಲಿಸಿ ಗಟ್ಟಿದನಿಯಲ್ಲಿಯೇ ವಿರೋಧಿಸಿದ್ದರು. “ತಾವು ಬೆಳೆದಿರುವ ವಾತಾವರಣ ಮತ್ತು ಅವಕಾಶಗಳ ಕಾರಣಕ್ಕಾಗಿ ವ್ಯಕ್ತಿಯ ಭಾಷೆಯು ವಿಕಾಸವಾಗುತ್ತದೆ. ನಾನು ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಕಾಗುಣಿತ ತಪ್ಪುಗಳನ್ನು ಮಾಡುತ್ತಿದ್ದೆ. ಇಂದಿಗೂ ನನಗೆ ಕನ್ನಡ ಇಂಗ್ಲಿಷ್ನಷ್ಟು ಸುಲಭವಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು.
ಹೀಗೆ ಹೇಳುತ್ತಾ ಅವರು ಬಿಸಿ ರಕ್ತದ ಯುವಜನರಿಗೆ ಸೈದ್ಧಾಂತಿಕವಾಗಿ ಇರಬೇಕಾದ ಸ್ಪಷ್ಟತೆಯ ಬಗ್ಗೆ ತಿಳಿಹೇಳಿದ್ದರು. ಅಲ್ಲದೇ ತಮ್ಮದೇ ಉದಾಹರಣೆಯನ್ನು ನೀಡುತ್ತಾ ತಮಗೆ ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದು ಧೈರ್ಯವಾಗಿಯೇ ದಾಖಲಿಸುತ್ತಿದ್ದರು. ರೋಹಿತ್ ವೇಮುಲಾನ ಸಾಂಸ್ಥಿಕ ಹತ್ಯೆಯ ಘಟನೆಗೆ ಸಂಬಂಧಿಸಿದಂತೆ ಗೌರಿ ಮೇಡಂ ದಲಿತ ಯುವ ಹೋರಾಟಗಾರರನ್ನು ಒಂದು ಕಡೆ ಸೇರಿಸಿ ಸಭೆ ಕರೆದಿದ್ದರು. ಸಭೆಯಲ್ಲಿ ಮುಂದಿನ ನಮ್ಮ ಹೋರಾಟದ ಕುರಿತು ಒಂದು ನೋಟ್ ಬರೆಯಬೇಕು ಎಂದು ತೀರ್ಮಾನವಾದಾಗ ಗೌರಿ ಮೇಡಂ ಬರಿಯಬೇಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ಆಗ ಗೌರಿ ಮೇಡಂ “ಹೇಯ್ ಇಲ್ಲಪ್ಪ ಅದೆಲ್ಲ ನನಿಗೆ ಬರಿಯೋಕೆ ಬರಲ್ಲ. ನನ್ನ ಕೈಲಿ ಆಗಲ್ಲ, ಸರೋವರ್ ಅಥವಾ ಹುಲಿಕುಂಟೆ ಮೂರ್ತಿ ಬರೆಯಲಿ” ಎಂದರು.
ಸಂಘಟನೆ ಹೋರಾಟಗಳಿಗೆ ಹೊಸಬನಾಗಿದ್ದ ನನಗೂ ಏನು ಬರೆಯುವುದೆಂದು ತಿಳಿದಿರಲಿಲ್ಲ. ಒಳಗೆ ಪುಕಪುಕ ಎನ್ನುತ್ತಿದ್ದರೂ ಬರಿಯೋಕೆ ಬರಲ್ಲ ಎನ್ನುವ ಧೈರ್ಯ ನಾನು ಮಾಡಲಿಲ್ಲ. ಅಷ್ಟರಲ್ಲಿ ಹುಲಿಕುಂಟೆ ಮೂರ್ತಿ ಅವರು ಬರೆಯಲು ಒಪ್ಪಿಕೊಂಡಾಗ ಸಮಾಧಾನವಾಯಿತು. ಆದರೆ ಗೌರಿ ಮೇಡಂನಿಂದಾಗಿ ಅಂದು ನಾನು ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದು ಹೇಳುವ ಧೈರ್ಯವನ್ನು ತೋರಿಸಬೇಕು ಎನ್ನುವುದನ್ನು ಕಲಿತುಕೊಂಡೆ. ಅಷ್ಟೇ ಅಲ್ಲದೆ ಯುವ ಬರಹಗಾರರಿಗೆ ಅವಕಾಶ ನೀಡುವುದು ಅವರ ಉದ್ದೇಶವಾಗಿತ್ತು ಎನ್ನುವುದನ್ನೂ.
