ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರ ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಸಂಪೂರ್ಣ ಕಾರಣ ಎಂದು ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಧ್ವನಿ ಮತದಾನದ ಮೂಲಕ ಅವಿಶ್ವಾಸ ನಿರ್ಣಯವನ್ನು ಗೆದ್ದ ಗೆಹ್ಲೋಟ್, ಸಾಂಕ್ರಾಮಿಕ ರೋಗದ ಮಧ್ಯೆ ರಾಜ್ಯವು ಒಂದು ತಿಂಗಳ ಕಾಲ ಸಂಕಷ್ಟ ಅನುಭವಿಸಿದೆ ಎಂದು ಹೇಳಿದರು.
ಬಿಜೆಪಿಯ ಪಿತೂರಿ ರಾಜಸ್ಥಾನದಲ್ಲಿ ವಿಫಲವಾಗಿದೆ. ಕುತಂತ್ರದ ಮೂಲಕ ಸರ್ಕಾರ ಬೀಳಿಸಲು ಯತ್ನಿಸಿದವರಿಗೆ ತಕ್ಕ ಪಾಠ ಕಲಿಸಲಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುವವರೆಗೆ ತಕ್ಕ ಸಂದೇಶ ಕೊಡಲಾಗಿದೆ. ಇದು ರಾಜಸ್ಥಾನದ ಜನರ ಗೆಲುವಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಚಿನ್ ಪೈಲಟ್ ಕುರಿತು ಯಾವುದೇ ಮಾತುಗಳನ್ನಾಡಿಲ್ಲ.
ಇದಕ್ಕೆ ಪ್ರತಿಯಾಗಿ “ಮುಖ್ಯಮಂತ್ರಿ ಗೆಹ್ಲೋಟ್ ಕೇಂದ್ರ ಸರ್ಕಾರವನ್ನು ದೂಷಿಸುವ ಮೂಲಕ ಸುಳ್ಳು ಆರೋಪ ಮಾಡಿದ್ದಾರೆ” ಎಂದು ಬಿಜೆಪಿಯ ಹಿರಿಯ ಮುಖಂಡರಾದ ಗುಲಾಬ್ ಚಂದ್ ಕಟಾರಿಯಾ, ಸತೀಶ್ ಪುನಿಯಾ ಮತ್ತು ರಾಜೇಂದ್ರ ರಾಥೋಡ್ ಆರೋಪಿಸಿದರು.
ದೇಶದಲ್ಲಿ ಇಬ್ಬರು ವ್ಯಕ್ತಿಗಳ ಆಡಳಿತದ ಬಗ್ಗೆ ಚಿಂತಿಸಿ ಎಂದು ರಾಜ್ಯ ಬಿಜೆಪಿ ಮುಖಂಡರಿಗೆ ಸಲಹೆ ನೀಡಿದ ಗೆಹ್ಲೋಟ್, ಪ್ರಜಾಪ್ರಭುತ್ವದ ವಿಫಲತೆ ಮತ್ತು ಈ ಬಿಕ್ಕಟ್ಟಿಗೆ “ನಿಮ್ಮ ಹೈಕಮಾಂಡ್ ಮಾಡಿದ ಪಿತೂರಿ” ಕಾರಣ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಬಿಕ್ಕಟ್ಟು: ಬಿಜೆಪಿಯ ಅವಿಶ್ವಾಸ ಗೊತ್ತುವಳಿಗೆ ಸೋಲು; ಗೆಹ್ಲೋಟ್ಗೆ ಗೆಲುವು