Homeಕವನಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

ಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

- Advertisement -
- Advertisement -

ಮೊಳಗುತ್ತಿದೆ ಸೈರನ್!

ನಾನು
ಅಂದೇ ಹೇಳಿದ್ದೆ!
ಕಿರೀಟ ತೊಟ್ಟವರ ನಂಬದಿರಿ ಎಂದು!
ಜೀವ ಹಿಂಡುವ ರಕ್ತ ಹೀರುವ ಮಂದಿ
ನಮ್ಮ ನಿಮ್ಮಂತೆ ಬರುವುದಿಲ್ಲ!
ಕಿರೀಟ ತೊಟ್ಟಿಯೇ ಬರುತ್ತಾರೆ!
ಥೇಟ್ ಈಗ ಬಂದಿರುವ
ಅರೆಜೀವಿಯಂತೆ!
ಪೀಠವಿಲ್ಲದ ಅರಮನೆಯಲ್ಲಿ
ಕಿರೀಟಿ ರಾಜನದ್ದೆ ಆರ್ಭಟ
ನಿರ್ಗತಿಕ ವಲಸೆಗಾರರ ಬಡವರ
ಕೂಳಿಗೂ ಗತಿ ಇಲ್ಲ!
ಮಂದಗತಿಯ ಮೂರ್ಖ ರಾಜನಿಗೆ
ಕೇಳುವವರು ಯಾರು?
ಅಯ್ಯೋ ಹೇಳುವವರು ಯಾರು?
ಎಂದು ಗೊರವಂಕ ಕೂಗುತ್ತಿರುವಾಗ
ಗಲ್ಲಿಗಲ್ಲಿಗಳ ರಸ್ತೆಗಳಲ್ಲಿ
ಒಣಗಿ ಉದುರಿದ ಎಲೆಗಳ ತಳಗಳಲ್ಲಿ
ಹುಳದಂತೆ ಜನರು ಸಾಯುತ್ತಿರುವ ದೃಶ್ಯವನ್ನು
ತದೇಕ ಚಿತ್ತದಿಂದ ಕಂಬಳಿ ಹುಳುವೊಂದು
ಬರೆದು ದಾಖಲು ಮಾಡುತ್ತಿತ್ತು
“ಯಕಶ್ಚಿತ್ ಕಣ್ಣಿಗೆ ಕಾಣದ
ಅರೆಜೀವಿಯೊಂದರಿಂದ
ಮನುಷ್ಯರು ಉಸಿರುಗಟ್ಟಿ
ಸಾಯುತ್ತಿದ್ದಾರೆ ಅಯ್ಯೋ
ಮನುಷ್ಯರು ಉಸಿರುಗಟ್ಟಿ
ಸಾಯುತ್ತಿದ್ದಾರೆ”

ಮರದ ಮೇಲೆ ಕೂತ ಹಕ್ಕಿ
ಅಯ್ಯೋ ಅಯ್ಯೋ ಈ ಮನುಷ್ಯರಿಗೆ ಏನಾಗಿದೆ?
ಯಾಕ್ಹೀಗೆ ಮುಖಕ್ಕೆ ಮುಸುಕು ಹಾಕಿಕೊಂಡಿದ್ದಾರೆ!
ಕಲ್ಲು ಹೊಡೆಯುತ್ತಿದ್ದ ಕೈಗಳೇ ಕಾಣುತ್ತಿಲ್ಲವಲ್ಲ!
ಎಂದು ವ್ಯಂಗ್ಯವಾಗಿ ಚರಮಗೀತೆಯ ಹಾಡುತ್ತಿತ್ತು!
ಬೆಕ್ಕು, ನಾಯಿ, ಇರುವೆ ಮತ್ತು ಕೋಳಿ ಮಾತನಾಡಿಕೊಳ್ಳುತ್ತಿದ್ದವು!
ನೋಡಿದೆಯ ಬೆಕ್ಕಣ್ಣ
‘ನಮ್ಮ ಕುತ್ತಿಗೆಗೆ ಹಗ್ಗ ಜಡಿದು ಮೂಲೆಗೆ ಕಟ್ಟುತ್ತಿದ್ದ
ಈ ಮನುಷ್ಯರ ಪಾಡು ಇಂದು ಈಗ ಏನಾಗಿದೆಯೆಂದು?
ಕಾಲಕ್ಕೆ ಬೆಲೆ ಕಟ್ಟುವರುಂಟೆ?
ಕೆಲಸವಿಲ್ಲದ ಯುವಕರ ಗೋಣು
ನೇಣು ಕುಣಿಕೆಗೆ ಅಯ್ಯೋ ನೋಡಲಾಗುತ್ತಿಲ್ಲ!
ಕೆಲಸವೇ ಸಿಗುತ್ತಿಲ್ಲ!
ಗುಳೆ ಬಂದವರ ಪಾಡು
ಅವರ ಹಸಿವು ಯಾರಿಗೂ ಬೇಡ!’
ಎಂದು ಬೊಗಳಿತು ನಾಯಿ!
ಹೌದಣ್ಣ ಹೌದು
‘ತೋಳಕ್ಕೆ ಸಿಂಹದ ಬಣ್ಣ
ನಾಯಕನ ಬಣ್ಣ ಬಳಿದರೆ
ಎಷ್ಟು ದಿನ ತಾನೇ ಉಳಿದೀತು?
ಮಳೆ ಬಂದಾಗ ಕರಗಿ
ಬಿಸಿಲು ಹೆಚ್ಚಾದಾಗ ಒಣಗಿ
ಹೋಗಲೇಬೇಕಲ್ಲ!
ರಾಜನ ಸತ್ಯದ ಮಿಥ್ಯವು ಜನರಿಗೆ ತಿಳಿಯಲೆ ಬೇಕಲ್ಲ!
ಕ್ಕೊ ಕ್ಕೊ ಕ್ಕೊ ಎಂದು ಕೂಗಿತು ಕೋಳಿ!

