ಕನ್ನಡದಲ್ಲಿ ಪ್ರಸಾರವಾಗಿ ರಾಜ್ಯದಾದ್ಯಂತ ವ್ಯಾಪಕ ಮನ್ನಣೆ ಮತ್ತು ಮೆಚ್ಚುಗೆ ಪಡೆಯುತ್ತಿರುವ ಅಂಬೇಡ್ಕರ್ ಜೀವನಾಧಾರಿತ ಧಾರಾವಾಹಿ “ಮಹಾನಾಯಕ” ಇದೀಗ ತಮಿಳಿನಲ್ಲಿ “ಕ್ರಾಂತಿಕಾರಿ ಅಂಬೇಡ್ಕರ್” (ಪುರಚ್ಚಿಯಾಳರ್ ಅಂಬೇಡ್ಕರ್) ಎಂಬ ಹೆಸರಿನಲ್ಲಿ ಪ್ರಸಾರವಾಗಿ ಮೆಚ್ಚುಗೆಗಳಿಸುತ್ತಿದೆ.
ಸೆಪ್ಟಂಬರ್ 24 ರಿಂದ ಈ ಧಾರಾವಾಹಿ ಜೀ ತಮಿಳಿನಲ್ಲಿ ಪ್ರಸಾರವಾಗುತ್ತಿದ್ದು, ಇದರ ಟೈಟಲ್ ಹಾಡನ್ನು ಖ್ಯಾತ ಗಾಯಕ ಶಂಕರ್ ಮಹಾದೇವನ್ ಅದ್ಭುತವಾಗಿ ಹಾಡಿದ್ದಾರೆ.
ಇದನ್ನೂ ಓದಿ: ಡಾ.ಬಿ.ಆರ್.ಅಂಬೇಡ್ಕರ್ರವರ ಮುಂಬೈ ಮನೆ ‘ರಾಜ್ಗೃಹ’ ಮೇಲೆ ದಾಳಿ, ಧ್ವಂಸ
ಇದನ್ನೂ ಓದಿ: ನಾಸ್ತಿಕತೆಯೇ ನನ್ನ ಆಯುಧ, ಮಾನವೀಯತೆ ನನ್ನ ಸಿದ್ಧಾಂತ: ಕಮಲ್ ಹಾಸನ್ ಹೇಳಿಕೆ ವೈರಲ್
ಈ ಕುರಿತು ಮಾತನಾಡಿರುವ ಕಮಲಹಾಸನ್, “ನಮ್ಮ ಮಕ್ಕಳಿಗೆ ನಮ್ಮ ಇತಿಹಾಸವನ್ನು ತಿಳಿಸುವುದು ಮತ್ತು ಇತಿಹಾಸ ಸೃಷ್ಟಿಸಿದವರನ್ನು ತಿಳಿಸಿಕೊಡುವುದು ನಮ್ಮ ಕರ್ತವ್ಯ. ಇತಿಹಾಸವನ್ನು ಅರ್ಥೈಸಿಕೊಂಡರೆ ಮಾತ್ರ ಇತಿಹಾಸ ಸೃಷ್ಟಿಸುವ ಧೈರ್ಯ ಬರುತ್ತದೆ. ಸ್ವತಂತ್ರಪೂರ್ವ ಭಾರತದ ಇತಿಹಾಸ ಮತ್ತು ಸ್ವತಂತ್ರಾ ನಂತರದ ಭಾರತದ ಇತಿಹಾಸವನ್ನು ತಿಳಿದುಕೊಳ್ಳಬೇಕು. ಇದು ನಮ್ಮ ಭವಿಷ್ಯದ ಶಕ್ತಿಯುತ ಭಾರತವನ್ನು ನಿರ್ಮಿಸಲು ನಮಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಇತಿಹಾಸ ಪ್ರಮುಖವಾದದ್ದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!
