ಚೆನ್ನೈನಲ್ಲಿರುವ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮುಖ್ಯ ಕಚೇರಿಯನ್ನು ವಿರೋಧಿಸಿ ಮೇ 12ರಂದು ಪ್ರತಿಭಟನೆ ಸಮಾವೇಶ ನಡೆಸಲು ಕರೆ ನೀಡಲಾಗಿದೆ.
“ಹಿಂದಿ ಹೇರಿಕೆ ಕುರಿತು ನಾವು ಎಷ್ಟೇ ಮಾತನಾಡಿದರೂ, ಒಂದಲ್ಲ ಒಂದು ಪಿತೂರಿಯ ಮೂಲಕ ಹಿಂದಿ ಹೇರಿಕೆಯನ್ನು ಮುಂದುವರಿಸಿದ್ದು, ಚೆನ್ನೈನಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಗಿದೆ” ಎಂದು ‘ನಾವು ದ್ರಾವಿಡ ಕನ್ನಡಿಗರು’ ಚಳವಳಿಯ ಮುಖಂಡರಾದ ಅಭಿಗೌಡ ಹನಕೆರೆ ತಿಳಿಸಿದ್ದಾರೆ.
“ಪ್ರತಿಕ್ರಿಯಾತ್ಮಕ ಹೋರಾಟ ಮಾಡಿದ್ದು ಸಾಕು ರಚನಾತ್ಮಕ ಹೋರಾಟ ಮಾಡೋದು ಬೇಕು ಅನ್ನುವ ಕಾಲದಲ್ಲಿ ಬಂದು ನಿಂತಿದ್ದೇವೆ. ಈ ಹಿಂದಿ ಹೇರಿಕೆ ಎಂಬ ಪಿಡುಗನ್ನು ಶಾಶ್ವತವಾಗಿ ನಿಲ್ಲಿಸೋಣ. ಇದು ಸಾಧ್ಯವಾಗಬೇಕೆಂದರೆ ಸಂವಿಧಾನದಲ್ಲಿ ಆರ್ಟಿಕಲ್ 343 ರಿಂದ 351ರವರೆಗೆ ತಿದ್ದುಪಡಿ ಮಾಡಿ ಹಿಂದಿ ಮತ್ತು ಸಂಸ್ಕೃತಕ್ಕೆ ಇರುವ ವಿಶೇಷ ಸ್ಥಾನಮಾನ ತೆಗೆದುಹಾಕಬೇಕು. ನಮ್ಮ ಜನಪ್ರತಿನಿಧಿಗಳಿಗೆ ಒತ್ತಡ ಹೇರಿ ಈ ಕೆಲಸ ಮಾಡಿಸಬೇಕಿದೆ. ಚೆನ್ನೈನಲ್ಲಿ ಇರುವ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮುಖ್ಯ ಕಚೇರಿಯನ್ನು ಶಾಶ್ವತವಾಗಿ ಮುಚ್ಚಿ ಪ್ರತಿಭಟನೆ ಸಮಾವೇಶ ಮಾಡಲು ಎಲ್ಲರೂ ಚೆನ್ನೈಗೆ ಬರಬೇಕಿದೆ” ಎಂದು ಮನವಿ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
