Homeಬಹುಜನ ಭಾರತಮೋದಿ-ಶಾ ಜೋಡಿಗೆ ಬೆವರಿಳಿಸಿದ ಬಿಹಾರ! - ಡಿ.ಉಮಾಪತಿ

ಮೋದಿ-ಶಾ ಜೋಡಿಗೆ ಬೆವರಿಳಿಸಿದ ಬಿಹಾರ! – ಡಿ.ಉಮಾಪತಿ

ತೇಜಸ್ವಿ ಯಾದವ್ ಮುಂಬರುವ ದಿನಗಳ ರಾಜಕಾರಣದಲ್ಲಿ ಗಮನಿಸಬೇಕಾದ ಪ್ರತಿಭೆ ಎಂಬುದನ್ನು ರುಜುವಾತು ಮಾಡಿ ತೋರಿದ್ದಾರೆ. ಗೆಲುವಿನ ಗೆರೆಯ ಬಳಿ ಸಾರಿ ಕಾಲು ಸೋತ ಸಾರಥಿ ತೇಜಸ್ವಿ!

- Advertisement -
- Advertisement -

ಚುನಾವಣಾ ಸಮೀಕ್ಷೆಗಳು ಮತ್ತು ಮತಗಟ್ಟೆ ಸಮೀಕ್ಷೆಗಳನ್ನು ಸುಳ್ಳು ಮಾಡಿರುವ ಬಿಹಾರ ವಿಧಾನಸಭಾ ಚುನಾವಣೆ, ಸ್ಪರ್ಧಿಗಳನ್ನು ಸೋಲು ಗೆಲುವುಗಳ ನಡುವೆ ತೂಗುಯ್ಯಾಲೆ ಆಡಿಸಿ ಕೊನೆಗೆ ಫಲಿತಾಂಶವು ಕೂದಲೆಳೆಯ ಅಂತರದಲ್ಲಿ ಎನ್‌ಡಿಎ ಪರವಾಯಿತು. ಮಂಗಳವಾರ ಮಧ್ಯರಾತ್ರಿಯ ತನಕ ಮುಂದುವರೆದ ಎಣಿಕೆಯ ನಡುವೆ, 119 ಕಡೆಗಳಲ್ಲಿ ಗೆದ್ದರೂ ಗೆಲುವಿನ ಪ್ರಮಾಣಪತ್ರವನ್ನು ಚುನಾವಣಾ ಆಯೋಗ ನೀಡುತ್ತಿಲ್ಲ ಎಂದು ಆರ್‌ಜೆಡಿ ಪಕ್ಷ ಟ್ವೀಟ್ ಮಾಡಿದೆ.

ಅಳೆದೂ ಸುರಿದೂ ಕೈಕಾಲು ಬಡಿದು ಕೂದಲೆಳೆಯ ಅಂತರದಲ್ಲಿ ಎನ್‌ಡಿಎ ಕಡೆಗೂ ದಡ ಸೇರಿದೆ. ಅದು ಕೇವಲ ತಾಂತ್ರಿಕ ಗೆಲುವೇ ವಿನಾ ಘನ ಗೆಲುವು ಎನಿಸಿಕೊಳ್ಳದು. ನಾಲ್ಕು ತಿಂಗಳ ಸನಿಹದಲ್ಲೇ ಅಸ್ಸಾಮ್, ಕೇರಳ, ಪುದುಚೆರಿ, ತಮಿಳುನಾಡು, ಪಶ್ಚಿಮ ಬಂಗಾಳದ ವಿಧಾನಸಭೆಗಳು ಕದ ಬಡಿದಿವೆ. ಈ ಚುನಾವಣೆಗಳ ಕಣಕ್ಕೆ ಧುಮುಕಲು ಬಿಜೆಪಿಗೆ ಉತ್ಸಾಹ-ಹುಮ್ಮಸ್ಸಿನ ಭುಜಕೀರ್ತಿಗಳನ್ನೇನೂ ಇಂದಿನ ಫಲಿತಾಂಶಗಳು ಕಟ್ಟಿಕೊಟ್ಟಿಲ್ಲ.