“ನವ ಭಾರತದ ರಾಜಕೀಯವನ್ನು ಸುಭದ್ರಗೊಳಿಸುವಲ್ಲಿ ಗಾಂಧಿ-ನೆಹರುವಿನಷ್ಟೇ ಪಾತ್ರವನ್ನು ಅಂಬೇಡ್ಕರ್ ಕೂಡಾ ವಹಿಸಿದ್ದಾರೆ. ಬಹುಮುಖಿ ಪ್ರತಿಭೆಯನ್ನು ಹೊಂದಿದ್ದ ಅಂಬೇಡ್ಕರ್, ಭಾರತದ ರಾಜಕೀಯ ಕಾನೂನನ್ನು ರಚಿಸಿದ್ದರು. ‘ಪ್ರಾಬ್ಲಂ ಆಫ್ ರುಪೀ’ ಎನ್ನುವ ಸಂಶೋಧನಾ ಪ್ರಬಂಧ ಬರೆದು ಆರ್ಬಿಐ ನಂತಹ ಒಂದು ಬಲಿಷ್ಠ ಸಂಸ್ಥೆಯನ್ನು ಸ್ಥಾಪಿಸಲು ಅಂಬೇಡ್ಕರ್ ಕಾರಣಕರ್ತರಾಗಿದ್ದರು ಎಂಬುದನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕಾದ ವಾಸ್ತವ ಸತ್ಯ. ಜಗತ್ತಿನಾದ್ಯಂತ ವರ್ಗದ ಆಧಾರದಲ್ಲಿ ತಾರತಮ್ಯ ಶೋಷಣೆ, ದೌರ್ಜನ್ಯ ನಡೆಯುತ್ತಿದ್ದಾಗ, ಅದಕ್ಕಿಂತಲೂ ಕಠೋರವಾದ ರೀತಿಯಲ್ಲಿ, ವರ್ಣದ ಆಧಾರದಲ್ಲಿ ತಾರತಮ್ಯ ದೌರ್ಜನ್ಯ ನಡೆಯುತ್ತಿದೆ ಎಂದು ನಿರ್ಭಯವಾಗಿ ಹೇಳುವುದರ ಜೊತೆಗೆ ಅದನ್ನು ನಾಶಪಡಿಸುವ ರೀತಿಯನ್ನು ಹೇಳಿದ್ದು ಅಂಬೇಡ್ಕರ್. ನಿಜವಾದ ಸ್ವಾತಂತ್ರ ಎಂದರೆ, ವರ್ಣ ಮತ್ತು ವರ್ಗಾಧಾರಿತ ಪದ್ದತಿಯಿಂದ ಬಿಡಿಸಿಕೊಳ್ಳುವುದೇ ಆಗಿದೆ ಎಂದು ಹೇಳಿದ್ದರು. ಹಾಗಾಗಿಯೆ ಇದರ ವಿರುದ್ಧ ಹೋರಾಡಲು ಅವರಿಗೆ ಸಾಧ್ಯವಾಯಿತು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇವರ ದೃಷ್ಟಿಯಲ್ಲಿ ಮನುಷ್ಯರೆಲ್ಲರೂ ಸಮಾನರೆಂಬುದು ನನಗೆ ಬೇಕಿಲ್ಲ. ಬದಲಿಗೆ ಮನುಷ್ಯರ ದೃಷ್ಟಿಯಲ್ಲಿ ಮನುಷ್ಯರೆಲ್ಲರೂ ಸಮಾನರು ಎಂಬುದು ಬೇಕು- ಡಾ.ಬಿ.ಆರ್.ಅಂಬೇಡ್ಕರ್
“ಬ್ರಿಟಿಷರಿಂದ ದೇಶ ಸ್ವತಂತ್ರವಾಗಬೇಕೆಂದು ಗಾಂಧಿ ಹೇಳುತ್ತಿದ್ದರು. ಆದರೆ ಅಂಬೇಡ್ಕರ್, ಮೊದಲು ನಮ್ಮ ಮನೆಯೊಳಗಿನವರಿಂದಲೇ ಸ್ವತಂತ್ರರಾಗಬೇಕು ಎಂದು ವಾದಿಸುತ್ತಿದ್ದರು. ಇವರೀರ್ವರನ್ನು ಬೇರೆ-ಬೇರೆಯಾಗಿ ಹಲವರು ಕಂಡಿದ್ದಾರೆ. ಆದರೆ ವಾಸ್ತವದಲ್ಲಿ ಇವರಿಬ್ಬರೂ ದಾಸ್ಯದ ವಿರುದ್ಧ ಮತ್ತು ಸ್ವಾತಂತ್ರದ ಪರವಾಗಿದ್ದವರು. ಇಬ್ಬರಿಗೂ ರೈಲು ಪ್ರಯಾಣವೆ ಪ್ರಮುಖ ತಿರುವಾಗಿತ್ತು.”
