ಅಸಮರ್ಪಕ ನಾಮಪತ್ರ ಸ್ವೀಕಾರವು ಪ್ರತಿಸ್ಪರ್ಧಿಯ ಗೆಲುವಿಗೆ ಹೇಗೆ ಅಡ್ಡಿಯಾಗುತ್ತದೆ ಎಂಬುವುದನ್ನು ವಿವರಿಸದ ಚುನಾವಣಾ ತಕರಾರು ಅರ್ಜಿಯನ್ನು ತಿರಸ್ಕರಿಸುವಂತೆ ಕಾಂಗ್ರೆಸ್ ಶಾಸಕ ಎನ್. ಹ್ಯಾರಿಸ್ ಪರ ವಕೀಲರು ಕರ್ನಾಟಕ ಹೈಕೋರ್ಟ್ಗೆ ಗುರುವಾರ ಮನವಿ ಮಾಡಿದ್ದಾರೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಚುನಾವಣೆ ವೇಳೆ ಸಲ್ಲಿಸಲಾದ ಫಾರಂ ನಂ. 26ರಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹ್ಯಾರಿಸ್ ತಮ್ಮ ಆಸ್ತಿ ವಿವರಗಳನ್ನು ಸರಿಯಾಗಿ ಘೋಷಿಸಿಲ್ಲ. ಹೀಗಾಗಿ, ಅವರನ್ನು ಅನರ್ಹಗೊಳಿಸಿ ತಮ್ಮನ್ನು ವಿಜೇತ ಎಂದು ಘೋಷಿಸಬೇಕು ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ ಶಿವಕುಮಾರ್ ಸಲ್ಲಿಸಿರುವ ಚುನಾವಣಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಪ್ರತಿವಾದಿ ಹ್ಯಾರಿಸ್ ಪರ ವಕೀಲರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಸಮರ್ಪಕ ನಾಮಪತ್ರ ಸ್ವೀಕರಿಸಿದ ಕಾರಣ ಅದು ಪ್ರತಿಸ್ಪರ್ಧಿಯ ಗೆಲುವಿಗೆ ಹೇಗೆ ಅಡ್ಡಿ ಉಂಟು ಮಾಡಿದೆ ಎಂಬ ಆರೋಪವನ್ನು ಸಾಬೀತುಪಡಿಸಬೇಕು ಮತ್ತು ಅಂತಹ ಕ್ರಮ ಸೋಲಿಗೆ ಹೇಗೆ ಕಾರಣವಾಯಿತು ಎಂಬ ನಿಖರ ವಿಚಾರವನ್ನು ಅರ್ಜಿದಾರರು ತಮ್ಮ ದಾವೆಯಲ್ಲಿ ಉಲ್ಲೇಖಿಸಬೇಕು. ಆದರೆ, ಕೆ. ಶಿವಕುಮಾರ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯಲ್ಲಿ ಇಂತಹ ಯಾವುದೇ ಅಂಶಗಳು ಇಲ್ಲದ ಕಾರಣ ಈ ನಿರರ್ಥಕ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಹ್ಯಾರಿಸ್ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ಅರ್ಜಿಯಲ್ಲಿ ವಿವರಿಸಿರುವ ಅಂಶಗಳ ಆಧಾರದಲ್ಲಿ ಹ್ಯಾರಿಸ್ ಅವರ ವಿರುದ್ಧದ ಆರೋಪಗಳ ವಿಚಾರಣೆಗಾಗಿ ಪ್ರತಿವಾದಿಗಳನ್ನು ಅರೆ ಅಪರಾಧಿಕ ನ್ಯಾಯಿಕ ಪ್ರಕ್ರಿಯೆಗೆ ಒಳಪಡಿಸಬಾರದು. ಈ ಹಂತದಲ್ಲಿಯೇ ಈ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ನ ಪೂರ್ವ ನಿದರ್ಶನದ ತೀರ್ಪೊಂದನ್ನು ಉಲ್ಲೇಖಿಸಿದರು.
ಶಿವಕುಮಾರ್ ಪರ ಹಾಜರಿದ್ದ ಹಿರಿಯ ವಕೀಲ ವಿವೇಕ ರೆಡ್ಡಿ ಅವರು ಇದಕ್ಕೆ ಪ್ರತಿಯಾಗಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವ ಸುಪ್ರೀಂ ಕೋರ್ಟ್ನ ಪೂರ್ವ ನಿದರ್ಶನದ ಮತ್ತೊಂದು ತೀರ್ಪು ಉಲ್ಲೇಖಿಸಿದರು. ಉಭಯ ಪಕ್ಷಕಾರರ ವಾದ–ಪ್ರತಿವಾದ ಆಲಿಸಿದ ಪೀಠವು ಸುಪ್ರೀಂ ಕೋರ್ಟ್ನ ಎರಡೂ ತೀರ್ಪುಗಳ ಪರಾಮರ್ಶೆ ನಡೆಸುವುದಾಗಿ ತಿಳಿಸಿ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿತು.
ಇದನ್ನೂ ಓದಿ: ಪಿ ಬಿ ವರಾಳೆ ಪ್ರಮಾಣ ವಚನ: ಸುಪ್ರೀಂನಲ್ಲಿ ಮೂರಕ್ಕೇರಿದ ದಲಿತ ಸಮುದಾಯದ ನ್ಯಾಯಮೂರ್ತಿಗಳ ಸಂಖ್ಯೆ