ಇದನ್ನೂ ಒದಿ:Bihar Election Results: ಸರಳ ಬಹುಮತ ಪಡೆದ NDA; 5 ನೇ ಭಾರಿಗೆ ಮುಖ್ಯಮಂತ್ರಿಯಾಗಲಿದ್ದಾರ ನಿತೀಶ್ ಕುಮಾರ್‌

ದೆಹಲಿಯ ಬಿಜೆಪಿ ಮುಖ್ಯಕಚೇರಿಯ ಅವರಣದಲ್ಲಿ ಸಂಜೆ ಆರಕ್ಕೆ ಆರಂಭ ಆಗಬೇಕಿದ್ದ ವಿಜಯೋತ್ಸವ ಅನಿರ್ದಿಷ್ಟ ಕಾಲ ಮುಂದೆ ಹೋದದ್ದು ಇದೇ ಕಾರಣದಿಂದಾಗಿ. ಪ್ರಧಾನಮಂತ್ರಿ ಮೋದಿ, ಗೃಹಮಂತ್ರಿ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲು ಎಲ್ಲ ಸಿದ್ಧತೆಗಳೂ ನಡೆದಿದ್ದವು. ಪಕ್ಷದ ಈ ಪರಮ ನಾಯಕರ ನಿರೀಕ್ಷೆಯಲ್ಲಿ ರಾತ್ರಿ ಎಂಟೂವರೆಯ ನಂತರವೂ ಇಲ್ಲಿ ನೆರೆದಿದ್ದ ಕಾರ್ಯಕರ್ತರು ಹನುಮಾನ್ ಚಾಲೀಸಾ ಹಾಡತೊಡಗಿದ್ದರು.

Bihar Election Results, ಬಿಹಾರ ಚುನಾವಣೆ
ನಿತೀಶ್ ಕುಮಾರ್‌ (PC: starsunfolded

2019 ರ ಲೋಕಸಭಾ ಫಲಿತಾಂಶಕ್ಕೆ ಹೋಲಿಸಿದರೆ ಇಂದಿನ ಫಲಿತಾಂಶ ಬಿಜೆಪಿಗೆ ದೊಡ್ಡ ಹಿನ್ನಡೆ. ಎನ್‌ಡಿಎ ಈ ಚುನಾವಣೆಯಲ್ಲಿ ಶೇ.12 ರಷ್ಟು ಮತಗಳನ್ನು ಕಳೆದುಕೊಂಡಿದೆ. ಆದರೆ ಹಾಲಿ ಜನಾದೇಶ ಮಹಾಮೈತ್ರಿಕೂಟದ ಪರವಾಗಿಯೂ ಹೊರಬಿದ್ದಿಲ್ಲ ಎಂಬುದನ್ನು ಗಮನಿಸಬೇಕು. ಬಿಜೆಪಿಯ ವರ್ಚಸ್ವೀ ಜೋಡಿ ಮೋದಿ-ಶಾ ಜೋಡಿ ರಾಷ್ಟ್ರೀಯ ಚುನಾವಣೆಗಳ ಗೆಲುವನ್ನು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಪುನರಾವರ್ತನೆಗೊಳಿಸಲು ಅಸಮರ್ಥವಾಗಿದೆ. ಲೋಕಸಭಾ ಚುನಾವಣೆಗಳಲ್ಲಿ ಬಿಹಾರದ ಎಲ್ಲ ಸ್ಥಾನಗಳನ್ನೂ ಗೆದ್ದು ಗುಡಿಸಿಹಾಕಿತ್ತು ಈ ಜೋಡಿ.

ರಾಮಮಂದಿರ, ಕಾಶ್ಮೀರ, ಸುಶಾಂತ್ ಸಿಂಗ್, ಪಾಕಿಸ್ತಾನದ ಪ್ರಸ್ತಾಪವೂ ಎನ್‌ಡಿಎಗೆ ಸಲೀಸು ಗೆಲುವನ್ನು ಗಳಿಸಿಕೊಡಲಿಲ್ಲ. ಬಿಹಾರ ಉತ್ತರಪ್ರದೇಶವಲ್ಲ. ಒಂದೊಮ್ಮೆ ದೇಶ ರಾಜಕಾರಣದ ಕಂಪನಕೇಂದ್ರ ಎನಿಸಿದ್ದ ಬಿಹಾರದಲ್ಲಿ ಕೋಮು ಧ್ರುವೀಕರಣದ ರಾಜಕಾರಣಕ್ಕೆ ಇತಿಮಿತಿಗಳಿವೆ ಎಂಬುದನ್ನು ಇಂದಿನ ಫಲಿತಾಂಶಗಳು ತೋರಿಸಿಕೊಟ್ಟಿವೆ.

ಇದನ್ನೂ ಓದಿ: ಬಿಹಾರ: ಈ ಗೆಲುವು ಮೋದಿಯವರದ್ದು; ನಿತೀಶ್‌ಗೆ ಒಳ ಏಟು ನೀಡಿದ ಚಿರಾಗ್ ಪಾಸ್ವಾನ್? 

