ಮೇ ಅಂತ್ಯದ ವೇಳೆಗೆ ಕೊರೊನಾ ಪ್ರಕರಣಗಳು ಇಳಿಮುಖವಾಗಿರುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರುತ್ತಲೇ ಇವೆ. ಇದು ಮೋದಿಯವರ ವಿಫಲತೆಯನ್ನು ಸೂಚಿಸುವುದಿಲ್ಲವೇ? ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಾಗಲೇ ಲಾಕ್ಡೌನ್ ತೆರವುಗೊಳಿಸುತ್ತಿದ್ದಾರೆ. ಹಾಗಾದರೆ ಕೊರೊನಾ ಎದುರಿಸಲು ಮೋದಿಯವರ ಮುಂದಿನ ಕ್ರಮವೇನು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಾಲ್ಕು ಹಂತದ ಲಾಕ್ಡೌನ್ ಹೇರಿಯೂ ಕೊರೊನಾ ನಿಯಂತ್ರಿಸಲು ವಿಫಲವಾಗಿದ್ದಾರೆ. ಕೊರೊನಾ ವೈರಸ್ಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಲಾಕ್ಡೌನ್ ಸಡಿಲಿಸುತ್ತಿರುವ ಏಕೈಕ ದೇಶ ಭಾರತವಾಗಿದೆ. ಹಾಗಾದರೆ ಕೊರೊನಾ ವಿರುದ್ಧದ ಮುಂದಿನ ಕ್ರಮಗಳನ್ನು ಮೋದಿಯವರು ಘೋಷಿಸಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರಕ್ಕೆ ಮಾರ್ಕ್ಸ್ ನೀಡಲು ನಾನು ಪ್ರೊಫೆಸರ್ ಅಲ್ಲ. ರಾಜ್ಯಗಳಿಗೆ ಕೇಂದ್ರ ಸರ್ಕಾರ ನೆರವು ಸಿಗುತ್ತಿಲ್ಲ. ರಾಜ್ಯಗಳಿಗೆ ಆರ್ಥಿಕ ಪ್ಯಾಕೇಜ್ ಅವಶ್ಯಕತೆ ಇದೆ ಎಂದು ರಾಹುಲ್ ಗಾಂಧಿ ಅವರು ಒತ್ತಾಯಿಸಿದರು.
“ಜಿಡಿಪಿಯ ಶೇಕಡಾ 10 ರಷ್ಟು ಪ್ಯಾಕೇಜ್ ನೀಡಿದ್ದೇವೆ ಎಂದು ಪ್ರಧಾನಿ ಹೇಳಿದರು. ಆದರೆ ವಾಸ್ತವವೆಂದರೆ ಜಿಡಿಪಿಯ ಶೇಕಡಾ 1 ಕ್ಕಿಂತ ಕಡಿಮೆ ಹಣವನ್ನು ನೀಡಲಾಗುತ್ತಿದೆ ಮತ್ತು ಹೆಚ್ಚಾಗಿ ಸಾಲಗಳನ್ನು ನೀಡಲಾಗುತ್ತದೆ. ಯಾವುದೇ ಹಣವನ್ನು ಜನರಿಗೆ ನೀಡಲಾಗುತ್ತಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲಸ ಮತ್ತು ಕಾಸಿಲ್ಲದೆ ಪರಿತಪಿಸುತ್ತಿರುವ ಬಡವರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡದೆ ಬೇರೆ ಪರಿಹಾರ ಇಲ್ಲ. ದೇಶದ ಶೇಕಡಾ 50ರಷ್ಟು ಬಡ ಜನರಿಗೆ ತಿಂಗಳಿಗೆ 7,500 ಹಣ ವರ್ಗಾವಣೆ ಮಾಡಿ. ಅದೇ ರೀತಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬಲಿಷ್ಠಗೊಳಿಸಬೇಕು. ಇಲ್ಲದೆ ಇದ್ದರೆ ದೇಶ ದೊಡ್ಡ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಅವರು ಎಚ್ಚರಿಸಿದ್ದಾರೆ.
ನಾವು ನಮ್ಮ ದೇಶದ ಜನರನ್ನು ರಕ್ಷಿಸಬೇಕು. ಚೀನಾ ಗಡಿಯ ವಿಚಾರದಲ್ಲಿ ಎರಡು ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತಿದವೆ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಕೇಂದ್ರ ಸರ್ಕಾರ ನಡೆಸುತ್ತಿರುವವರು ವಾಸ್ತವವನ್ನು ದೇಶದ ಮುಂದಿಡಬೇಕು. ಜನರಿಗೆ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿರಬೇಕು ಎಂದು ಅವರು ಆಗ್ರಹಿಸಿದರು.
ಅಲ್ಲದೆ ರಾಹುಲ್ ಗಾಂಧಿಯವರು ಈ ಕುರಿತು ಟ್ವೀಟ್ ಸಹ ಮಾಡಿದ್ದಾರೆ. “ಎರಡು ತಿಂಗಳ ಹಿಂದೆ, ಲಾಕ್ ಡೌನ್ ಘೋಷಿಸುವಾಗ, ನಾವು 21 ದಿನಗಳಲ್ಲಿ ಕರೋನವೈರಸ್ ವಿರುದ್ಧ ಜಯ ಸಾಧಿಸುತ್ತೇವೆ ಎಂದು ಪ್ರಧಾನಿ ಹೇಳಿದ್ದರು. 60 ದಿನಕ್ಕೂ ಹೆಚ್ಚು ದಿನಗಳಾದರೂ ಸಹ ಪ್ರತಿದಿನ ರೋಗಿಗಳ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಅಂದರೆ ಲಾಕ್ಡೌನ್ಗೆ ಈ ವೈರಸ್ ಅನ್ನು ಸೋಲಿಸಲು ಸಾಧ್ಯವಾಗಿಲ್ಲ. ಹಾಗಾದರೆ ಸರ್ಕಾರಕ್ಕೆ ನನ್ನ ಪ್ರಶ್ನೆ ಮುಂದೆ ಏನು?” ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ವಿರುದ್ದ ಹೋರಾಡಲು ಮಹಾರಾಷ್ಟ್ರಕ್ಕೆ ವೈದ್ಯರ ತಂಡ ಕಳುಹಿಸಲಿರುವ ಕೇರಳ