ಗುಜರಾತ್ ವಿಶ್ವವಿದ್ಯಾನಿಲಯದ ಹಾಸ್ಟೆಲ್ಗೆ ನುಗ್ಗಿದ ಗುಂಪೊಂದು ಹಾಸ್ಟೆಲ್ನಲ್ಲಿ ನಮಾಝ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದು, ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ ಎಂದು ಹಲವು ಭಾರಿ ಅಂತರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿದ್ದವು, ಹಲವು ರಾಷ್ಟ್ರಗಳು ಈ ಬಗ್ಗೆ ಧ್ವನಿಯನ್ನು ಎತ್ತಿದ್ದವು, ಇದೀಗ ವಿದೇಶಿ ವಿದ್ಯಾರ್ಥಿಗಳ ಮೇಲಿನ ದಾಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ.
ಹಾಸ್ಟೆಲ್ನಲ್ಲಿದ್ದ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಲಾಗಿದೆ. ಕ್ಯಾಂಪಸ್ನಲ್ಲಿ ಮಸೀದಿ ಇಲ್ಲ, ಆದ್ದರಿಂದ ರಂಜಾನ್ ಸಮಯದಲ್ಲಿ ರಾತ್ರಿ ಮಾಡಲಾಗುವ ತರಾವೀಹ್ ನಮಾಜ್ ಮಾಡಲು ಹಾಸ್ಟೆಲ್ನೊಳಗೆ ಸೇರಿದ್ದೆವು. ಸ್ವಲ್ಪ ಸಮಯದ ನಂತರ, ದೊಣ್ಣೆಗಳು ಮತ್ತು ಚಾಕುಗಳೊಂದಿಗೆ ಶಸ್ತ್ರಸಜ್ಜಿತವಾದ ಗುಂಪೊಂದು ಹಾಸ್ಟೆಲ್ಗೆ ನುಗ್ಗಿ ದಾಳಿ ಮಾಡಿ ಕೊಠಡಿಗಳನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ ಹಾಸ್ಟೆಲ್ನ ಸೆಕ್ಯುರಿಟಿ ಗಾರ್ಡ್ ಗುಂಪನ್ನು ತಡೆಯಲು ಪ್ರಯತ್ನಿಸಿದರೂ ವಿಫಲರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಗುಂಪಿನಲ್ಲಿದ್ದವರು ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಹಾಸ್ಟೆಲ್ನಲ್ಲಿ ನಮಾಝ್ ಮಾಡಲು ಯಾರು ಅನುಮತಿಸಿದರು ಎಂದು ಅವರು ಪ್ರಶ್ನಿಸಿದ್ದಾರೆ ಎಂದು ಆಫ್ಘಾನಿಸ್ತಾನದ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ. ಅವರು ಕೊಠಡಿಗೆ ನುಗ್ಗಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ಲ್ಯಾಪ್ಟಾಪ್ಗಳು, ಫೋನ್ಗಳನ್ನು ಒಡೆದು ಹಾಕಿದ್ದು, ಬೈಕ್ಗಳನ್ನು ಹಾನಿಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಗಾಯಗೊಂಡ ಐವರು ವಿದ್ಯಾರ್ಥಿಗಳಲ್ಲಿ ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ತುರ್ಕಮೆನಿಸ್ತಾನ್ನ ತಲಾ ಓರ್ವರು ಮತ್ತು ಆಫ್ರಿಕನ್ ದೇಶದ ಇಬ್ಬರು ಸೇರಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಘಟನೆ ನಡೆದು ಅರ್ಧ ಗಂಟೆಯ ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದು, ಈ ವೇಳೆ ಗುಂಪು ಅಲ್ಲಿಂದ ಪಲಾಯನ ಮಾಡಿತ್ತು. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹಾನಿಗೊಳಗಾದ ಬೈಕ್ಗಳು, ಒಡೆದ ಲ್ಯಾಪ್ಟಾಪ್ಗಳು ಮತ್ತು ಧ್ವಂಸಗೊಂಡ ಕೊಠಡಿಗಳು ಕಂಡು ಬಂದಿದೆ. ಕೆಲವು ದೃಶ್ಯಗಳಲ್ಲಿ, ಗುಂಪು ಹಾಸ್ಟೆಲ್ಗೆ ಕಲ್ಲು ಎಸೆಯುತ್ತಿರುವುದು, ವಿದ್ಯಾರ್ಥಿಗಳ ಮೇಲೆ ನಿಂದನೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಒಂದು ವೀಡಿಯೊದಲ್ಲಿ, ಗುಂಪಿನಲ್ಲಿದ್ದ ಯುವಕನೊಬ್ಬ ಸೆಕ್ಯುರಿಟಿ ಗಾರ್ಡ್ನಲ್ಲಿ “ಅವರು ಏಕೆ ನಮಾಜ್ ಮಾಡುತ್ತಿದ್ದಾರೆ, ಇದು ಸ್ಥಳವೇ?” ಎಂದು ಕೇಳುವುದು ಕೇಳಿಸುತ್ತದೆ. ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸುವುದು ಕಂಡು ಬಂದಿದೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾದ್ಯಮ ಬಳಕೆದಾರರು ಗುಂಪು ಹಿಂಸೆಯನ್ನು ಖಂಡಿಸಿದ್ದಾರೆ.
ಹೈದರಾಬಾದ್ ಸಂಸದ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಎಂತಹ ನಾಚಿಕೆಗೇಡಿನ ಸಂಗತಿ, ಮುಸ್ಲಿಮರು ಶಾಂತಿಯುತವಾಗಿ ಅವರ ಧರ್ಮವನ್ನು ಆಚರಿಸಿದಾಗ ಮಾತ್ರ ನಿಮ್ಮ ಭಕ್ತಿ ಮತ್ತು ಧಾರ್ಮಿಕ ಘೋಷಣೆಗಳು ಕೇಳಿಸುತ್ತದೆ. ಮುಸ್ಲಿಮರನ್ನು ಕಂಡ ಮಾತ್ರಕ್ಕೆ ನಿಮಗೆ ಯಾಕಿಷ್ಟು ಕೋಪ? ಇದು ಅಮಿತ್ ಶಾ ಮತ್ತು ಮೋದಿಯ ತವರು ರಾಜ್ಯವಾಗಿದೆ. ಅವರು ಈ ಬಗ್ಗೆ ಬಲವಾದ ಸಂದೇಶವನ್ನು ಕಳುಹಿಸಲು ಮಧ್ಯಪ್ರವೇಶಿಸುತ್ತಾರಾ? ಎಂದು ಅವರು ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗುಜರಾತ್ನ ಗೃಹ ಸಚಿವ ಹರ್ಷ ಸಾಂಘವಿ, ಈ ಬಗ್ಗೆ ಗುಜರಾತ್ನ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಮತ್ತು ನ್ಯಾಯಯುತ ತನಿಖೆಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಲೋಕಸಭೆ ಚುನಾವಣೆ: ಕಾಂಗ್ರೆಸ್ನ ಪಂಚ ಗ್ಯಾರೆಂಟಿ