ಮಹಾಮೈತ್ರಿ ಎದುರಿಸಿದ ಹಿನ್ನಡೆಗೆ ತನ್ನ ಕಳಪೆ ಸಾಧನೆಯೇ ಕಾರಣ ಎಂಬ ಟೀಕೆಯನ್ನು ಕಾಂಗ್ರೆಸ್ ಎದುರಿಸಿದೆ. ತಾನು ಸ್ಪರ್ಧಿಸಿದ 70 ಸೀಟುಗಳ ಪೈಕಿ ಗೆದ್ದಿದ್ದು ಕೇವಲ 19 ರಲ್ಲಿ. ಕಾಂಗ್ರೆಸ್ ಮಹಾಮೈತ್ರಿಯ ಕಾಲಿಗೆ ಬಿಗಿದ ಒರಳುಕಲ್ಲಾಯಿತೇ ಎಂಬ ಅಂಶ, ಅಂಕಿ ಅಂಶಗಳ ವಿಶ್ಲೇಷಣೆಯಿಂದ ಹೊರಬೀಳಬೇಕಿದೆ. ಈ ಸೀಟುಗಳು ಬಿಜೆಪಿಯ ಕಟ್ಟರ್ ಬೆಂಬಲ ನೆಲೆಗಳು. ಇಲ್ಲಿ ಯಾರಾದರೂ ಸ್ಪರ್ಧಿಸಬೇಕಿತ್ತು. ನಾವು ಧೀರರಾಗಿ ಸ್ಪರ್ಧಿಸಿದ್ದೇವೆ ಎಂಬುದು ಕಾಂಗ್ರೆಸ್‌ನ ಸಮಜಾಯಿಷಿ.

ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿಯ ಸ್ಪರ್ಧೆಯು ಎರಡಲಗಿನ ಕತ್ತಿಯಾಗಿ ಸಂಯುಕ್ತ ಜನತಾದಳ ಮತ್ತು ರಾಷ್ಟ್ರೀಯ ಜನತಾದಳ ಎರಡನ್ನೂ ಕೊಯ್ದಿದೆ. ಆದರೆ ರಾಷ್ಟ್ರೀಯ ಜನತಾದಳಕ್ಕಿಂತ ಹೆಚ್ಚಾಗಿ ಸಂಯುಕ್ತ ಜನತಾದಳಕ್ಕೆ ಹೆಚ್ಚಿನ ಹಾನಿಯನ್ನು ಉಂಟುಮಾಡಿರುವ ಲೆಕ್ಕಾಚಾರಗಳಿವೆ. 30-35 ಸೀಟುಗಳಲ್ಲಿ ನಿತೀಶ್ ಸೋಲನ್ನು ಬರೆದಿದ್ದಾರೆ ಚಿರಾಗ್ ಪಾಸ್ವಾನ್. ನಿತೀಶ್ ಅವರನ್ನು ತನ್ನ ಅಳತೆಗೆ ತಕ್ಕಂತೆ ಕತ್ತರಿಸುವ ಬಿಜೆಪಿಯ ಅಪಾಯಕಾರಿ ತಂತ್ರ ಆ ಮಟ್ಟಿಗೆ ಫಲ ನೀಡಿದೆ.

ಬಿಹಾರ; ನಿತೀಶ್ ನ.10ರ ಫಲಿತಾಂಶದ ನಂತರ ತೇಜಸ್ವಿ ಮುಂದೆ ಮಂಡಿಯೂರಬೇಕು- ಪಾಸ್ವಾನ್
ಚಿರಾಗ್ ಪಾಸ್ವಾನ್

ಇದನ್ನೂ ಓದಿ: ಗೆಲುವು ಸಂಭ್ರಮಿಸಲು ಹಿಂದಿ ಮಾತ್ರವಲ್ಲ ವೈವಿದ್ಯಮಯ ಭಾಷೆಗಳು ಬೇಕು ಮೋದಿಯವರೆ!

ಆದರೆ ಈ ಗಂಡಾಂತರಕಾರಿ ಆಟದಲ್ಲಿ ತಾನು ಹಚ್ಚಿದ ಬೆಂಕಿಯ ಬಿಸಿ ತನ್ನ ಕೈಯನ್ನೇ ಸುಡುವಷ್ಟು ಹತ್ತಿರ ಬಂದು ಬೆದರಿಸಿದೆ. ಚಿರಾಗ್ ತಮ್ಮ ಚುನಾವಣಾ ಸೌಧಕ್ಕೂ ಬೆಂಕಿ ಇಟ್ಟುಕೊಂಡಿದ್ದಾರೆ. ಅವರಿಗೆ ಒಂದು ಸೀಟೂ ದಕ್ಕಿಲ್ಲ. ಆದರೆ ಅವರು ಹೆಚ್ಚು ಚಿಂತಿಸುವುದಿಲ್ಲ. ಯಾಕೆಂದರೆ ಈ ನಷ್ಟಕ್ಕೆ ಬಿಜೆಪಿಯಲ್ಲಿ ಅವರು ಮುಂಚಿತವಾಗಿಯೇ ವಿಮೆ ಮಾಡಿಸಿದ್ದರು. ಅವರನ್ನು ಈ ಆಟಕ್ಕೆ ಬೆನ್ನು ತಟ್ಟಿ ಹುರಿದುಂಬಿಸಿ ಇಳಿಸಿದ್ದು ಬಿಜೆಪಿಯೇ. ಹೀಗಾಗಿ ಅವರ ನಷ್ಟವನ್ನು ಮೋದಿ-ಅಮಿತ್ ಶಾ ತುಂಬಿಕೊಡಲಿದ್ದಾರೆ.