“ರಾಜಕೀಯ ಸೂಕ್ಷ್ಮತೆಯನ್ನು ತಿಳಿದಿದ್ದ ಅಂಬೇಡ್ಕರ್, ರಾಜಕೀಯ ಜನನಾಯಕತ್ವಕ್ಕಿಂತ ಸಮೂಹ ಜನನಾಯಕತ್ವದ ಅಗತ್ಯವನ್ನು ಕಂಡುಕೊಂಡರು. ಬದಲಾವಣೆ ಎನ್ನುವುದು ತುಳಿತಕ್ಕೊಳಗಾದವರಿಂದ, ತಳ ಸಮುದಾಯದವರಿಂದ ಆರಂಭವಾಗಬೇಕು. ಆಗ ಮಾತ್ರ ಒಟ್ಟು ವ್ಯವಸ್ಥೆಯಲ್ಲಿ ನಾವು ಬಯಸುವ ಬದಲಾವಣೆ ತರಲು ಸಾಧ್ಯ ಎಂದು ಗಂಟಾಘೋಷವಾಗಿ ಹೇಳಿದರು. ಹಾಗಾಗಿಯೇ ಕಾರ್ಮಿಕರ ಪರ, ಮಹಿಳಾ ಪರ, ತಳ ಸಮುದಾಯದ ಪರ, ಜಾತಿ ನಿರ್ಮೂಲನೆ, ಆರ್ಥಿಕ ಸ್ವಾಯತ್ತತೆ ಎನ್ನುವ ಅಂಶಗಳನ್ನಿಟ್ಟುಕೊಂಡು ಹೋರಾಟ ಮಾಡಿದರು. ಅಂಬೇಡ್ಕರ್ ಇಂದು ಬದುಕಿದ್ದಿದ್ದರೂ ಸಹ ಇಂದಿನ ಪರಿಸ್ಥಿತಿಗೆ ತಕ್ಕಂತೆ ಚಿಂತಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಅಂಬೇಡ್ಕರ್ ಕೇಳಿದ ಹಲವು ಪ್ರಶ್ನೆಗಳಿಗೆ ಇಂದಿಗೂ ಉತ್ತರವಿಲ್ಲ. ಹಾಗಾಗಿ ಇಂಥಾ ಮೇರು ವ್ಯಕ್ತಿತ್ವದ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಧಾರಾವಾಹಿಯಾಗಿ ಪ್ರಸಾರ ಮಾಡುತ್ತಿರುವ ಜೀ ವಾಹಿನಿಗೂ ಮತ್ತು ಇದನ್ನು ಕಣ್ತುಂಬಿಕೊಳ್ಳುವ ಪ್ರೇಕ್ಷಕರಿಗೂ ಧನ್ಯವಾದಗಳು” ಎಂದು ಹೇಳಿದ್ದಾರೆ.
ಇತ್ತೀಚೆಗೆ ಕರ್ನಾಟಕದ ಜನರ ಮನೆಮಾತಾಗಿರುವ ಮಹಾನಾಯಕ ಧಾರಾವಾಹಿ ಕನ್ನಡ ಧಾರಾವಾಹಿಗಳ ಲೋಕದಲ್ಲಿ ಹೊಸ ದಾಖಲೆಯನ್ನೆ ನಿರ್ಮಿಸಿತ್ತು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ರಾಜ್ಯದಾದ್ಯಂತ ಜನಮನ್ನಣೆ ಗಳಿಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನಾಧಾರಿತ “ಮಹಾನಾಯಕ” ಧಾರಾವಾಹಿಗೆ ಡಬ್ಬಿಂಗ್ ವಿಭಾಗದಲ್ಲಿ ಜೀ ಕುಟುಂಬ ಪ್ರಶಸ್ತಿ ಲಭಿಸಿತ್ತು.