ನಂಟು ಗಂಟಿನ ಹಂಗಿನೊಳಗೆ ಯಾವ
ಸಾಂಕ್ರಾಮಿಕ ರೋಗ ಬಂದರೇನು?
ಮನುಷ್ಯ ಬದಲಾಗುವನೇ?
ಇಲ್ಲ ಅವನು ಬದಲಾಗುವುದೇ ಇಲ್ಲ!
ಜಿಡ್ಡುಗಟ್ಟಿದೆ ಮೆದುಳು
ಮದ ಮತ್ಸರ ಮೋಹ ಸ್ವಾರ್ಥದಿಂದ!
ಹಸಿದ ಹೊಟ್ಟೆಗೆ ಅನ್ನ ಇಕ್ಕುವವರಿಲ್ಲ!
ತಿನ್ನುವವರು ರೋಗದ ಹೆಸರಿನಲ್ಲಿ
ಮತ್ತಷ್ಟು ಮಗದಷ್ಟು ತಿನ್ನುತ್ತಲೆ ಇದ್ದಾರೆ!
ಸಾಯುವವರು ಮಾತ್ರ ಸಾಯುತ್ತಲೆ ಇದ್ದಾರೆ!
ಇದಕ್ಕೆ ಕೊನೆ ಎಲ್ಲಿದೆ ಇಲ್ಲಿ?
ಎಂದು ಬುಸುಗುಟ್ಟಿತು ಹಾವು ಪೊಟರೆಯಲಿ!

ಕಾಲದ ಮೃಗ ಓಡುತ್ತಿದೆ ಓಡುತ್ತಿದೆ
ತನ್ನ ಬೆನ್ನ ತಾನೇ ಕಾಣದಂತೆ!
ಮೃಗ ಖಗಗಳು ವ್ಯಂಗ್ಯವಾಡುತ್ತಿವೆ!
ಅಪರೂಪಕ್ಕೆ ಕೇಳುತ್ತಿದ್ದ
ಆ್ಯಂಬುಲೆನ್ಸಿನ ಸೈರನ್ ಸದ್ದು
ಈಗ ನಿತ್ಯದ ಮಂತ್ರವಾಗಿದೆ!
ರಾಮ ಮಂದಿರದ ಭಜನೆಯಂತೆ
ಭಗವದ್ಗೀತೆಯ ಶ್ಲೋಕದಂತೆ!
ಅಲ್ಲಾವುವಿನ ಆದೇಶದಂತೆ
ಕುರಾನಿನ ವಚನದಂತೆ!
ಶಿಲುಬೆ ಮೇಲಿನ ಅಹಿಂಸಾ ಮೂರ್ತಿಯಂತೆ
ಬೈಬಲ್ಲಿನ ವಾಣಿಯಂತೆ!
ಬುದ್ಧನ ಉಪದೇಶದಂತೆ
ಹೊರಗೆ ಹೆಜ್ಜೆ ಇಟ್ಟರೆ ಸಾಕು ಸೈರನ್ ‌ಮೊಳಗುತ್ತಿದೆ
‘ಎಚ್ಚರ‌ ಮನುಷ್ಯ ಎಚ್ಚರ
ನಿನಗಿನ್ನೂ ಬಹಳ ಸಮಯವಿದೆ ಬದಲಾಗು’ ಎಂದು!

ಶಂಕರ್ ಸಿಹಿಮೊಗೆ

(ಮೂಲತಃ ಶಿವಮೊಗ್ಗದವರಾದ ಶಂಕರ್ ಸಿಹಿಮೊಗೆಯವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ.)


ಇದನ್ನೂ ಓದಿ: ಕವನ | ಅಂತಿಮ ವಲಸೆಯ ಮುನ್ನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...