ಇದೇ ರೀತಿ ಮುಸ್ಲಿಮ್ ಮತದಾರರ ಸಂಖ್ಯೆ ಹೆಚ್ಚಿರುವ ಸೀಮಾಂಚಲ ಮತ್ತಿತರೆ ಸೀಮೆಗಳಲ್ಲಿ ಅಸಾದುದ್ದೀನ್ ಓವೈಸಿ ಅವರ ಪಕ್ಷ ರಾಷ್ಟ್ರೀಯ ಜನತಾದಳಕ್ಕೆ ಏಟು ನೀಡಿದೆ. ಓವೈಸಿ ಕಣಕ್ಕೆ ಇಳಿಯದೆ ಹೋಗಿದ್ದರೆ ಮುಸ್ಲಿಮ್ ಮತಗಳು ರಾಷ್ಟ್ರೀಯ ಜನತಾ ಪಕ್ಷಕ್ಕೆ ಬೀಳುವುದು ನಿಶ್ಚಿತವಿತ್ತು. ಅವರು 24 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಐದು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಆದರೆ ತಾವು ಸ್ಪರ್ಧಿಸಿದ ಬಹುತೇಕ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಜನತಾದಳದ ಗೆಲುವಿನ ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದಾರೆ. ಈ ವಿದ್ಯಮಾನದ ನೇರ ಲಾಭ ಬಿಜೆಪಿಗೆ ದೊರೆತಿದೆ. ಅವಕಾಶ ಏರ್ಪಟ್ಟಿದ್ದರೆ ‘ಕಿಂಗ್ ಮೇಕರ್’ ಪಾತ್ರ ಧರಿಸುವ ನಿರೀಕ್ಷೆಯಲ್ಲಿದ್ದರು.

ಒಂದು ಕಾಲಕ್ಕೆ ಮೈತ್ರಿಕೂಟದ ‘ದೊಡ್ಡಣ್ಣ’ನಾಗಿದ್ದ ನಿತೀಶ್ ಕುಮಾರ್ (ಸಂಯುಕ್ತ ಜನತಾದಳ) ಅವರನ್ನು ಆ ಪಟ್ಟದಿಂದ ಕೆಳಗಿಳಿಸುವ ಬಿಜೆಪಿಯ ಹಂಚಿಕೆ ಕೈಗೂಡಿರುವುದು ಇಂದಿನ ಫಲಿತಾಂಶಗಳ ಮತ್ತೊಂದು ಮಹತ್ವದ ಬೆಳವಣಿಗೆ. ಇದೀಗ ಬಿಹಾರದ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿಯೇ ‘ದೊಡ್ಡಣ್ಣ’. ಸಂಯುಕ್ತ ಜನತಾದಳ ಕಡಿಮೆ ಸೀಟುಗಳನ್ನು ಗೆದ್ದರೂ ಅವರೇ ಮುಖ್ಯಮಂತ್ರಿ ಎಂದು ಬಿಜೆಪಿ ಘೋಷಿಸಿತ್ತು. ಬಿಜೆಪಿ ಗಳಿಸಿದ ಅರ್ಧದಷ್ಟು ಸ್ಥಾನಗಳನ್ನು ಮಾತ್ರವೇ ಗೆದ್ದಿರುವ ನಿತೀಶ್ ಇದೀಗ ಬಿಜೆಪಿಯ ಪಾಲಿಗೆ ಸಂಪೂರ್ಣ ಹಲ್ಲು ಕಿತ್ತ ಹಾವು. ಕೈಗೊಂಬೆ ಮುಖ್ಯಮಂತ್ರಿಯಾಗಿ ವರ್ಷದೊಪ್ಪತ್ತು ಇರಿಸಿಕೊಂಡು ಅವರ ಕುರ್ಚಿಯನ್ನು ಕಿತ್ತುಕೊಳ್ಳುವುದು ಗೋಡೆ ಮೇಲಿನ ಬರೆಹ.