ಇದನ್ನೂ ಓದಿ: ಹೊಸ ಅಲೆ ಸೃಷ್ಟಿಸಿದ ‘ಮಹಾನಾಯಕ’ ಧಾರಾವಾಹಿ: ವರ್ಷದ ಅತ್ಯುನ್ನತ ಡಬ್ಬಿಂಗ್ ವಿಭಾಗದಲ್ಲಿ ಪ್ರಶಸ್ತಿ!
ಜೀ ಟಿವಿ ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಒಂದು ವಾರ ಕಾರಣಾಂತರಗಳಿಂದ ಧಾರವಾಹಿ ಪ್ರಸಾರವಾಗೇ ಇದ್ದಾಗ ಸಾವಿರಾರು ಜನ ಆಕ್ರೋಶ ವ್ಯಕ್ತಪಡಿಸುವ ಮಟ್ಟಿದೆ ಇದು ಜನರ ಮನಗೆದ್ದಿದೆ. ಕರ್ನಾಟಕದಾದ್ಯಂತ ಹಲವಾರು ಹಳ್ಳಿಗಳಲ್ಲಿ ಧಾರಾವಾಹಿ ಮತ್ತು ಅಂಬೇಡ್ಕರ್ರವರ ಬ್ಯಾನರ್ ಹಾಕಿ ಲಕ್ಷಾಂತರ ಜನ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.
ಇತ್ತೀಚೆಗೆ ಈ ಧಾರಾವಾಹಿಯನ್ನು ನಿಲ್ಲಿಸುವಂತೆ ಬೆದರಿಕೆಗಳು ಬರುತ್ತಿವೆ ಎಂದು ಜೀ ವಾಹಿನಿಯ ಮುಖ್ಯ ನಿರ್ವಾಹಕರಾಗಿರುವ ರಾಘವೇಂದ್ರ ಹುಣಸೂರು ಹೇಳಿದ್ದರು.
ಜಾಗೃತರಾಗಿ, ಚಿಂತಿಸಿ, ಒಂದಾಗಿ- ಡಾ.ಬಿ.ಆರ್.ಅಂಬೇಡ್ಕರ್
“ಮಹಾನಾಯಕ ಧಾರಾವಾಹಿಯ ಪ್ರಸಾರವನ್ನು ನಿಲ್ಲಿಸುವಂತೆ ಮಧ್ಯರಾತ್ರಿಯಲ್ಲಿ ತುಂಬಾ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ಇದು ಬೆದರಿಕೆಯಂತೆ ಕಾಣುತ್ತಿದೆ. ಆದರೆ ವೈಯಕ್ತಿಕವಾಗಿ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮಹಾನಾಯಕ ಮುಂದುವರೆಯುತ್ತದೆ. ಜೊತೆಗೆ ಇದು ನಮ್ಮ ಹೆಮ್ಮೆಯಾಗಿದ್ದು, ಇದರಲ್ಲಿ ವೈಯಕ್ತಿಕ ಪ್ರೀತಿಯೂ ಸೇರಿದೆ. ಇದನ್ನು ಒಂದು ಸಮಸ್ಯೆ ಎಂದು ನೀವು ಪರಿಗಣಿಸಿದರೆ, ವಾಸ್ತವದಲ್ಲಿ ಸಮಾಜಕ್ಕೆ ನೀವೇ ಒಂದು ಸಮಸ್ಯೆ! ಜೈ ಭೀಮ್” ಎಂದು ಟ್ವೀಟ್ ಮಾಡಿದ್ದರು.
ಬೆದರಿಕೆ ಕರೆಗಳ ವಿರುದ್ಧ ಕರ್ನಾಟಕದಾದ್ಯಂತ ವ್ಯಾಪಕ ಪ್ರತಿರೋಧವೂ ವ್ಯಕ್ತವಾಗಿತ್ತು.
ಇದನ್ನೂ ಓದಿ: ಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ
Good to see some things going on here,
Keep me posted on the news.
Thanks you