ಕಲ್ಯಾಣ ಕರ್ನಾಟಕ ಭಾಗದ 11 ಜಿಲ್ಲೆಗಳ ಅನುದಾನಿತ ಶಾಲೆಗಳಿಗೆ ಸರ್ಕಾರವು ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ನೀಡುತ್ತಿದ್ದ ಹಾಲಿನ ಪೂರೈಕೆಯನ್ನು ಕಳೆದ ಮೂರು ತಿಂಗಳುಗಳಿಂದ ನಿಲ್ಲಿಸಿದೆ. ಇದರ ಪರಿಣಾಮವಾಗಿ ಶಾಲಾ ಹಾಜರಾತಿಯಲ್ಲಿ ಕುಸಿತ ಕಂಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕರ್ನಾಟಕ ಹಾಲು ಒಕ್ಕೂಟವು (ಕೆಎಂಎಫ್) ಹಾಲಿನ ಪುಡಿಯನ್ನು ಹೆಚ್ಚಾಗಿ ನಂದಿನಿ ಬ್ರಾಂಡ್ನ ಸಿಹಿತಿಂಡಿ, ಐಸ್ಕ್ರೀಂ ಮತ್ತು ಇತರ ಪದಾರ್ಥಗಳ ತಯಾರಿಕೆಗೆ ಬಳಸುತ್ತಿರುವುದರಿಂದ ಹಾಲಿನ ಕೊರತೆ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೂರು ತಿಂಗಳಾದರೂ ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಆನಂತರ ಕೆಲ ಅಧಿಕಾರಿಗಳು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದ ನಂತರ ಚೀಫ್ ಸೆಕ್ರೆಟರಿ ವಂದಿತಾ ಶರ್ಮಾ, “ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಂತೆ ಹಾಲಿನ ಪೂರೈಕೆ ಮಾಡಬೇಕೆಂದು” ಕೆಎಂಎಫ್ ಅಧಿಕಾರಿಗಳೀಗೆ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ಕಾರಣಗಳಿಂದಾಗಿ ಹಾಲಿನ ಖರೀದಿಯು ಕುಸಿತ ಕಂಡಿದೆ. ಪ್ರತಿ ದಿನ 15-18 ಲಕ್ಷ ಲೀಟರ್ ಹಾಲು ಖರೀದಿ ಮಾಡಬೇಕು. ಆದರೆ ಅದು 13-14 ಲಕ್ಷ ಲೀಟರ್ಗಳಿಗೆ ಕುಸಿದಿದೆ. ಹೆಚ್ಚಿನ ಹಾಲು ಉತ್ಪಾದನೆಯಾಗುವ ದಕ್ಷಿಣ ಕರ್ನಾಟಕದಲ್ಲಿಯೂ ಕುಸಿತ ಕಂಡಿದೆ ಎಂದು ಕೆಎಂಎಫ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಕೆಎಂಎಫ್ ಮುಳುಗಿಸುವ ಹುನ್ನಾರ: ಅಮುಲ್ ಆಗಮನಕ್ಕೆ ಕಾಂಗ್ರೆಸ್, ಜೆಡಿಎಸ್ ವಿರೋಧ