ಇದನ್ನೂ ಓದಿ:  ತಮಿಳಿನಲ್ಲೂ ಕ್ರಾಂತಿ ಸೃಷ್ಟಿಸಿದ ‘ಮಹಾನಾಯಕ’- ನಟ ಕಮಲ ಹಾಸನ್ ಪ್ರತಿಕ್ರಿಯೆ ಏನು?

ತನ್ನ ಮಿತ್ರಪಕ್ಷಗಳನ್ನು ಭಕ್ಷಿಸಿ ಕಾಲಕ್ರಮೇಣ ಅವುಗಳ ರಾಜಕೀಯ ಆವರಣವನ್ನು ತಾನೇ ಆಕ್ರಮಿಸುವ ಆಕ್ರಮಣಕಾರಿ ರಾಜಕಾರಣ ಬಿಜೆಪಿಯದು. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಈ ಮಾತಿಗೆ ಉದಾಹರಣೆ. ಈಗಿನ ಮೋದಿ-ಶಾ ಕಟ್ಟಿರುವ ಬಿಜೆಪಿಯದು ಲವಲೇಶ ಕರುಣೆಯಿಲ್ಲದ ಕಾಠಿಣ್ಯ. 2015 ರಲ್ಲಿ ನಿತೀಶ್ ದೂರವಾಗಿ ರಾಷ್ಟ್ರೀಯ ಜನತಾದಳ- ಕಾಂಗ್ರೆಸ್ ಸಖ್ಯ ಬೆಳೆಸಿದಾಗ ಬಿಜೆಪಿ ಶೋಚನೀಯ ಸೋಲನ್ನು ಎದುರಿಸಿತ್ತು. ಅಂದಿನಿಂದಲೇ ನಿತೀಶ್ ಅವರನ್ನು ತಿಂದು ಅವರ ಶಕ್ತಿಯನ್ನು ತಾನು ಧರಿಸುವ ಪಣ ತೊಟ್ಟಿರಬೇಕು ಮೋದಿ-ಶಾ ಅವರ ಬಿಜೆಪಿ.

ಚಿರಾಗ್ ಪಾಸ್ವಾನ್ ಅವರನ್ನು ತಮ್ಮ ವಿರುದ್ಧ ಬೆನ್ನುತಟ್ಟಿ ಹುರಿದುಂಬಿಸಿದ ಬಿಜೆಪಿಯ ರಣತಂತ್ರ ನಿತೀಶ್ ಗಮನಕ್ಕೆ ಬಾರದೆ ಇರದು. ಮೋದಿಯವರನ್ನು, ಬಿಜೆಪಿಯನ್ನು ವಿರೋಧಿಸಿ ಪುನಃ ಬೆಂಬಲಿಸಿ ತಬ್ಬಿಕೊಂಡ ಅವರ ರಾಜಕಾರಣ ವಿಶ್ವಾಸನೀಯತೆಯನ್ನು ಕಳೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಕೂಡ ಒಂದು ಕಾಲದಲ್ಲಿ ಬಿಜೆಪಿ ಮೈತ್ರಿಕೂಟದ ದೊಡ್ಡಣ್ಣನಾಗಿತ್ತು. ಆದರೆ ನಿತೀಶ್ ಅವರನ್ನು ಅಳತೆಗೆ ತಕ್ಕಂತೆ ಕತ್ತರಿಸಿದಂತೆ ಸೇನೆಯನ್ನೂ ಕತ್ತರಿಸಿ ತಾನು ದೊಡ್ಡಣ್ಣನ ಸ್ಥಾನದಲ್ಲಿ ಕುಳಿತಿತ್ತು ಬಿಜೆಪಿ. ಈ ಹಂಚಿಕೆಯ ವಿರುದ್ಧ ಬಂಡೆದ್ದ ಸೇನೆ ಕಾಂಗ್ರೆಸ್-ಎನ್‌ಸಿಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿತು.

ಲಾಲು ಪ್ರಸಾದ್ ಯಾದವ್ (PC : Telegraph India)

