ದೇಶವು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರು ಪ್ರಜಾಪ್ರಭುತ್ವವನ್ನು ನಾಶಪಡಿಡುತ್ತಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿರುವ ಹಿನ್ನೆಲೆಯಲ್ಲಿ, ನಿಮ್ಮ ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸಲು ನಿಮ್ಮ ಬಳಿ ಸಾಕಷ್ಟು ಸಂಖ್ಯೆಗಳಿವೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
“ವಿಶ್ವವು ವೈರಸ್ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವಾಗಲೂ, ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಉರುಳಿಸಿದೆ. ಈ ಸಮಯದಲ್ಲಿ ಯಾರು ನೋವು ಕೊಡುತ್ತಿದ್ದಾರೆ ಮತ್ತು ಯಾರು ಔಷಧಿ ವಿತರಿಸುತ್ತಿದ್ದಾರೆ ಎಂಬುದನ್ನು ನಾವು ನಿರ್ಧರಿಸಬೇಕಾಗಿದೆ” ಎಂದು ಗೆಹ್ಲೋಟ್ ಹೇಳಿದ್ದಾರೆ.
ರಾಜಸ್ಥಾನದ ಕಾಂಗ್ರೆಸ್ ಪಕ್ಷವು “ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನಗಳ” ವಿರುದ್ಧ ದೂರು ನೀಡಿದೆ. ಕಾಂಗ್ರೆಸ್ ಮತ್ತು ಅದನ್ನು ಬೆಂಬಲಿಸುವ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ಆಳುತ್ತಿದ್ದ ಎರಡು ದೊಡ್ಡ ರಾಜ್ಯಗಳಾದ ಕರ್ನಾಟಕ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಿ, ಶಾಸಕರನ್ನು ಕೊಂಡುಕೊಂಡು ಸರ್ಕಾರಗಳನ್ನು ಉರುಳಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ನಡುವೆ ಜೂನ್ 19 ರಂದು ನಡೆಯುವ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಯ ಬಗ್ಗೆ ರಾಜಸ್ಥಾನದಲ್ಲಿ ಕೋಲಾಹಲ ಉತ್ತುಂಗಕ್ಕೇರಿದೆ. ಎರಡು ಸ್ಥಾನಗಳನ್ನು ಗೆಲ್ಲಲು ಪಕ್ಷಕ್ಕೆ ಸಾಕಷ್ಟು ಸಂಖ್ಯೆಯಿದೆ ಮತ್ತು ಯಾರೂ ಪಕ್ಷವನ್ನು ತೊರೆಯುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಮತ್ತು ರಾಜಸ್ಥಾನ್ ಕಾಂಗ್ರೆಸ್ ಮುಖ್ಯಸ್ಥ ಸಚಿನ್ ಪೈಲಟ್ ಹೇಳಿದ್ದಾರೆ.
“ರಾಜ್ಯಸಭೆಯ ಎರಡೂ ಸ್ಥಾನಗಳನ್ನು ಗೆಲ್ಲಲು ನಮ್ಮಲ್ಲಿ ಸಂಖ್ಯೆಗಳಿವೆ. ನಮಗೆ ಸ್ವತಂತ್ರ ಶಾಸಕರ ಬೆಂಬಲವಿದೆ. ಊಹಾಪೋಹಗಳು ಹರಡಿ ಜನರನ್ನು ದಾರಿ ತಪ್ಪಿಸಬೇಡಿ. ಎಲ್ಲಾ ಶಾಸಕರು ನಮ್ಮೊಂದಿಗಿದ್ದಾರೆ” ಎಂದು ಸಚಿನ್ ಪೈಲಟ್ ತಮ್ಮ ಪಕ್ಷವು ಬಿಕ್ಕಟ್ಟಿನಲ್ಲಿದೆ ಎಂಬುದನ್ನು ನಿರಾಕರಿಸಿದ್ದಾರೆ.
ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ಗಳಲ್ಲಿ ಇರಿಸಲಾಗುತ್ತಿದೆ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ನಾವು ಕಳೆದ ಮೂರು ತಿಂಗಳುಗಳಿಂದ ಭೇಟಿಯಾಗದ ಕಾರಣ ಈಗ ಹೋಟೆಲ್ಗಳಲ್ಲಿ ಒಟ್ಟಿಗೆ ಸೇರಿದ್ದೇವೆ” ಎಂದಿದ್ದಾರೆ.
200 ಸದಸ್ಯರ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು 107 ಶಾಸಕರನ್ನು ಹೊಂದಿದೆ. ಅದರಲ್ಲಿ ಆರು ಜನ ಕಳೆದ ವರ್ಷ ಬಿಎಸ್ಪಿ ತ್ಯಜಿಸಿ ಕಾಂಗ್ರೆಸ್ ಸೇರಿದ್ದಾರೆ. 13 ಸ್ವತಂತ್ರ ಶಾಸಕರಲ್ಲಿ 12 ಜನರ ಬೆಂಬಲವೂ ಪಕ್ಷಕ್ಕೆ ಇದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಬಿಜೆಪಿಯು 72 ಶಾಸಕರು ಮತ್ತು ಸ್ವಂತತ್ರ ಶಾಸಕರು ಮತ್ತು ಪಾಲುದಾರ ಪಕ್ಷಗಳಿಂದ ನಾಲ್ವರ ಬೆಂಬಲ ಪಡೆದಿದೆ. ರಾಜ್ಯಸಭಾ ಸ್ಥಾನವನ್ನು ಗೆಲ್ಲಲು, ಪ್ರತಿ ಅಭ್ಯರ್ಥಿಗೆ 51 ಮೊದಲ ಆದ್ಯತೆಯ ಮತಗಳು ಬೇಕಾಗುತ್ತವೆ.
ಕಾಂಗ್ರೆಸ್ ಎರಡು ರಾಜ್ಯಸಭಾ ಸ್ಥಾನಗಳನ್ನು ಗೆಲ್ಲುವಷ್ಟು ಶಾಸಕರನ್ನು ಹೊಂದಿದೆ. ಆದಾಗ್ಯೂ, ಬಿಜೆಪಿ ಸಾಕಷ್ಟು ಸಂಖ್ಯೆಗಳನ್ನು ಹೊಂದಿಲ್ಲದಿದ್ದರೂ ಸಹ ಒಬ್ಬರ ಬದಲು ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಪ್ರಸ್ತುತ ಉಂಟಾಗಿರುವ ಬಿಕ್ಕಟ್ಟಿಗೆ ನಾಂದಿ ಹಾಡಿದೆ. ಹಾಗಾಗಿ “ನೀವು ಎರಡನೇ ಅಭ್ಯರ್ಥಿಗೆ ಸಂಖ್ಯೆಗಳನ್ನು ಹೊಂದಿದ್ದೀರಾ? ಇದು ನಿಮ್ಮ ದುಷ್ಟ ವಿನ್ಯಾಸಗಳನ್ನು ಬಹಿರಂಗಪಡಿಸುತ್ತದೆ” ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.