1918ರಲ್ಲಿ ಶುರುವಾದ ಈ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ 1964 ಮೇ 12ರವರೆಗೆ ಒಂದು ಖಾಸಗಿ ಸಂಸ್ಥೆಯಂತೆ ಕೆಲಸ ಮಾಡುತ್ತಿತ್ತು. 1964 ಜನವರಿ 25ರಂದು 24 ವರುಷದ ಚಿನ್ನಸ್ವಾಮಿ ಅವರು ತಮಿಳು ನಾಡಿನ ತಿರುಚಿಯಲ್ಲಿ ‘ಹಿಂದಿ, ಸಂಸ್ಕೃತ ಅಳಿಯಲಿ, ದ್ರಾವಿಡ ನುಡಿಗಳು ಉಳಿಯಲಿ’ ಎಂದು ಕೂಗುತ್ತಾ, ‘ಒಂದು ದೇಶ, ಒಂದೇ ಭಾಷೆ’ ಚರ್ಚೆಯನ್ನು ವಿರೋಧಿಸುತ್ತ ರೈಲ್ವೇ ಸ್ಟೇಷನ್ ಮುಂದೆ ಪೆಟ್ರೋಲ್ ಸುರಿದುಕೊಂಡು ಪ್ರಾಣ ತ್ಯಾಗ ಮಾಡಿದರು. ಆದರೆ ಒಕ್ಕೂಟ ಸರ್ಕಾರ ಸಂವಿಧಾನ ಮತ್ತು ಕಾನೂನು ಬದ್ಧವಾಗಿಯೆ ನಿಮ್ಮ ನೆಲದಲ್ಲಿಯೆ ನಿಮ್ಮ ದುಡ್ಡಿನಲ್ಲೇ ಹಿಂದಿ ಹೇರಿಕೆ ಮಾಡ್ತಿವಿ ಎಂದು ಹೊರಟಿತು. ಮೇ 12 1964 ರಿಂದ “National Importance Institute Of India” ಅಂತ Parliament Act ಮಾಡಿಕೊಂಡು ವರುಷಕ್ಕೆ ಅಂದಾಜು 500 ಕೋಟಿ ರೂ.ಗಳನ್ನು ಹಿಂದಿ ಹೇರಿಕೆಗೆ ಕೊಡುತ್ತಿದ್ದಾರೆ. ಒಕ್ಕೂಟ ಸರ್ಕಾರದ ದುಡ್ಡು ಎಂದರೆ ಅದರಲ್ಲಿ ದ್ರಾವಿಡ ಕನ್ನಡಿಗರ ದುಡ್ಡು, ದ್ರಾವಿಡ ತೆಲುಗಿನವರ ದುಡ್ಡು, ದ್ರಾವಿಡ ತಮಿಳಿನವರ ದುಡ್ಡು, ದ್ರಾವಿಡ ಮಲಯಾಳಂನವರ ದುಡ್ಡು ಕೂಡ ಇದೆ” ಎನ್ನುತ್ತಾರೆ ಅಭಿಗೌಡ.
ಇದನ್ನೂ ಓದಿರಿ: ಹಿಂದಿ ರಾಷ್ಟ್ರೀಯ ಭಾಷೆ ಎಂದ ಅಜಯ್ ದೇವಗನ್ಗೆ ಕನ್ನಡ ಕಲಾವಿದರ ಖಡಕ್ ಪ್ರತಿಕ್ರಿಯೆ
“ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಮುಖ್ಯ ಕಚೇರಿ ಚೆನ್ನೈ ನಗರದಲ್ಲಿ ಇದೆ. ಇದೇ ಕಾರಣಕ್ಕೆ ದ್ರಾವಿಡ ಕನ್ನಡಿಗರು, ದ್ರಾವಿಡ ತೆಲುಗಿನವರು, ದ್ರಾವಿಡ ತಮಿಳಿನವರು, ದ್ರಾವಿಡ ಮಲಯಾಳಂನವರು ಎಲ್ಲರೂ ಒಗ್ಗೂಡಿ ಚೆನ್ನೈನಲ್ಲಿ ಈ ಪ್ರತಿಭಟನೆ ಮಾಡಬೇಕಿದೆ” ಎಂದು ಕೋರಿದ್ದಾರೆ.
ಅಬಿಗೌಡರ ಈ ಪ್ರತಿಭಟನೆಯನ್ನು ಕನ್ನಡಿಗರು ಮಾತ್ರವಲ್ಲದೆ, ತಮಿಳರು, ತೆಲುಗರು ಮತ್ತು ಮಲಯಾಳಿಗಳೆಲ್ಲರೂ ಒಕ್ಕೊರಲಿನಿಂದ ಬೆಂಬಲಿಸಬೇಕು.