ತಮ್ಮನ್ನು ಮೂಲೆಗುಂಪು ಮಾಡುವ ಬಿಜೆಪಿ ಹುನ್ನಾರದ ಮುಂದೆ ಇದೀಗ ನಿತೀಶ್ ಅಸಹಾಯಕರು. ತಮ್ಮ ಕೈಕಾಲುಗಳನ್ನು ತಾವೇ ಕಟ್ಟಿ ಹಾಕಿಕೊಂಡಿದ್ದಾರೆ. 2017 ರಲ್ಲಿ ರಾಷ್ಟ್ರೀಯ ಜನತಾದಳದೊಂದಿಗೆ ಮೈತ್ರಿ ಮುರಿದು ಪುನಃ ಬಿಜೆಪಿಯನ್ನು ತಬ್ಬಿಕೊಂಡ ಅವರ ಮುಂದೆ ಹೆಚ್ಚಿನ ಆಯ್ಕೆಗಳಿಲ್ಲ. ಸತ್ತರೂ ಸರಿ, ಬಿಜೆಪಿಯೊಂದಿಗೆ ಮತ್ತೆ ಗೆಳೆತನ ಬೆಳೆಸುವುದಿಲ್ಲ ಎಂದು ಬಹಿರಂಗವಾಗಿ ಸಾರಿದ್ದರು ನಿತೀಶ್. ಆದರೆ ಅಂತಿಮವಾಗಿ ಅಧಿಕಾರವೇ ಪರಮ ಎಂಬ ಅವಕಾಶವಾದಿತನ ಮೆರೆದರು. ಅದಕ್ಕೆ ಶಿಕ್ಷೆಯನ್ನೂ ಎದುರಿಸಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಸಾಮಾಜಿಕ ಜಾಲತಾಣಗಳಲ್ಲಿ’ಎಣಿಕೆ ನಿಲ್ಲಿಸಿ’ ಟ್ರೋಲ್!

ರಾಜಕಾರಣ ಕುರಿತ ದೇಶಾವರಿ ಚರ್ಚೆ ನಡೆದಾಗ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನು ಒಟ್ಟೊಟ್ಟಿಗೆ ಪ್ರಸ್ತಾಪಿಸುವ ರೂಢಿಯುಂಟು. ಜನಸಂಖ್ಯೆ, ಹಿಂದುಳಿದಿರುವಿಕೆ, ಊಳಿಗಮಾನ್ಯ ವ್ಯವಸ್ಥೆ, ದಟ್ಟ ಜಾತಿ ರಾಜಕಾರಣ ಎರಡೂ ರಾಜ್ಯಗಳ ಸಮಾನ ಅಂಶಗಳು. ಹೋಲಿಕೆ ಇಲ್ಲಿ ಅಂತ್ಯಗೊಳ್ಳುತ್ತದೆ.

ವಿಶೇಷವಾಗಿ ಕಳೆದ ಎರಡು ದಶಕಗಳಲ್ಲಿ ಉತ್ತರಪ್ರದೇಶದಲ್ಲಿ ಏಕಪಕ್ಷ ಸರ್ಕಾರಗಳು ಅಧಿಕಾರ ನಡೆಸಿವೆ. ಹಾಲಿ ಭಾರತೀಯ ಜನತಾ ಪಕ್ಷ ಸರ್ಕಾರ ದೈತ್ಯ ಜನಮತ ಹೊಂದಿದೆ. ಬಿಹಾರ ರಾಜಕಾರಣಕ್ಕೆ ಸಮ್ಮಿಶ್ರ ಸರ್ಕಾರಗಳು ಇಲ್ಲವೇ ಮೈತ್ರಿಕೂಟಗಳ ಸರ್ಕಾರಗಳು- ಮೈತ್ರಿಕೂಟ ರಾಜಕಾರಣ ಅನಿವಾರ್ಯ ಆಗಿದೆ. ಬಿಜೆಪಿಯ ಬೆಂಬಲಿಗ ಮೇಲ್ಜಾತಿಗಳಿಗೆ ಬಿಹಾರದಲ್ಲಿ ಜನಸಂಖ್ಯಾಬಲವಿಲ್ಲ.

