ಮುಂಬೈನ ದಾದರ್ ಪ್ರದೇಶದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಮನೆ ‘ರಾಜ್ಗೃಹ’ ಮೇಲೆ ಇಬ್ಬರು ಅಪರಿಚಿತ ಕಿಡಿಗೇಡಿಗಳು ಮಂಗಳವಾರ ಸಂಜೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ. ಮನೆಯ ಕಿಟಕಿ ಗಾಜುಗಳು ಮತ್ತು ಸಿಸಿಟಿವಿ ಕ್ಯಾಮೆರ ಮೇಲೆ ಮನಬಂದಂತೆ ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಮನೆ ಮುಂದಿನ ಗಿಡಗಳನ್ನು ಕಿತ್ತೆಸೆದು ಚೆಲ್ಲಾಪಿಲ್ಲಿ ಮಾಡಲಾಗಿದೆ.
“ರಾಜ್ಗೃಹದ ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ವಸ್ತುಗಳನ್ನು ಧ್ವಂಸ ಮಾಡಲು ಇಬ್ಬರು ಪ್ರಯತ್ನಿಸಿದ್ದಾರೆ ಎಂಬುದು ನಿಜ. ಪೊಲೀಸರು ಪರಿಶೀಲಿಸುತ್ತಿದ್ದಾರೆ. ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ ಮತ್ತು ವಿಚಾರಣೆ ನಡೆಯುತ್ತಿದೆ” ಎಂದು ಡಾ.ಅಂಬೇಡ್ಕರ್ ಅವರ ಮೊಮ್ಮಗ ಮತ್ತು ವಂಚಿತ್ ಬಹುಜನ ಅಗಾಡಿ ಮುಖಂಡ ಪ್ರಕಾಶ್ ಅಂಬೇಡ್ಕರ್ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಘಟನೆಯನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ತೀವ್ರವಾಗಿ ಖಂಡಿಸಿದ್ದು, ಪೊಲೀಸರು ಈ ಪ್ರಕರಣವನ್ನು ಆದ್ಯತೆಯ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಅಪರಾಧಿಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಮನೆ ‘ರಾಜ್ಗೃಹ’ ಮೇಲಿನ ವಿಧ್ವಂಸಕ ಕೃತ್ಯಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಇದು ದುಷ್ಟ ಮನೋಭಾವದ ಸಮಾಜ ವಿರೋಧಿ ಕೃತ್ಯವಾಗಿದೆ. ಪೊಲೀಸರು ತಕ್ಷಣ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರ ಕೆಲಸ ಮತ್ತು ಸಿದ್ಧಾಂತವು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಜನರಲ್ಲಿರುವ ಈ ನಂಬಿಕೆಯನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.
ಅಂಬೇಡ್ಕರ್ರವರ ಹಿಂದಿನ ಮನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಿಡಿಗೇಡಿಗಳು ಓಡಿಹೋಗುವ ಮೊದಲು ಕಾಂಪೌಂಡ್ನಲ್ಲಿದ್ದ ಹೂವಿನ ಮಡಿಕೆಗಳನ್ನು ಒಡೆಯುವುದನ್ನು ತೋರಿಸುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆಯ ಕುರಿತು ಮಾತುಂಗ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದಾದರ್ನ ಹಿಂದೂ ಕಾಲೋನಿಯಲ್ಲಿರುವ ಎರಡು ಅಂತಸ್ತಿನ ಪಾರಂಪರಿಕ ಬಂಗಲೆಯಲ್ಲಿ ಅಂಬೇಡ್ಕರ್ ಮ್ಯೂಸಿಯಂ ಇದೆ, ಅಲ್ಲಿ ಬಾಬಾಸಾಹೇಬರ ಪುಸ್ತಕಗಳು, ಭಾವಚಿತ್ರ, ಚಿತಾಭಸ್ಮ ಮತ್ತು ಹಡಗುಗಳು ಕಲಾಕೃತಿಗಳು ಇವೆ.
ಪ್ರಕಾಶ್ ಅಂಬೇಡ್ಕರ್ ಅವರ ಕುಟುಂಬ ಸದಸ್ಯರು ಸಹ ಈ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲಿ ಹೆಚ್ಚಿನ ಭಾಗವನ್ನು ಡಾ. ಅಂಬೇಡ್ಕರ್ ಅವರ ಪುಸ್ತಕಗಳು ಮತ್ತು ಇತರ ವಸ್ತುಗಳಿಗೆ ವಸ್ತು ಸಂಗ್ರಹಾಲಯವಾಗಿ ಬಳಸಲಾಗುತ್ತಿದೆ.
ಈ ಘಟನೆಯು ಮಹಾರಾಷ್ಟ್ರದಲ್ಲಿ ದಲಿತರ ಪ್ರತಿಭಟನೆಯನ್ನು ಪ್ರಚೋದಿಸಬಹುದೆಂದು ಭಾವಿಸಿ ಪ್ರಕಾಶ್ ಅಂಬೇಡ್ಕರ್ ಅವರು ಶಾಂತಿಗಾಗಿ ಮನವಿ ಮಾಡಿದ್ದಾರೆ.
“ನಾನು ಎಲ್ಲರೂ ಶಾಂತವಾಗಿರಲು ಮನವಿ ಮಾಡುತ್ತೇನೆ. ಘಟನೆಯ ನಂತರ ಪೊಲೀಸರು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ರಾಜ್ಗೃಹ’ ಸುತ್ತ ಯಾರೂ ಗುಂಪುಗೂಡಬಾರದೆಂದು ನಾನು ವಿನಂತಿಸುತ್ತೇನೆ” ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರು ಅಪರಾಧಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಕನ್ನಡ ಖಾಸಗಿ ಚಾನೆಲ್ ಮಾಲಕರು ಪ್ರತಿ ಜಿಲ್ಲೆಯಲ್ಲಿ ಕೊರೊನಾ ಆಸ್ಪತ್ರೆ ಕಟ್ಟುತ್ತಿರುವುದು ನಿಜವೇ ?