ಇನ್ನು ಅವರು ತಮ್ಮ ಮೇಲೆ ಬರುವ ವಿಮರ್ಶೆಯನ್ನು ಬಹಳ ಸ್ಪೋರ್ಟಿವ್ ಆಗಿ ತಗೆದುಕೊಳ್ಳುತ್ತಿದ್ದರು. ಪತ್ರಿಕೆಯಲ್ಲಿ ತಪ್ಪಾದಾಗ ’ತಪ್ಪಾಯಿತು ತಿದ್ಕೋತೀವಿ’ ಎನ್ನುವ ತಲೆಬರಹದಲ್ಲಿಯೇ ಪ್ರಕಟಣೆ ಮಾಡುತ್ತಿದ್ದದ್ದು ನಮಗೆಲ್ಲಾ ತಿಳಿದೇ ಇದೆ. ಹೆಚ್.ಎಲ್.ಕೆ ಅವರ ನೆನಪಿನಲ್ಲಿ ಫೇಸ್ಬುಕ್ನಲ್ಲಿ ಅವರ ಕುರಿತು ಟಿಪ್ಪಣಿ ಬರೆದು ಹಂಚಿಕೊಂಡಿದ್ದೆ. ಅದರಲ್ಲಿ ನಾನು “ಗೆಳೆಯರು ಗೌರಿ ಲಂಕೇಶ್ ಪತ್ರಿಕೆಯನ್ನು ನಿಯತವಾಗಿ ಓದಬೇಕು ಎನ್ನುವ ಸಲುವಾಗಿ ಪತ್ರಿಕೆ ಕೊಂಡುಕೊಂಡು ಓದಲು ಪ್ರಯತ್ನಿಸುತ್ತಿದ್ದೆ. ಆದರೆ ಶಿವಸುಂದರ್, ಗೌರಿ ಲಂಕೇಶರ ಲೇಖನಗಳು ತಲೆಬುಡ ಅರ್ಥವಾಗುತ್ತಿರಲಿಲ್ಲ. ವ್ಯಂಗ್ಯ ಮತ್ತು ಆಡುಭಾಷೆಯಲ್ಲಿ ನಮಗೆ ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ಕಾರಣವಾಗಿದ್ದು ಎಚ್.ಎಲ್.ಕೆ ಅವರಿಂದ” ಎಂದು ಬರೆದಿದ್ದೆ. ಅದನ್ನು ಓದಿದ ಗೌರಿ ಮೇಡಂ ಶಿವಸುಂದರ್ ಅವರ ಫೋನಿನಿಂದ ಕಾಲ್ ಮಾಡಿಸಿ, “ಏನೋ ನಾನು ಬರಿಯೋದು ತಲೆಬುಡ ಅರ್ಥವಾಗಲ್ವ, ನನ್ನ ಕೈಗೆ ಸಿಗು ನಿನ್ನ ಕೈಕಾಲು ಮುರೀತೀನಿ ಮಗನೆ” ಎಂದು ಹೇಳಿ ನಕ್ಕರು. ಓದು ನನಗೆ ಹೊಸದಾಗಿದ್ದರಿಂದ ಹಾಗೆ ಅನ್ನಿಸಿತ್ತೇ ಹೊರತು ಗೌರಿ ಮೇಡಂ ಕೂಡ ಎಲ್ಲರಿಗೂ ಅರ್ಥವಾಗುವಂತೆ ಅತ್ಯಂತ ಸರಳವಾಗಿ ಬರೆಯುತ್ತಿದ್ದರು ಮತ್ತು ಅದನ್ನು ಅವರು ಭೇಟಿಯಾದಾಗ ಹೇಳಿದೆ ಕೂಡ. ಹೀಗೆ ಅವರು ತಮಗೆ ಬರುತ್ತಿದ್ದ ವಿಮರ್ಶೆಯನ್ನು ಮುಕ್ತವಾಗಿ ತೆಗೆದುಕೊಳ್ಳುತ್ತಿದ್ದರು ಮತ್ತು ಅದರ ಕುರಿತು ಗಂಭೀರವಾಗಿ ಯೋಚಿಸುತ್ತಿದ್ದರೂ ಕೂಡ.