ಉತ್ತರಪ್ರದೇಶದಲ್ಲಿ ಅವುಗಳ ಜನಸಂಖ್ಯೆ ಗಣನೀಯ. ಬಿಹಾರ ರಾಜಕಾರಣ ಹೀಗೆ ಹಲವು ಪಕ್ಷಗಳಲ್ಲಿ ಹಂಚಿಹೋಗಿರುವ ಕಾರಣವಾಗಿ ಮೈತ್ರಿ ರಾಜಕಾರಣ ಇಲ್ಲಿ ಬೇರು ಬಿಟ್ಟಿದೆ. ರಾಷ್ಟ್ರೀಯ ಜನತಾದಳ, ಸಂಯುಕ್ತ ಜನತಾದಳ ಹಾಗೂ ಬಿಜೆಪಿ ಈ ರಾಜಕಾರಣದ ಮೂರು ಮುಖ್ಯ ಪಾತ್ರಧಾರಿಗಳು. ಈ ಪೈಕಿ ಇಬ್ಬರು ಒಂದಾದರೆ ಮೂರನೆಯವರು ತಿಣುಕಬೇಕಾಗುವ ಸ್ಥಿತಿ. ಸಂಯುಕ್ತ ಜನತಾದಳ ಮತ್ತು ಬಿಜೆಪಿ ಮೈತ್ರಿಯು ಲಾಲೂಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳವನ್ನು ಕಳೆದ 15 ವರ್ಷಗಳ ಕಾಲ ಅಧಿಕಾರದಿಂದ ದೂರ ಇರಿಸಿದೆ. ಹಾಲಿ ಚುನಾವಣೆಯಲ್ಲಿ ಹಲವಾರು ಆತಂಕಗಳ ನಡುವೆಯೂ ಬಿಜೆಪಿ-ಸಂಯುಕ್ತ ಜನತಾದಳ ಗೆಲುವಿನ ಗೆರೆಯತ್ತ ತೆವಳುವುದು ಸಾಧ್ಯವಾಗಿದ್ದರೆ ಅದಕ್ಕೆ ಈ ಮೈತ್ರಿಯೇ ಕಾರಣ. ಈ ಮೈತ್ರಿಯ ಹಿಂದೆ ಕೆಲಸ ಮಾಡುವ ವ್ಯಾಪಕ ತಳಹದಿಯ ಪ್ರಬಲ ಜಾತಿ ಸಮೀಕರಣವೇ ಕಾರಣ.

 ತೇಜಸ್ವಿ ಯಾದವ್ (Photo Courtesy: OneIndia)

ತಿಂಗಳ ಹಿಂದೆ ಮೋದಿ-ನಿತೀಶ್ ಮೈತ್ರಿಯ ಗೆಲುವು ಸಲೀಸು ಎಂದು ಸಮೂಹ ಮಾಧ್ಯಮಗಳ ಸಮೀಕ್ಷೆಗಳು ಮಾತ್ರವೇ ಅಲ್ಲದೆ ರಾಜಕೀಯ ವಲಯವೂ ಅಂದಾಜು ಮಾಡಿತ್ತು. ಈ ಅಂದಾಜಿನ ಹಿಂದೆ ಇದ್ದ ಸಮರ್ಥನೆ ಜಾತಿ ಸಮೀಕರಣದ ವ್ಯಾಪಕ ಬೆಂಬಲ ನೆಲೆ. ರಾಷ್ಟ್ರೀಯ ಜನತಾದಳ-ಕಾಂಗ್ರೆಸ್-ಎಡಪಕ್ಷಗಳ ಮಹಾಮೈತ್ರಿಕೂಟ ಗೆಲ್ಲುವುದಿರಲಿ, ಬಲವಾದ ಸ್ಪರ್ಧೆಯನ್ನು ನೀಡುತ್ತದೆ ಎಂಬ ನಿರೀಕ್ಷೆ ಕೂಡ ಇರಲಿಲ್ಲ. ಆದರೆ ಲಾಲೂ ಯಾದವ್ ಅವರ ಮಗ ತೇಜಸ್ವಿ ಯಾದವ್ ಹಠಾತ್ತನೆ ಚುನಾವಣಾ ಕಣದಲ್ಲಿ ಧೂಳೆಬ್ಬಿಸಿದರು.

ಇದನ್ನೂ ಓದಿ: ಬಿಹಾರ ಗೆದ್ದರೂ ನಿತೀಶ್ ಮುಖ್ಯಮಂತ್ರಿ ಪಟ್ಟ ಬಿಜೆಪಿ ಕೈಯ್ಯಲ್ಲಿ! 

ಕರೋನಾ ಮಹಾಮಾರಿ ಉಂಟು ಮಾಡಿದ ನಿರುದ್ಯೋಗ ಮತ್ತು ಮಹಾವಲಸೆಯಿಂದ ತತ್ತರಿಸಿದ್ದ ಯುವಜನ ಸಮೂಹದ ಭಾವನೆಗಳನ್ನು ಚುನಾವಣಾ ವಿಷಯವಾಗಿಸಿದರು. ಭಾರೀ ಜನಸ್ತೋಮಗಳ ಪ್ರತಿಸ್ಪಂದನೆಯೂ ಅವರಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದೊರೆಯಿತು. ಜನ ಕಿಕ್ಕಿರಿದು ಸೇರಿದರು. ಜನಸಭೆಗಳ ಜೊತೆ ತೇಜಸ್ವಿ ಸಂವಾದ ನಡೆಸಿದರು. ದಿನವೊಂದರಲ್ಲಿ 19 ಪ್ರಚಾರಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದು ಅವರ ಚೈತನ್ಯ ಉತ್ಸಾಹದ ದ್ಯೋತಕವಾಗಿತ್ತು. ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದರೆ 10 ಲಕ್ಷ ಸರ್ಕಾರಿ ನೌಕರಿಗಳಿಗೆ ನೇಮಕದ ಆಶ್ವಾಸನೆ ನೀಡಿದರು. ನಿರುದ್ಯೋಗದ ಸುತ್ತಲೇ ಚುನಾವಣಾ ಪ್ರಚಾರದ ಸಂವಾದವನ್ನು ಕಟ್ಟಿ ಬೆಳೆಸಿದರು.

ಮಹಾರಥಿ ಮೋದಿ ಮತ್ತು ಅವರ ಸೇನಾಪತಿಗಳು ನಡೆಸಿದ ಕೋಮು ಧ್ರುವೀಕರಣದ ಹೇಳಿಕೆಗಳಿಗೆ, ಲಾಲೂ-ರಬಡಿದೇವಿ ಅವರ ಜಂಗಲ್ ರಾಜ್ಯ ಸರ್ಕಾರಗಳ ರಾಜಕುಮಾರ ಎಂಬ ಚುಚ್ಚುಮಾತುಗಳಿಗೆ ಪ್ರತಿಕ್ರಿಯೆಯನ್ನೇ ನೀಡದೆ ಸಂಯಮ ತೋರಿದರು. ಕೇವಲ 31 ವರ್ಷ ಪ್ರಾಯದ ಈ ಯುವಕ ಸುತ್ತಮುತ್ತ ದಾರಿ ತೋರುವ ಯಾವುದೇ ಹಿರಿಯ ಮಾರ್ಗದರ್ಶಕರಿಲ್ಲದೆ ಚುನಾವಣೆಯನ್ನು ಎದುರಿಸಿದ ರೀತಿ ಅನನ್ಯವಾದದ್ದು. ಸೋತರೆ ಚಿಂತೆಯಿಲ್ಲ, ಸಾಕಷ್ಟು ವಯಸ್ಸು ಬಾಕಿಯಿದೆ ಎಂಬ ಮಾತಿನ ವಯಸ್ಸಿಗೆ ಮೀರಿದ ಪರಿಪಕ್ವತೆಯನ್ನು ತೋರಿದ್ದರು.

ಮೋದಿ-ಶಾ ಅವರಂತಹ ಹೇಮಾ ಹೇಮಿಗಳನ್ನು ಧ್ರುವೀಕರಣದ ಹಾದಿಯಿಂದ ತಮ್ಮ ನಿರುದ್ಯೋಗ ಚರ್ಚೆಯ ಹಾದಿಗೆ ಎಳೆದು ತಂದ ಈ ತರುಣ ರಾಜಕಾರಣಿಯ ಸಾಧನೆ ಸಾಮಾನ್ಯವಲ್ಲ. ಭೋಜಪುರ ಮತ್ತು ಸುತ್ತಮುತ್ತಲ ಸೀಮೆಯಲ್ಲಿ ತಳವರ್ಗಗಳ ಜನರ ನಡುವೆ ಬೇರು ಬಿಟ್ಟಿರುವ ಎಡಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡು ಅವರಿಗೆ 30 ಸ್ಥಾನಗಳನ್ನು ಬಿಟ್ಟುಕೊಟ್ಟದ್ದು ಜಾಣ ರಾಜಕಾರಣ. ಎಡಪಕ್ಷಗಳು ಇವರ ನಿರೀಕ್ಷೆಯನ್ನು ಸುಳ್ಳಾಗಿಸಿಲ್ಲ ಎಂಬುದು ಗಮನಾರ್ಹ. ತೇಜಸ್ವಿ ಯಾದವ್ ಮುಂಬರುವ ದಿನಗಳ ರಾಜಕಾರಣದಲ್ಲಿ ಗಮನಿಸಬೇಕಾದ ಪ್ರತಿಭೆ ಎಂಬುದನ್ನು ರುಜುವಾತು ಮಾಡಿ ತೋರಿದ್ದಾರೆ. ಗೆಲುವಿನ ಗೆರೆಯ ಬಳಿ ಸಾರಿ ಕಾಲು ಸೋತ ಸಾರಥಿ ತೇಜಸ್ವಿ. ಬಿಹಾರದ ಈ ಚುನಾವಣೆಯಲ್ಲಿ ಅತಿರಥ-ಮಹಾರಥರನ್ನು ಹೊಂದಿದ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟ ಗೆಲುವಿಗಾಗಿ ಬೆವರು ಹರಿಸುವಂತೆ ಮಾಡಿದ ಸಾಧನೆ ಅವರದು.

ಇದನ್ನೂ ಓದಿ: ಬಿಹಾರ ಚುನಾವಣೆ: ಕಣದಲ್ಲಿರುವ 1157 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...