ದಾವಣಗೆರೆಯ ಕಾರ್ಯಕ್ರಮವೊಂದರಲ್ಲಿ ಯೋಗೇಶ್ ಮಾಸ್ಟರ್ ಅವರ ಮೇಲೆ ಕೆಲ ಕಿಡಿಗೇಡಿಗಳು ಮಸಿ ಎರಚಿ ದಾಳಿ ಮಾಡಲು ಮುಂದಾಗಿದ್ದರು. ಅವರನ್ನು ಬಂಧಿಸಿದ ನಂತರ ಗೌರಿ ಮೇಡಂ ಆ ದಾಳಿಕೋರ ಹುಡುಗರನ್ನು ನೋಡಿಕೊಂಡು ಹೊರಗೆ ಬಂದಾಗ “ಛೇ ಪಾಪ ಎಲ್ಲಾ ಎಳೆ ಮಕ್ಕಳು. ಬಡವರು. ಆಟೋ ಓಡಿಸಿಕೊಂಡು ಜೀವನ ಮಾಡುವ ಹುಡುಗರು ಇದ್ದಾರೆ. ಕೋಮುವಾದಿ ರಾಜಕಾರಣಿಗಳು ಧರ್ಮದ ಅಮಲು ತುಂಬಿಸಿ ಈ ಹುಡುಗರ ಭವಿಷ್ಯ ಹಾಳು ಮಾಡುತ್ತಿದ್ದಾರಲ್ಲ ಎಂದು ಮರುಕಪಟ್ಟರು.
ಕಾರ್ಯಕ್ರಮ ಮುಗಿಸಿಕೊಂಡು ದಾವಣಗೆರೆಯಿಂದ ಬೆಂಗಳೂರಿಗೆ ಕಾರಿನಲ್ಲಿ ವಾಪಸ್ಸಾಗುವಾಗ ಟಿ.ಕೆ.ದಯಾನಂದ್ ಅವರು ಮಾಡಿದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಶುರುವಾಯಿತು. ಯೋಗೇಶ್ ಮಾಸ್ಟರ್ ಅವರ ಫೋಟೋದೊಂದಿಗೆ ಬಲಪಂಥೀಯರಿಗೆ ಕೌಂಟರ್ ಕೊಡುವ ಪೋಸ್ಟರ್ ಆಗಿತ್ತು ಮತ್ತು ತುಂಬಾ ತಮಾಷೆಯಾಗಿಯೂ ಇತ್ತು. ಇದನ್ನು ನೋಡಿ ಗೌರಿ ಮೇಡಂ ಜೋರಾಗಿ ನಗುತ್ತಲೇ ಇದ್ದರು. ನಗುತ್ತಾ ನಗುತ್ತಾ ವಾಂತಿಯೇ ಮಾಡಿಕೊಂಡರು! (ಸ್ವಲ್ಪ ಆರೋಗ್ಯವೂ ಕೆಟ್ಟಿತ್ತು). ಆ ದಯಂಗೆ ಕಾಲ್ ಮಾಡಿ ಅವನ ಪೋಸ್ಟರ್ ಇಂದ ನಕ್ಕು ನಾನು ವಾಂತಿ ಮಾಡಿಕೊಂಡೆ ಅಂತ ಹೇಳಿ, ನಾನು ಚನ್ನಾಗಿ ಬೈದೆ ಅಂತ ಅವನಿಗೆ ಹೇಳು ಎಂದರು. ನಂತರ “ಅಲ್ಲೋ ಸರೋವರ ನೀನು ಮತ್ತು ದಯಾ ಊರೋರಿಂದೆಲ್ಲಾ ಫೋಟೋ ಹಾಕಿ ಪೋಸ್ಟರ್ ಮಾಡ್ತೀರ ನಂದು ಒಂದಾದ್ರೂ ಮಾಡಿದ್ದೀರೇನೋ?” ಎಂದು ಕೇಳಿದರು. ನಾನು ಆಗ “ಓಕೆ ಬಿಡಿ ಮೇಡಂ ನಿಮ್ಮದೂ ಒಂದು ಮಾಡ್ತೀನಿ” ಎಂದಿದ್ದೆ.
ಆದರೆ ಅವರ ಪೋಸ್ಟರ್ ಮಾಡಲು ಸಾಧ್ಯವಾಗಿದ್ದು ಯಾವಾಗ?!! ಸೆಪ್ಟೆಂಬರ್ 5 ರಂದು! ಗೌರಿ ಮೇಡಂ ಹತ್ಯೆಯಾದ ಮರು ದಿನ ಟೌನ್ಹಾಲ್ ಮುಂದೆ ಜನರು ತಮ್ಮ ಕೈಗಳಲ್ಲಿ ಹಿಡಿದಿದ್ದ ಪೋಸ್ಟರ್ಗಳು ಬ್ಯಾನರ್ಗಳು ಬಹುತೇಕ ಎಲ್ಲವನ್ನೂ ನಾನು ಅಂದು ಡಿಸೈನ್ ಮಾಡಬೇಕಾಗಿ ಬಂತು. ಆವತ್ತು ನನ್ನದೂ ಪೋಸ್ಟರ್ ಮಾಡ್ರೋ ಎಂದು ಕೇಳಿದ್ರಲ್ಲ ನೋಡಿ ಇಲ್ಲಿ ಎಂದು ಮನಸ್ಸಿನಲ್ಲೇ ಹೇಳಿಕೊಂಡೆನು. ಅದೇ ಪ್ರತಿಭಟನೆಯಲ್ಲಿ ಗೌರಿ ಮೇಡಂ ಟೌನ್ಹಾಲ್ನ ಮೆಟ್ಟಿಲಿನ ಮೇಲೆ ಮುಂದಿನ ಸಾಲಿನಲ್ಲಿ ಕೂತಿರುತ್ತಾರೆ ಬಿಡು ಎಂದು ನನ್ನಂತೆಯೇ ನೂರಾರು ಜನಕ್ಕೆ ಅಂದು ಅನಿಸಿರಲು ಸಾಧ್ಯ. ಇಂದಿಗೂ ಅವರು ನಮ್ಮ ಎಲ್ಲಾ ಪ್ರತಿಭಟನೆಯಲ್ಲಿ ಮುಂದಿನ ಸಾಲಿನಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಅದೆಲ್ಲೋ ಮೂಲೆಯಲ್ಲಿ ಕುರ್ಚಿಯ ಮೇಲೆ ಕೂತು ಎಲ್ಲವನ್ನೂ ಆಲಿಸುತ್ತಿರುತ್ತಾರೆ.
- ಸರೋವರ್ ಬೆಂಕಿಕೆರೆ